ಸರ್ಕಾರಿ ಕನ್ಯಾ ಪ್ರೌಢಶಾಲೆ ಸುತ್ತ ಕಸದ ರಾಶಿ
ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ
Team Udayavani, Sep 21, 2019, 7:28 PM IST
ಗುರುಮಠಕಲ್: ವಿದ್ಯಾ ಮಂದಿರಕ್ಕೆ ಕೈ ಮುಗಿದು ಒಳಗೆ ಬನ್ನಿ ಎನ್ನುವ ಘೋಷಣೆ ಬದಲು ಇಲ್ಲಿನ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶಾಲೆಯೊಳಗೆ ದಿನನಿತ್ಯ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗೋಡೆ ಸುತ್ತ ಕಸದ ರಾಶಿ ಬಿದ್ದಿರುವುದು ಇದಕ್ಕೆಲ್ಲ ಕಾರಣ. ಮೂತ್ರ ವಿಸರ್ಜನೆ ಮುಂತಾದ ಕಾರಣಗಳಿಂದ ಗಬ್ಬು ವಾಸನೆ ಬೀರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶಾಲೆಯೊಳಗೆ ಹೋಗಿ ಓದುವ ದುಸ್ಥಿತಿ ಬಂದಿದೆ.
ಸುತ್ತಮುತ್ತಲಿನ ಜನರು ತ್ಯಾಜ್ಯ ಪದಾರ್ಥಗಳನ್ನು ಶಾಲೆ ಗೋಡೆ ಮುಂದೆ ಚಿಲ್ಲಾಪಿಲ್ಲಿಯಾಗಿ ಚೆಲ್ಲಿ ಗಲೀಜು ಮಾಡುತ್ತಾರೆ. ಅಲ್ಲಿಯೇ ವಾಸವಾಗಿರುವ ಹಂದಿಗಳು ರಾಶಿ ಕೆದಕುವುದರಿಂದ ರಸ್ತೆ ಪೂರ್ಣ ಗಲೀಜು ಆಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ನರಕ ಅನುಭವಿಸುವಂತಾಗುತ್ತಿದೆ. ರಸ್ತೆ ಮೇಲೆ ಜನರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಸಲ ಅಲ್ಲಿನ ಬಡವಾಣೆ ಜನರಿಗೆ ಮನವಿ ಮಾಡಿದ್ದೇವೆ. ಅಲ್ಲದೇ ಪೊಲೀಸ್ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಸುಮ್ಮನೆ ಇರಬೇಕಾಗಿದೆ ಎಂದು ಶಾಲೆ ಮುಖ್ಯ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಪ್ರೌಢಶಾಲೆ ಆಗಿರುವುದರಿಂದ ಸಂಬಂಧಿಸಿದ ಅಧಿಕಾರಗಳು ಮತ್ತು ಜನಪ್ರತಿನಿ ಧಿಗಳು ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.