ಚಳಿಗಾಲದಲ್ಲೂ ತುಂಬಿ ಹರಿಯುತ್ತಿದೆ ಅಬ್ಬಿ ಫಾಲ್ಸ್
ನಿತ್ಯ ನೂರಾರು ಪ್ರವಾಸಿಗರ ಭೇಟಿ , ಮೂಲ ಸೌಲಭ್ಯ ಇಲ್ಲದೆ ಪರದಾಟ ,ಕಣ್ಮನ ಸೆಳೆಯುತ್ತಿದೆ ಹಸಿರು, ಜಲಧಾರೆ ವೈಭವ
Team Udayavani, Jan 5, 2021, 7:16 PM IST
ಸಕಲೇಶಪುರ: ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಡುವೆ, ಬೆಟ್ಟಗುಡ್ಡಗಳಲ್ಲಿ ಮಧ್ಯೆ ಹಾಲ್ನೊರೆಯಂತೆ ಹರಿಯುವ ಮೂಕನಮನೆ (ಅಬ್ಬಿ) ಜಲಪಾತ ಚಳಿಗಾಲದಲ್ಲೂ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.
ತಾಲೂಕಿನ ಮಟ್ಟಿಗೆ ಅನಿರೀಕ್ಷಿತವೆಂಬಂತೆ ಈ ಬಾರಿ ಹಿಂಗಾರು ಮಳೆ ಅಕ್ಟೋಬರ್ವರೆಗೂ ಮುಂದು ವರಿದಿತ್ತು. ಹೀಗಾಗಿ ಹಳ್ಳಕೊಳ್ಳ, ತೊರೆ, ಕಾಲುವೆಗಳಲ್ಲಿ ಇನ್ನೂ ನೀರು ಹರಿಯುತ್ತಿದೆ. ಕಳೆದ ಬಾರಿ ಈ ವೇಳೆಗೆ ಝರಿಯಂತಾಗಿದ್ದ ಅಬ್ಬಿ ಫಾಲ್ಸ್, ಈ ಬಾರಿ ಹಾಲ್ನೊರೆಯಂತೆ ತುಂಬಿ ಹರಿಯುತ್ತಿದೆ. ಜಲರಾಶಿಯ ಜೊತೆಗೆ ಪ್ರಾಕೃತಿಕ ಸೌಂದರ್ಯ ಸವಿಯಲು ಪ್ರವಾಸಿ ಗರು ಪ್ರತಿದಿನವೂ ಇಲ್ಲಿಗೆ ಭೇಟಿ ನೀಡಿ, ಜಲಪಾತದ ನೀರಿಗೆ ಮೈಯೊಡ್ಡಿ, ನೀರಲ್ಲಿ ಮಿಂದು ಸಂಭ್ರಮಿ ಸುತ್ತಿದ್ದಾರೆ.
ಅಬ್ಬಿ ಫಾಲ್ಸ್ ಎಂದೇ ಹೆಸರುವಾಸಿ: ತಾಲೂಕಿನಲ್ಲಿ ಇರುವ ಇತರೆ ಜಲಪಾತಗಳಿಗಿಂತ ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಸಮೀಪವಿರುವ ಈ ಮೂಕನಮನೆ ಜಲಪಾತ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ತಾಲೂಕು ಕೇಂದ್ರದಿಂದ 39 ಕಿ.ಮೀ., ಹೆತ್ತೂರು ಹೋಬಳಿ ಕೇಂದ್ರದಿಂದ ಕೇವಲ12 ಕಿ.ಮೀ. ದೂರದಲ್ಲಿರುವ ಮೂಕನಮನೆಜಲಪಾತವನ್ನು ಅಬ್ಬಿ ಫಾಲ್ಸ್ ಎಂದೇ ಹೆಸರುವಾಸಿ ಆಗಿದೆ.
ಅರಬ್ಬಿ ಸಮುದ್ರ ಸೇರುತ್ತೆ: ಹೊಂಗಡಹಳ್ಳ, ಕಿರ್ಕಳ್ಳಿ, ಜೇಡಿಗದ್ದೆ, ಬಾಚನಹಳ್ಳಿ, ಹಲವು ಗ್ರಾಮಗಳಲ್ಲಿಹರಿಯುವ ಹಳ್ಳ, ತೊರೆಗಳು ಸೇರಿಕೊಂಡುಹರಿಯುವ ಮೂಕನಮನೆ ಹೊಳೆಯು ಅತ್ತಿಹಳ್ಳಿಬಳಿ ಜಲಪಾತ ಸೃಷ್ಟಿಸಿದೆ. 25 ಅಡಿ ಎತ್ತರದ ಕಲ್ಲುಬಂಡೆಗಳ ಮೇಲಿಂದ ಬೀಳುವ ನೀರು,ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.
ಹೆಚ್ಚು ಪ್ರಚಾರ: ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಹೆತ್ತೂರು, ಯಸಳೂರು ಹೋಬಳಿಯ ಜನತೆಬಿಟ್ಟರೆ, ತಾಲೂಕಿನ ಇತರೆ ಹೋಬಳಿಗಳ ಬಹುತೇಕಜನರಿಗೆ ಇಂತಹ ಒಂದು ಜಲಪಾತ ಇರುವುದೇಗೊತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು, ವಿಡಿಯೋಗಳು ಹಾಕುತ್ತಿರುವುದರಿಂದ ಪ್ರವಾಸಿಗರು ಈ ಮೂಕನಮನೆ ಜಲಪಾತದ ಕಡೆ ಮುಖ ಮಾಡುತ್ತಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಇಲ್ಲಿನ ಹೋಂ ಸ್ಟೇ, ರೆಸಾರ್ಟ್ಗಳಿಗೆ ಭೇಟಿ ನೀಡುವ ನೂರಾರು ಪ್ರವಾಸಿಗರು, ಇದೀಗ ಮೂಕನಮನೆ ಜಲಪಾತಕ್ಕೂಭೇಟಿ ನೀಡಿ, ಇಲ್ಲಿನ ಪ್ರಕೃತಿಯ ಸೌಂದರ್ಯವನ್ನುಸವಿಯುತ್ತಿದ್ದಾರೆ. ಯುವಕರ ಗುಂಪು ಬೈಕ್ಗಳಲ್ಲಿ ಭೇಟಿ ನೀಡುವುದು ಸಾಮಾನ್ಯವಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಿದ್ರೂ ಮೂಲ ಸೌಲಭ್ಯ ಒದಗಿಸಿಲ್ಲ : ಹೊಸ ವರ್ಷದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಇಲ್ಲದಿರುವುದುಬೇಸರದ ಸಂಗತಿ. ಪ್ರವಾಸೋದ್ಯಮ ಇಲಾಖೆ, ತಾಲೂಕು ಆಡಳಿತ ಈ ಜಲಪಾತದ ಹೆಚ್ಚು ಪ್ರಚಾರ ಮಾಡದಿರುವುದು, ಪ್ರವಾಸಿಗರಿಗೆ ಸೂಕ್ತ ಸೌಲಭ್ಯಕಲ್ಪಿಸದಿರುವುದು ವಿಪರ್ಯಾಸ. ಜಲಪಾತದ ಹಿಂಭಾಗದಲ್ಲಿ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಹೋಗಲು ಒಂದು ಪಾದಚಾರಿಗಳ ಸೇತುವೆ ಇದೆ. ಆದರೆ, ಸೇತುವೆಯ ಎರಡು ಬದಿಯಲ್ಲಿನ ತಡೆಕಂಬಗಳು ಕಿತ್ತು ಹೋಗಿವೆ. ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಯಾಮಾರಿ ಬಿದ್ದರೆ ಪ್ರಾಣ
ಕಳೆದುಕೊಳ್ಳುವ ಸಾಧ್ಯತೆಯಿದೆ. ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಯಾವುದೇ ರೀತಿಯ ಮಾಹಿತಿ ಫಲಕವಿಲ್ಲ. ಮಳೆಗಾಲದಲ್ಲಿ ನೀರು ವ್ಯಾಪಕವಾಗಿ ಹರಿಯುವುದರಿಂದ ಜಾರಿ ಬೀಳುವುದರಲ್ಲಿ ಅನುಮಾನವಿಲ್ಲ. ಸ್ನಾನ, ಈಜುಹೊಡೆಯುವುದು ಸೂಕ್ತ ವಲ್ಲದಿದ್ದರೂ ಕೆಲವರು ಜಲಪಾತಕ್ಕೆ ಇಳಿಯಲು ಹೋಗಿ ಬೆಂಗಳೂರಿ ನಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದು ಇನ್ನೂಜನರ ಕಣ್ಣ ಮುಂದೆಯೇ ಇದೆ. ಜೊತೆಗೆ ಇಲ್ಲಿ ಕೆಲವು ಕಿಡಿಗೇಡಿಗಳು ಮದ್ಯಸೇವಿಸಿ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲ. ಈ ನಿಟ್ಟಿನಲ್ಲಿ ಇಲ್ಲೊಬ್ಬರು ಕಾವಲುಗಾರರನ್ನು ನೇಮಿಸಬೇಕಾದ ತುರ್ತು ಅವಶ್ಯಕತೆ ಇದೆ. ಅತ್ತಹಳ್ಳಿ ಬಾಚಿಹಳ್ಳಿ ಮುಖ್ಯ ರಸ್ತೆಯಿಂದ ಜಲಪಾತದ ಒಳಗೆ ಹೋಗಲು 1 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕಾಗಿದೆ. ಜೊತೆಗೆ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸ ಬೇಕಾಗಿದೆ. ಕೂಡಲೇ ಪ್ರವಾಸೋದ್ಯಮ ಇಲಾಖೆ,ತಾಲೂಕು ಆಡಳಿತ, ಗ್ರಾಪಂನವರು ಇತ್ತಗಮನಹರಿಸಿ ಜಲಪಾತದ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಮೂಕನ ಮನೆ ಜಲಪಾತದ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಸೂಕ್ತ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. – ಮಂಜುನಾಥ್, ತಹಶೀಲ್ದಾರ್
ಪ್ರಕೃತಿ ಉಳಿದರೆ ನಾವು ಉಳಿದಂತೆ, ಮೂಕನ ಮನೆ ಜಲಪಾತ ನೋಡಲುಬರುವವರು ತಿಂಡಿಯನ್ನು ತಂದ ಪ್ಲಾಸ್ಟಿಕ್,ಮದ್ಯದ ಬಾಟಲ್ ಅಲ್ಲಿಯೇ ಬಿಸಾಡದಂತೆಎಚ್ಚರಿಕೆ ವಹಿಸಬೇಕು. ಜಲಪಾತದಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. – ಪ್ರತಾಪ್ಗೌಡ, ಸಮಾಜ ಸೇವಕ, ಬಾಚಿಹಳ್ಳಿ ಗ್ರಾಮ
– ಸುಧೀರ್ ಎಸ್.ಎಲ್.