ರಾಜಿ ಸಂಧಾನದಿಂದ ಪ್ರಕರಣ ಇತ್ಯರ್ಥಪಡಿಸಿ
Team Udayavani, Oct 23, 2019, 6:26 PM IST
ಗುರುಮಠಕಲ್: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ. ನಿತ್ಯ ಜೀವನದಲ್ಲಿ ಕಾನೂನು ಅರಿವಿನ ಕೊರತೆಯಿಂದ ಸಮಸ್ಯೆಗಳಾಗುತ್ತಿವೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾ ಧೀಶ ಶಿವನಗೌಡ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಯಂ ಜನತಾ ನ್ಯಾಯಾಲಯ, ಜನತಾ ನ್ಯಾಯಾಲಯ ಹಾಗೂ ಮಧ್ಯಸ್ಥಿಕೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ಪ್ರಕರಣಗಳು ವಾದ-ಪ್ರತಿವಾದಗಳ ನಡುವೆ ಸೇಡಿನ ಮನಸ್ಥಿತಿಗೆ ಕಾರಣವಾಗುತ್ತಿವೆ. ಪ್ರಕರಣಗಳು ಇತ್ಯರ್ಥವಾಗಲು ದೀರ್ಘಾವಧಿ ಸಮಯ ಬೇಕಾಗುತ್ತದೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಗೆ ಒತ್ತು ನೀಡಲು ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿ, ಕಾನೂನು ಅರಿವು ಇಲ್ಲ ಎನ್ನುವ ಕಾರಣಕ್ಕೆ ಶಿಕ್ಷೆ ಕಡಿಮೆ ಮಾಡಲು ಆಗುವುದಿಲ್ಲ ಎಂದು ಹೇಳಿದರು. ಹಿರಿಯ ವಕೀಲ ಭೀಮರಾಯ ಬಿ. ಕಿಲ್ಲನಕೇರ ಹಾಗೂ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ, ಜನನ-ಮರಣಗಳ ನೋಂದಣಿ ಹಾಗೂ ಪ್ರಮಾಣ ಪತ್ರಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಚಾರ್ಯ ಭೀಮರೆಡ್ಡಿ ಉಟ್ಕೂರು, ವಕೀಲರಾದ ಬಸವರಾಜ ಪಾಟೀಲ ಕ್ಯಾತನಾಳ, ನಾಗಯ್ಯ ಗುತ್ತೇದಾರ, ಆನಂದರಾವ್ ನಿರೇಟಿ, ತಹಶೀಲ್ದಾರ್ ಶ್ರೀಧರಚಾರ್ಯ, ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟಿಮನಿ ಇದ್ದರು.