ಗಮನ ಸೆಳೆದ ಶಾಲಾ ಮಕ್ಕಳ ವ್ಯಾಪಾರ ಕೌಶಲ್ಯ
Team Udayavani, Dec 14, 2019, 3:34 PM IST
ಚನ್ನರಾಯಪಟ್ಟಣ: ಅಣ್ಣ ಬನ್ನಿ, ಅಮ್ಮ ಬನ್ನಿ ತಾಜಾ ತರಕಾರಿ ಇವೆ ಎಲ್ಲಾ ಅಗ್ಗ 10 ರೂ.ಗೆ ಕೇಜಿ ಟಮೆಟೋ, ಈರುಳ್ಳಿ ಬೆಲೆ ಮಾತ್ರ ತುಸು ಜಾಸ್ತಿ, ಇತರ ತರಕಾರಿ ಒಂದು ಕೇಜಿ ಕೊಂಡರೆ ಅರ್ಧ ಕೇಜಿ ಉಚಿತ, ಈಗತಾನೆ ತೋಟದಿಂದ ತಂದಿರುವ ತಾಜಾ ಸೊಪ್ಪು ತುಂಬ ಚನ್ನಾಗಿದೆ ತಗೊಳ್ಳಿ ಹೀಗೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದವರು ಬಿಜೆಎಸ್ ಶಾಲೆ ವಿದ್ಯಾರ್ಥಿಗಳು. ಶಾಲೆಯ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನಕ್ಕಾಗಿ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ಈ ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮತ್ತ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದರು. ಚಿಣ್ಣರ ಕೂಗಿಗೆ ಶಾಲೆಯ ಪಾಲಕರು ಸಾಕ್ಷಿಯಾಗಿದ್ದು, ತಮ್ಮ ಮಕ್ಕಳು ಯಾವ ರೀತಿಯಲ್ಲಿ ವ್ಯಪಾರ ಮಾಡುತ್ತಾರೆ ಎಂದು ನೋಡಿ ಸಂತೋಷಪಟ್ಟವರು ಹಲವು ಮಂದಿ ಯಾದರೆ, ಅನೇಕ ಮಂದಿ ಮಹಿಳೆಯರು ಮನೆಗೆ ತರಕಾರಿ ಕೊಂಡರು. ವಿದ್ಯಾರ್ಥಿಗಳೂ ನಿಂಬೆ ಹಣ್ಣಿನ ಶರಬತ್ತು ಮಾಡಿ ಸಂತೆಯಲ್ಲಿ ಮಾರಾಟ ಮಾಡಿದರೆ, ಕೆಲ ವಿದ್ಯಾರ್ಥಿಗಳು ಕುರುಕಲು ತಿಂಡಿಗಳನ್ನು ಮಾರಾಟ ಮಾಡಿದರು. ಸಂತೆಗೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರು ಕುರುಕಲು ತಿನಿಸುಗಳಾದ
ನಿಪ್ಪಟ್ಟು, ಚರುಮುರಿ, ಪಾನಿಪುರಿ, ಬೋಂಡ ಬಜ್ಜಿ ತಂಪು ಪಾನೀಯಗಳಾದ ಐಸ್ ಕ್ರೀಮ್, ಕಬ್ಬಿನ ಹಾಲು, ಎಳನೀರು ಹೀಗೆ ಅನೇಕ ಬಗೆಯ ತಿನಿಸುಗಳನ್ನು ಮಾರಾಟ ಮಾಡಿದರು. ಪೋಷಕರು ವ್ಯಾಪಾರ ಮಾಡಿವ ಮೂಲಕ ತಮ್ಮ ಬಾಯಿ ರುಚಿಯನ್ನು ನೋಡಿದರು. ಸಂತೆಯಲ್ಲಿ ಟೊಮೆಟೋ, ಸೊಪ್ಪು, ಆಲೂಗಡ್ಡೆ, ಸೌತೇಕಾಯಿ, ಬಾಳೆ ಹಣ್ಣು, ಸೇಬು, ಸಪೋಟ, ಕತ್ತಲೆಹಣ್ಣು, ದ್ರಾಕ್ಷಿ, ತೆಂಗಿನಕಾಯಿ, ಮೆಣಸಿನ ಕಾಯಿ, ಬಗೆ ಬಗೆಯ ತರಕಾರಿಗಳು ಇದ್ದವು. ಆದರೆ ಈರುಳ್ಳಿ ಮಾತ್ರ ಅಷ್ಟಾಗಿ ಎಲ್ಲಿಯೂ ಕಾಣಿಸಲಿಲ್ಲ.