ನಮ್ಮೂರಿಗೆ ತೆರಳಲು ವ್ಯವಸ್ಥೆ ಮಾಡಿ
ಜಿಲ್ಲಾಡಳಿತವನ್ನು ಅಂಗಲಾಚುತ್ತಿರುವ ಉಕ ಭಾಗದ ಕೂಲಿ ಕಾರ್ಮಿಕರು
Team Udayavani, Apr 16, 2020, 5:21 PM IST
ಸಾಂದರ್ಭಿಕ ಚಿತ್ರ
ಚನ್ನರಾಯಪಟ್ಟಣ/ಶ್ರವಣಬೆಳಗೊಳ: ತಾಲೂಕಿನ ಶ್ರವಣ ಬೆಳಗೊಳ ಸಮೀಪದ ದುಮ್ಮಣ್ಣನಗುಡಿ ಹಾಗೂ ಬೆಟ್ಟದಹಳ್ಳಿ ಕ್ವಾರಿಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ತಮ್ಮೂರಿಗೆ ತೆರಳಲು ವ್ಯವಸ್ಥೆ ಮಾಡಿ ಎಂದು ಜಿಲ್ಲಾಡಳಿತವನ್ನು ಅಂಗಲಾಚುತ್ತಿದ್ದಾರೆ.
ದುಮ್ಮಣ್ಣನಗುಡಿಯಲ್ಲಿ ಐದು ಕುಟುಂಬದಿಂದ 25ಕ್ಕೂ ಹೆಚ್ಚು ಮಂದಿ ಇದ್ದಾರೆ. ಬೆಟ್ಟದಹಳ್ಳಿ ಕಲ್ಲಿನ ಕ್ಯಾರಿಯಲ್ಲಿ ಸುಮಾರು 469ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿದ್ದು, ಬಾಗಲ ಕೋಟೆ, ಬೆಳಗಾವಿ, ವಿಜಯಪುರ, ಯಾದವಗಿರಿ, ಹಾವೇರಿ ಜಿಲ್ಲೆಯವರಾಗಿದ್ದಾರೆ. ಇವರಿಗೆ ಸ್ಥಳೀಯವಾಗಿ ಪಡಿತರ ಚೀಟಿ ಇಲ್ಲ. 2-3 ದಿಕ್ಕೊಮ್ಮೆ ಸಂಘ ಸಂಸ್ಥೆಯವರು ಆಹಾರ ಪದಾರ್ಥ ನೀಡುತ್ತಿದ್ದು, ಬದುಕು ಶೋಚನೀಯವಾಗಿದೆ. ಕ್ವಾರಿ ಸಮೀದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಶೌಚಾಲಯ ಹಾಗೂ ಸ್ನಾನಕ್ಕೆ ವ್ಯವಸ್ಥೆ ಇಲ್ಲದೇ ತೊಂದರೆಗೊಳಗಾಗಿದ್ದಾರೆ. ಏ.15ರಂದು ಲಾಕ್ಡೌನ್ ತೆರವಾಗುತ್ತದೆ ಊರಿಗೆ ತೆರಳಬಹುದು ಎಂದುಕೊಂಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಮೇ 3ರ ವರೆಗೆ ಲಾಕ್ ಡೌನ್ ಮುಂದುವರಿಸಿದ್ದರಿಂದ ಹಲವರು ತಡರಾತ್ರಿ ಕ್ರಷರ್ ಮಾಲಿಕರಿಗೆ ತಿಳಿಯದಂತೆ ತಮ್ಮ ಟ್ರ್ಯಾಕ್ಟರ್ ಮೂಲಕ
ತೆರಳುತ್ತಿದ್ದಾಗ ತುಮಕೂರು ಜಿಲ್ಲೆ ತುರುವೇಕೆರೆ ಗಡಿಯಲ್ಲಿ ಅವರನ್ನು ಪೊಲೀಸರು ಹಿಡಿದು ಶ್ರವಣಬೆಳಗೊಳ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕ್ರಷರ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿತ್ಯವೂ ಗೃಹ ಬಳಕೆ ಸಾಮಗ್ರಿ ನೀಡಲಾಗುತ್ತಿದೆ. ತಿಂಗಳಿನಿಂದ ಕೆಲಸ ಇಲ್ಲದ ಕಾರಣ ಅವರು ತಮ್ಮೂರಿಗೆ
ತೆರಳಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.
● ಎಲ್ವಿಆರ್ ಸುನಿಲ್ಕುಮಾರ, ಕ್ರಷರ್ ಮಾಲೀಕ
ನಮ್ಮೂರಿಗೆ ತೆರಳಲು ಸರ್ಕಾರ ವ್ಯವಸ್ಥೆ ಮಾಡಬೇಕು. ಇಲ್ಲವೇ ಕ್ರಷರ್ ಮಾಲೀಕರ ವಾಹನದಲ್ಲಿ ತೆರಳಲು ಪಾಸ್ ವ್ಯವಸ್ಥೆ ಮಾಡಬೇಕು.
● ರಾಮಪ್ಪ, ಕೂಲಿ ಕಾರ್ಮಿಕ