ಉಚ್ಚೆಂಗೆಮ್ಮ ನಿನ್ನಾಲ್ಕು ಉಧೋ..ಉಧೋ…
ಬೇವಿನುಡುಗೆ, ಪಡ್ಲಿಗಿ ತುಂಬಿಸುವುದು ಸೇರಿದಂತೆ ವಿವಿಧ ಹರಕೆ ತೀರಿಸಿದ ಭಕ್ತರು
Team Udayavani, Apr 8, 2019, 1:18 PM IST
ಹರಪನಹಳ್ಳಿ: ಉಚ್ಚೆಂಗೆಮ್ಮದೇವಿ ಜಾತ್ರೋತ್ಸವ ಅಂಗವಾಗಿ ಹಾಲಮ್ಮನ ತೋಪಿನಲ್ಲಿ ಬೇವಿನುಡುಗೆ ಹರಕೆ ತೀರಿಸಿದ ಭಕ್ತರು.
ಹರಪನಹಳ್ಳಿ: ಮಧ್ಯ ಕರ್ನಾಟಕದ ಐತಿಹಾಸಿಕ ಪ್ರಸಿದ್ಧಿಯ ಶಕ್ತಿ ದೇವತೆಯ ಕೇಂದ್ರವಾಗಿರುವ ತಾಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬೆಯ ಜಾತ್ರೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಿತು.
ಉಚ್ಚಂಗೆಮ್ಮ, ಉತ್ಸವಾಂಬೆ, ಹಾಲಮ್ಮ…ಹೀಗೆ ಹಲವು ಬಿರುದಾವಳಿ ಹಾಗೂ ಪವಾಡಗಳ ಮೂಲಕ ಲಕ್ಷಾಂತರ ಭಕ್ತರ ಆರಾಧ್ಯದೈವವಾದ ಉಚ್ಚಂಗೆಮ್ಮದೇವಿ ಜಾತ್ರೆ ಅಂಗವಾಗಿ ಕುಂಕುಮಾರ್ಚನೆ, ಎಲೆಪೂಜೆ, ಕ್ಷೀರಾಭಿಷೇಕ ಹಾಗೂ ಓಕುಳಿ
ಸೇರಿದಂತೆ ವಿವಿಧ ಉತ್ಸವ ಹಾಗೂ ಪೂಜಾ ವಿಧಿ-ವಿಧಾನಗಳು ಮಾ. 4ರಿಂದಲೇ ಆರಂಭವಾಗಿದ್ದು, ಆನೆಹೊಂಡ ಉತ್ಸವ,
ಗಂಗೆ ಪೂಜೆ ಮಾಡುವ ಮೂಲಕ ದೇವಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಳು.
ದಾವಣಗೆರೆ ಜಿಲ್ಲೆಯಲ್ಲದೆ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಗದಗ ಹಾಗೂ ಹಾವೇರಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ್ದ ಲಕ್ಷಾಂತರ ಭಕಉತ್ಸವಾಂಬೆಯ ಬೆಟ್ಟದ ಹಿಂಭಾಗದಲ್ಲಿನ ವಿಶಾಲವಾದ ಹಾಲಮ್ಮನ ತೋಪಿನಲ್ಲಿ ಸಮಾಗಮಗೊಂಡಿದ್ದಾರೆ. ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರು
ವಿವಿಧ ಹರಕೆ ತೀರಿಸಿದರು.
ಬರದ ಹಿನ್ನೆಲೆಯಲ್ಲಿ ಗುಡ್ಡದ ಮೇಲಿರುವ ಆನೆಹೊಂಡದಲ್ಲಿ ನೀರು ಇರಲಿಲ್ಲ. ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಲಾಗಿದ್ದ
ನೀರಿನಲ್ಲಿ ಭಕ್ತರು ಮಿಂದು ದೇವರ ದರ್ಶನ ಪಡೆದರು. ಹಾಲಮ್ಮನ ತೋಪಿಗೆ ಬಂದ ಭಕ್ತರಿಗೆ ನೀರಿನ ಕೊರತೆ ಉಂಟಾಗದಂತೆ ಗ್ರಾಪಂ ವತಿಯಿಂದ ಟ್ಯಾಂಕರ್ ಮೂಲಕ ಹೊಂಡಕ್ಕೆ ನೀರು ಹರಿಸಲಾಯಿತು. ಭಕ್ತರ ಹರಕೆ-ಆಸೆಗಳನ್ನು ಈಡೇರಿಸುವ
ಶಕ್ತಿಮಾತೆಯಾಗಿರುವ ಆರಾಧ್ಯದೈವ ಜಾತ್ರೆ ಅಂಗವಾಗಿ ಹಾಲಮ್ಮನ ತೋಪಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಹೀಗಾಗಿ ಹಾಲಮ್ಮನ ತೋಪಿನಲ್ಲಿ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಟೆಂಟ್ ಗಳಲ್ಲಿ ಭಕ್ತರು ಬೀಡು ಬಿಟ್ಟಿದ್ದಾರೆ. ತಾಲೂಕು ಆಡಳಿತ ಪ್ರಾಣಿಬಲಿ ನಿಷೇಧಿ ಸಿದ್ದರೂ ಸಹ
ಪೊಲೀಸರ ಕಟ್ಟೆಚ್ಚರದ ನಡುವೆಯೂ ಸಹಸ್ರಾರು ಕುರಿ-ಕೋಳಿಗಳು ಭಕ್ತರ ಭಕ್ತಿಪರಾಕಾಷ್ಠೆಯ ಉನ್ಮಾನದಲ್ಲಿ ಹರಕೆಯ ಹೆಸರಲ್ಲಿ ಬಲಿಯಾದವು. ಬಲಿ ತಡೆಯಲು ಪೊಲೀಸರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಜತೆಗೆ ಬೇವಿನುಡುಗೆ,
ಪಡ್ಲಿಗಿ ತುಂಬಿಸುವುದು, ದೀಡು ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಹರಕೆ ತೀರಿಸುವ ಮೂಲಕ ಭಕ್ತರು ಭಕ್ತಿ ಮೆರೆದರು.
ದೇವಿಯ ಹೆಸರಿನಲ್ಲಿ ತಲತಲಾಂತರದಿಂದಲೂ ಆಚರಣೆ
ಮಾಡುತ್ತಾ ಬಂದಿರುವ ಸಾಮಾಜಿಕ ಅನಿಷ್ಟ ದೇವದಾಸಿ ಪದ್ಧತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ, ಕಂದಾಯ ಇಲಾಖೆ, ಗ್ರಾಪಂ ಆಡಳಿತ ಮಂಡಳಿ, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ದೇವದಾಸಿ ಪುನರ್ವಸತಿ
ಯೋಜನೆ ಕಾರ್ಯಕರ್ತರ ಸಹಯೋಗದ ತಂಡಗಳನ್ನು ರಚಿಸಿ ಪದ್ಧತಿ ತಡೆಗೆ ಕಠಿಣ ಕ್ರಮಕೈಗೊಳ್ಳಲಾಗಿತ್ತು.
ದೇವದಾಸಿ ಪುನರ್ವಸತಿ ಯೋಜನೆ ಕಾರ್ಯಕರ್ತರು ಮುತ್ತು ಕಟ್ಟುವ ಮತ್ತು ಬೇವಿನುಡಿಗೆಯಂತಹ ಮೌಢಾಚರಣೆಗಳ
ಕುರಿತು ಕರ ಪತ್ರ ಹಂಚಿ, ಪೋಸ್ಟರ್ ಪ್ರದರ್ಶಿಸಿ, ಧ್ವನಿರ್ವಕದ ಮೂಲಕ ಪ್ರಚಾರ ನಡೆಸಿದರು.