ಅರಣ್ಯ ಹಕ್ಕು ತಿರಸ್ಕೃತರ ಮರು ವಿಚಾರಣೆ
•ದಾಖಲಾತಿ ಸಲ್ಲಿಕೆಗೆ ರೈತರಿಗೆ ಮತ್ತೂಂದು ಅವಕಾಶ•ದಾಖಲೆಗಳ ಕ್ರೊಡೀಕರಿಸುವುದೇ ಸವಾಲು
Team Udayavani, May 26, 2019, 11:11 AM IST
ಗದಗ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಅರಣ್ಯ ಹಕ್ಕು ಅರ್ಜಿದಾರರ ಮರು ವಿಚಾರಣೆಗೆ ಕಾದು ಕುಳಿತಿರುವ ರೈತರು.
ಗದಗ: ತಲೆತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು, ದಶಕಗಳ ಕಾಲ ಸಾಗುವಳಿ ಹಕ್ಕು ಪತ್ರಗಳಿಗಾಗಿ ಹೋರಾಡಿದ ರೈತಾಪಿ ಜನರಿಗೊಂದು ಸಿಹಿ ಸುದ್ದಿ. ಈಗಾಗಲೇ ಅರಣ್ಯ ಹಕ್ಕು ಪತ್ರಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡಿದ್ದವರಿಗೆ ಮರು ವಿಚಾರಣೆಗಾಗಿ ಕರೆಯಲಾಗಿದೆ. ಆದರೆ, ದಾಖಲೆಗಳನ್ನು ಕ್ರೊಢೀಕರಿಸುವುದೇ ಅನ್ನದಾತನಿಗೆ ಸವಾಲಿನ ಕೆಲಸವಾಗಿದೆ.
ಹೌದು, ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ಅಜ್ಜ, ಮುತ್ತಜ್ಜಗಳಿಂದ ಸಾಗುವಳಿ ಮಾಡಿಕೊಂಡು ಅನೇಕ ಕುಟುಂಬಗಳು ಉಪಜೀವನ ಸಾಗಿಸುತ್ತಿವೆ. ಅಂಥವರಿಗೆ ಸಾಗುವಳಿ ಹಕ್ಕು ಪತ್ರ ವಿತರಿಸಬೇಕು ಎಂದು ಅನೇಕರು ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಅವರಲ್ಲಿ ಕೆಲವರಿಗೆ ಹಕ್ಕು ಪತ್ರ ಕೈಸೇರಿದ್ದು, ಇನ್ನೂ ಅನೇಕರಿಗೆ ದಾಖಲಾತಿಗಳಿಲ್ಲದೇ ಅರ್ಜಿ ತಿರಸ್ಕೃತಗೊಂಡಿದ್ದರಿಂದ ಹಕ್ಕುಪತ್ರಗಳಿಂದ ವಂಚಿತರಾಗಿದ್ದಾರೆ. ಅಂಥ ಅರ್ಜಿಗಳ ಮರು ಪರಿಶೀಲನೆಗೆ ಕೈಗೆತ್ತಿಕೊಂಡಿದ್ದರಿಂದ ಅರಣ್ಯ ಭೂಮಿ ಸಾಗುವಳಿದಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಮರು ಪರಿಶೀಲನೆ ಏಕೆ?: ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 ಮತ್ತು 2007 ಅನ್ವಯ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಸುಪ್ರಿಂಕೋರ್ಟ್ ಮಧ್ಯಂತರ ತಡೆಯಾಜ್ಞೆಯಲ್ಲಿ ನೈಸರ್ಗಿಕ ನ್ಯಾಯ ಪಾಲನೆಯಯನ್ನು ಮಾಡುವಂತೆ ನಿರ್ದೇಶಿಸಿದೆ. ಅದರನ್ವಯ ಈಗಾಗಲೇ ರೈತರಿಗೆ ವಿಚಾರಣೆ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ವಿಚಾರಣೆ ದಿನಾಂಕ ಗೊತ್ತು ಪಡಿಸಿ, ಅವರ ತಿರಸ್ಕೃತ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈತರಿಗೆ ನೀಡಲಾದ ನೋಟಿಸ್ನಲ್ಲಿ ಉಲ್ಲೇಖೀಸಿದೆ. ಈ ಕುರಿತು ತಿರಸ್ಕೃತ ಅರ್ಜಿದಾರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 15 ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿದ್ದು, ಮೇ 24 ರಿಂದ ಜೂ. 1ರ ವರೆಗೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧ್ಯಕ್ಷತೆಯಲ್ಲಿ ಮರು ವಿಚಾರಣೆ ನಡೆಯಲಿದ್ದು, ಜಿಲ್ಲೆಯಲ್ಲಿ ತಿರಸ್ಕೃತಗೊಂಡಿರುವ 585 ಅರ್ಜಿದಾರರಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿಲಾಗಿದೆ.
ಒಬ್ಬರಿಗೂ ಮಂಜೂರಾಗಿಲ್ಲ!: ಮೇ 24ರಿಂದ ನಡೆಯುತ್ತಿರುವ ಮರು ವಿಚಾರಣೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಾಗುವಳಿದಾರರು ಹಾಜರಾಗಿದ್ದಾರೆ. ಆದರೆ, ನಿಯಮಾವಳಿಯಂತೆ ರೈತರು ಸಾಗುವಳಿ ಮಾಡುತ್ತಿರುವ ಬಗ್ಗೆ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ಮೂರು ತಲೆಮಾರುಗಳಿಂದ ಅದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಸಾಗುವಳಿದಾರನ ಪರ 75 ವರ್ಷದ ವ್ಯಕ್ತಿಯೊಬ್ಬರು ಮೌಖೀಕ ಹೇಳಿಕೆಯನ್ನು ಕೊಡಿಸಿದರೂ, ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವುದನ್ನು ದೃಢಪಡಿಸಲಾಗದೇ ಪರದಾಡುವಂತಾಗಿದೆ. ಅರಣ್ಯ ಹಕ್ಕು ಸಮಿತಿ ನಿಯಮಾವಳಿಯಂತೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಳಿದಾರರನ ವಿರುದ್ಧ ಅರಣ್ಯ ಇಲಾಖೆ ದಾಖಲಿಸಿರುವ ಪೊಲೀಸ್ ಕೇಸ್, ಬಂಧಿಸಿರುವ ಬಗ್ಗೆ ದಾಖಲಾತಿ, ಕಂದಾಯ ತೆರಿಗೆ ಪಾವತಿ, ನೀರಾವರಿ ಮತ್ತಿತರೆ ಯೋಜನೆಗಳಡಿ ನಿರಾಶ್ರೀತಗೊಂಡಿರುವ ಬಗ್ಗೆ ದಾಖಲಾತಿ ಸಲ್ಲಿಸಬಹುದಾಗಿದೆ. ಆದರೆ, ಈಗಾಗಲೇ ಅರ್ಜಿ ತಿರಸ್ಕೃತಗೊಂಡಿರುವ ಪೈಕಿ ಕೆಲವರಲ್ಲಿ ಸೂಕ್ತ ದಾಖಲೆಗಳಿಲ್ಲದಿದ್ದರೆ, ಇನ್ನುಳಿದಂತೆ ಬಹುತೇಕರು ಕೃಷಿ ಜಮೀನು, ಸರಕಾರಿ ನೌಕರಿ ಹೊಂದಿದ್ದಾರೆ. ಇಲ್ಲವೇ ಇತ್ತೀಚೆಗೆ ಸಾಗುವಳಿ ಮಾಡುತ್ತಿರುವವರೂ ಇರಬಹುದು ಎಂದು ಹೇಳಲಾಗಿದೆ. ಹೀಗಾಗಿ ಮೂರು ತಲೆಮಾರುಗಳಿಂದ ಉಪಜೀವನಕ್ಕಾಗಿ ಇದೇ ಭೂಮಿಯನ್ನು ಅವಲಂಬಿಸಿದ್ದೇವೆ ಎಂಬುದು ದೃಢಪಡಿಸಲಾಗುತ್ತಿಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ