
ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ
Team Udayavani, May 31, 2023, 4:22 PM IST

ಹೊಳೆನರಸೀಪುರ: ಮೊನ್ನೆ ಮೇ 10ರಂದು ನಡೆದ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮೇ 13ರಂದು ಮುಕ್ತಾಯಗೊಂಡಿದೆ. ಆದರೆ, ಕೂದಲೆಳೆ ಅಂತರದಲ್ಲಿ ಸೋಲುಂಡ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಅವರು ಮತ ಎಣಿಕೆಯಲ್ಲಿ ತಮಗೆ ಅಧಿಕಾರಿಗಳು ಅನ್ಯಾಯ ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭಾ ಕ್ಷೇತ್ರದ ಎಲ್ಲ ಮತಪೆಟ್ಟಿಗೆಗಳ ಮತಗಳನ್ನು ಮರು ಎಣಿಕೆ ಮಾಡಲು ನ್ಯಾಯಾಲಯ ಅವಕಾಶ ನೀಡಬೇಕೆಂದು ರಾಜ್ಯ ಶ್ರೇಷ್ಠ ನ್ಯಾಯಾಲಯದ ಮೆಟ್ಟಲೇರಲು ಮುಂದಾಗುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶ ಪ್ರಕಟವಾದ ನಂತರ ತಮ್ಮ ಸೋಲು ಸೋಲಲ್ಲ ಎಂಬುದು ಜನತೆ ನೀಡಿರುವ ತೀರ್ಪಿನಿಂದ ವ್ಯಕ್ತವಾಗಿದೆ. ಸೋಲಿನಿಂದ ಎದೆಗುಂದದೆ ನನ್ನ ಕ್ಷೇತ್ರದಲ್ಲಿ ನಿರಂತರ ಜನ ಸೇವೆ ಮಾಡುವೆ. ಈಗಿನಿಂದಲೇ ಮುಂದಿನ 2028ರ ಚುನಾವಣೆಗೆ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕಾನೂನು ಹೋರಾಟ ಖಚಿತ: ಮೇ 13ರಂದು ಶನಿವಾರ ಮತ ಎಣಿಕೆ ವೇಳೆ ಬಹಳಷ್ಟು ಅಧಿಕಾರಿಗಳು ತಮಗೆ ಬರಬೇಕಾದ ಮತಗಳನ್ನು ನಮ್ಮ ವಿರೋಧಿ ಅಭ್ಯರ್ಥಿ ರೇವಣ್ಣ ಅವರ ಖಾತೆಗೆ ಜಮೆ ಮಾಡಿದ್ದಾರೆ ಎಂಬ ಸಂಶಯ ತಮಗೆ ಇದೆ. ಆದ್ದರಿಂದ, ಈ ಬಗ್ಗೆ ತಾವು ಕಾನೂನು ತಜ್ಞರ ಸಲಹೆ ಪಡೆದು ನ್ಯಾಯಾಲಯದಲ್ಲಿ ಮೊಕದಮ್ಮೆ ಹೂಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಮತ ಎಣಿಕೆಯಲ್ಲಿ ದೋಷ ಆರೋಪ: ಮತ ಎಣಿಕೆ ಕೇಂದ್ರದಲ್ಲಿ ಮಾಜಿ ಸಚಿವ ರೇವಣ್ಣ ಅವರ ಬೆಂಬಲಿತ ಅಧಿಕಾರಿಗಳೇ ಮತ ಎಣಿಕೆಯ ಕೇಂದ್ರ ದಲ್ಲಿದ್ದ ಕಾರಣ ತಮಗೆ ಅನ್ಯಾಯ ಆಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ನ್ಯಾಯಾಲಯದಲ್ಲಿ ಧಾವೆ ಹೂಡಿ ಮತಗಳ ಮರು ಎಣಿಕೆಗೆ ಮನವಿ ಸಲ್ಲಿಸಿ ಸಲ್ಲಿಸಲಾಗುವುದು ಎಂದರು.
ವಿವಿ ಪ್ಯಾಟ್ ಮತ ಎಣಿಕೆ ಮಾಡಿ: ಮತಪೆಟ್ಟಿಗೆ ಹಾಗೂ ವಿವಿ ಪ್ಯಾಟ್ನಲ್ಲಿನ ಮತಗಳನ್ನು ಪ್ರತ್ಯೇಕವಾಗಿ ಎಣಿಸಿದ್ದಲ್ಲಿ ತಮಗೆ ಪೂರ್ಣ ಪ್ರಮಾಣದ ಜಯ ಸಿಗಲಿದೆ ಎಂಬುದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಅವರ ಸಂಶಯವಿದ್ದು, ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡಲಿದ್ದಾರೆ. ಈ ಸಂಬಂಧ ಬೆಂಗಳೂರಿನ ಖ್ಯಾತ ವಕೀಲರ ಸಲಹೆ ಪಡೆದಿದ್ದಾರೆ.
ರಾಜ್ಯ ರಾಜಕಾರಣವಷ್ಟೇ ಸಾಕು: ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ತಮ್ಮನ್ನು ಪಕ್ಷದ ರಾಜ್ಯ ನಾಯಕರು ಸಾಂತ್ವನ ಹೇಳಿರುವ ಜೊತೆಗೆ 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಗೆ ತಮ್ಮನ್ನು ಸ್ಪರ್ಧಿಸುವಂತೆ ಸಲಹೆ ನೀಡಿದರು. ಆದರೇ ನನಗೆ ಕೇಂದ್ರ ರಾಜಕೀಯಕ್ಕಿಂತ ರಾಜ್ಯ ರಾಜಕೀಯದಲ್ಲಿ ಮುಂದುವರೆಯುವ ಆಸಕ್ತಿ ಇರುವುದಾಗಿ ತಿಳಿಸಿರುವುದಾಗಿ ಹೇಳಿದರು.
2019ರ ಕೇಸ್: ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಸಹ ತಮಗೆ ಅನ್ಯಾಯ ಆಗಿದೆ ಎಂದು ನ್ಯಾಯಾಲಯದ ಮೆಟ್ಟಲೇರಿದ್ದು ಪ್ರಕರಣ ಇಂದಿಗೂ ನ್ಯಾಯಾಲಯ ದಲ್ಲಿ ಇತ್ಯಾರ್ಥವಾಗದೆ ಇರುವುದು ರೇವಣ್ಣ ಅವರ ಕುಟುಂಬದ ಮೇಲೆ ತೂಗುಗತ್ತಿ ಎಂದೇ ಭಾವಿಸಬಹುದಾಗಿದೆ.
ಟಾಪ್ ನ್ಯೂಸ್
