ಯದ್ಲಾಪುರದಲ್ಲಿಲ್ಲ ವೈದ್ಯರು!
Team Udayavani, Nov 25, 2019, 4:10 PM IST
ಚೆನ್ನಕೇಶವುಲು ಗೌಡ
ಗುರುಮಠಕಲ್: ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇದ್ದು, ಸಾಂಕ್ರಾಮಿಕ ರೋಗ ಹೆಚ್ಚಿರುವ ಸಮಯದಲ್ಲೇ ಕಾಯಂ ವೈದ್ಯಾಧಿಕಾರಿ ಇಲ್ಲದೆ ಸಮಸ್ಯೆ ಉಂಟಾಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುರುಮಠಕಲ್ ತಾಲೂಕು ಯದ್ಲಾಪುರದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರದ ಪರಿಸ್ಥಿತಿ ಇದಾಗಿದೆ. ಅಂದಾಜು 2000ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕಳೆದ 6 ತಿಂಗಳಿಂದ ಯಾವೊಬ್ಬ ವೈದ್ಯರು ಆರೋಗ್ಯ ಕೇಂದ್ರದ ಬಾಗಿಲು ತೆರೆದು ಇಲ್ಲಿಯವರೆಗೆ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಆಸ್ಪತ್ರೆ ನಿರ್ಜನ ಪ್ರದೇಶದಂತಾಗಿದೆ. ಅಧಿಕಾರಿಗಳನ್ನು ಕೇಳಿದರೆ ಒಂದು ವಾರದೊಳಗ ವೈದ್ಯರು ಬರುತ್ತಾರೆ ಎಂದು ಹೇಳುತ್ತಾರೆ.
ಯದ್ಲಾಪುರ ಜನರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ವೈದ್ಯರೇ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಆರೋಗ್ಯ ಕೇಂದ್ರ ತೆರೆಯದಂತೆ ಬಾಗಿಲು ಮುಚ್ಚಿ ಪ್ರತಿರೋಧ ಮಾಡುತ್ತಿರುವುದು ತಿಳಿದು ಬಂದಿದೆ. ವೈದ್ಯರು ನಿಯೋಜಯಾಗಿ ಆರೋಗ್ಯ ಕೇಂದ್ರ ತೆರೆದು ಜನರಿಗೆ ಚಿಕಿತ್ಸೆ ನೀಡಬೇಕು. ಆರೋಗ್ಯ ಕೇಂದ್ರದಲ್ಲಿ ಯಾರು ವೈದ್ಯರು ಬಾರದಿರುವುದರಿಂದ ಸ್ಥಳೀಯ ಜನರಿಗೆ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಸಂಜೆ ಹೊತ್ತಿನಲ್ಲಿ ಕುಡುಕರು ಹಾವಳಿ ಮಾಡುತ್ತಿದ್ದಾರೆ. ಎಲ್ಲ ಸಮಸ್ಯೆ ನಿವಾರಣಗೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದು ಎಂಎಲ್ಎಚ್ಪಿ ಕಾಂಟಾಕ್ಟ್ ಬೇಸಡ್ ಇದೆ. ಎರಡು ಮೂರು ದಿಗಳಲ್ಲಿ ವೈದ್ಯರನ್ನು ನಿಯೋಜಿಸಿ ಜನರಿಗೆ ಚಿಕಿತ್ಸೆ ಆರಂಭಿಸಲಾಗುವುದು.
ಮಿರಾಜ್ ಪಾಟೀಲ,
ಹಿರಿಯ ಆರೋಗ್ಯ ಸಹಾಯಕ ಗಾಜರಕೋಟ
ನಾವು ಬಡವರು. ಕೂಲಿ ಕೆಲಸ ಮಾಡಿ ಬದುಕುವ ಜನ. ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಮಾಡಿಕೊಳ್ಳುವಷ್ಟು ಹಣ ನಮ್ಮಲ್ಲಿ ಇಲ್ಲ. ಇಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದರೆ ನಮ್ಮಂತಹ ಬಡ ಜನರಿಗೆ ಆರೋಗ್ಯ ಕೇಂದ್ರ ವರದಾನವಾಗುತ್ತದೆ. ಬೇಗ ವೈದ್ಯರನ್ನು ನಿಯೋಜಿಸಬೇಕು.
.ನರಸಿಂಗಪ್ಪ, ಗ್ರಾಮಸ್ಥ