ಕ್ರೀಡಾಕೂಟಗಳಿಂದ ಬದುಕಿಗೆ ಪಾಠ
ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿ•ತೀರ್ಪುಗಾರರೂ ನಿಷ್ಪಕ್ಷಪಾತ ತೀರ್ಪು ನೀಡಿ
Team Udayavani, Sep 8, 2019, 11:15 AM IST
ಹರಿಹರ: ಗುಂಡು ಎಸೆಯುವ ಮೂಲಕ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಹರಿಹರ: ಪಠ್ಯ ವಿದ್ಯೆ ಕಲಿಸಿದರೆ ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು ಬದುಕಿನ ಪಾಠ ಕಲಿಸುತ್ತವೆ ಎಂದು ತಾಪಂ ಉಪಾಧ್ಯಕ್ಷೆ ಜಯಮ್ಮ ಬಸಲಿಂಗಪ್ಪ ಹೇಳಿದರು.
ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಿಸುವ, ಹೋರಾಡುವ ಮತ್ತು ಸೋಲನ್ನು ಎದುರಿಸುವುದು ಹೇಗೆಂದು ತಿಳಿಸುವ ಕ್ರೀಡೆಗಳು ಬದುಕಿಗೆ ಸಹಕಾರಿಯಾಗುತ್ತವೆ ಎಂದರು.
ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಗೆಲುವು ಮುಖ್ಯವಲ್ಲ. ಬದಲಾಗಿ ಸ್ಪರ್ಧೆ ಮುಖ್ಯ. ಸೋಲು ಗೆಲುವು ಇದ್ದದ್ದೇ. ಸೋಲಿಗೆ ಅಂಜದೆ ಆರೋಗ್ಯಕರ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಪ್ರಯತ್ನಿಸುತ್ತಿರಬೇಕು. ಇಂತಹ ಕ್ರೀಡಾಕೂಟದಲ್ಲಿ ಯುವಜನತೆ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ, ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು, ಅಲ್ಲಿ ವಿಜೇತರಾದವರು ವಿಭಾಗ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ ಎಂದರು.
ತೀರ್ಪುಗಾರರೂ ನಿಷ್ಪಕ್ಷಪಾತವಾಗಿ ತೀರ್ಪನ್ನಿತ್ತು ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು. ಎಲ್ಲ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡು ಗೆಲುವು ಸಾಧಿಸುವ ಪಣ ತೊಡಬೇಕು. ಒಂದು ವೇಳೆ ಸೋತರೆ ನಿರಾಶರಾಗಬಾರದು, ಆಸಕ್ತಿ ಕಳೆದುಕೊಳ್ಳಬಾರದು ಎಂದರು.
ಯುವ ಸಬಲೀಕರಣ ಮತ್ತು ತಾಲೂಕು ಕ್ರೀಡಾ ಅಧಿಕಾರಿ ಶ್ರೀಶೈಲ, ಖೋಖೊ ತರಬೇತಿಗಾರರಾದ ರಾಮಲಿಂಗಪ್ಪ ಮತ್ತಿತರರಿದ್ದರು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಕೂಟದಲ್ಲಿ ಭಾಗಹಿಸಿದ್ದರು.