ಮೈತ್ರಿ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ
ಮೋದಿ ಕಾರ್ಯಗಳೇ ಶ್ರೀರಕ್ಷೆ•ಕೇಂದ್ರ ಸರ್ಕಾರದ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಿ
Team Udayavani, Jun 30, 2019, 11:24 AM IST
ಹರಪನಹಳ್ಳಿ: ಅಭಿನಂದನಾ ಸಮಾರಂಭದಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ವೈ.ದೇವೇಂದ್ರಪ್ಪ ಅವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಹರಪನಹಳ್ಳಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ನೂತನ ಸಂಸದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಯಾರು ಚಿಂತಿಸುತ್ತಿಲ್ಲ. ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಬ್ಬರಿಗೊಬ್ಬರು ತಮ್ಮದೇ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯುವುದಿಲ್ಲ, ತಮ್ಮ ಕಾಲನ್ನು ತಾವೇ ಎಳೆದುಕೊಳ್ಳುತ್ತಿದ್ದಾರೆ ಎಂದರು.
ಹರಪನಹಳ್ಳಿ ತಾಲೂಕಿನ ಜನತೆ ನನಗೆ 22 ಸಾವಿರ ಅಂತರ ಮತದಿಂದ ಬೆಂಬಲಿಸಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಬಳ್ಳಾರಿ-ದಾವಣಗೆರೆ ನನ್ನ ಎರಡು ಕಣ್ಣುಗಳು ಇದ್ದಂತೆ. ಪ್ರಧಾನಿ ಮೋದಿಯವರ ಜನಪರ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಹರಿಹರ-ಕೊಟ್ಟೂರು-ಹೊಸಪೇಟೆ ಮಾರ್ಗವಾಗಿ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಆಗಸ್ಟ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಚಿತ್ರದುರ್ಗದಿಂದ ಕೂಡ್ಲಗಿ-ಹಗರಿ ಬೊಮ್ಮನಹಳ್ಳಿ- ಮರಿಯಮ್ಮನಹಳ್ಳಿ-ಹೊಸಪೇಟೆ ಮಾರ್ಗವಾಗಿ ಬಳ್ಳಾರಿ, ಗದಗ, ಸೊಲ್ಲಾಪುರಕ್ಕೆ ತಲುಪಲು ಅನುಕೂಲವಾಗುವಂತೆ ನೂತನ ರೈಲು ಮಾರ್ಗಕ್ಕೆ ಗೆಜೆಟ್ ಮಂಡನೆಗೆ ಶಿಫಾರಸು ಮಾಡಲಾಗಿದೆ. ಹರಿಹರ ಮಾರ್ಗವಾಗಿ ಬಳ್ಳಾರಿಗೆ ಇಂಟರ್ಸಿಟಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ರಾಜ್ಯದಲ್ಲಿನ ಮೈತ್ರಿ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಪತನವಾಗಲಿದೆ. ದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅದರಲ್ಲೂ ಹರಪನಹಳ್ಳಿ ತಾಲೂಕಿನಿಂದ ಸಂಸದರಿಗೆ 22 ಸಾವಿರ ಅಂತರ ಮತ ನೀಡಿದ್ದೇವೆ. ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ಸೇರಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಣ ಬಿಡುಗಡೆ ಆಗುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಜಿಪಂ ಸದಸ್ಯೆ ಕೆ.ಆರ್. ಜಯಶೀಲಾ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಸಣ್ಣ ಹಾಲಪ್ಪ, ಟಿ.ಲೋಕೇಶ್, ಬಿ.ಮೆಹಬೂಬ್ ಸಾಬ್, ಚಿರಸ್ತಹಳ್ಳಿ ಬಸವರಾಜಪ್ಪ, ಸತ್ಯನಾರಾಯಣ, ಎಸ್.ಪಿ.ಲಿಂಬ್ಯಾನಾಯ್ಕ, ತೆಲಿಗಿ ಕರಿಬಸಪ್ಪ, ಬಿ.ವೈ. ವೆಂಕಟೇಶ್ ನಾಯ್ಕ, ಪುರಸಭೆ ಸದಸ್ಯರಾದ ರೊಕ್ಕಪ್ಪ, ಹರಾಳು ಅಶೋಕ, ಎಸ್.ಕೆ.ಜಾವೀದ್, ಕರೆಗೌಡ, ತಳವಾರ ಮನೋಜ್, ರಾಘವೇಂದ್ರಶೆಟ್ಟಿ, ಮತ್ತಿಹಳ್ಳಿ ಶಿವಣ್ಣ, ಎಂ.ಮಲ್ಲೇಶ್ ಇತರರು ಉಪಸ್ಥಿತರಿದ್ದರು.