20 ಲಕ್ಷ ಕೋಟಿ ಪ್ಯಾಕೇಜ್ಗೆ ಬಿಜೆಪಿ ಸ್ವಾಗತ
Team Udayavani, May 15, 2020, 7:39 AM IST
ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ದೇಶದ ಆರ್ಥಿಕ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ಮಹತ್ವದ ಘೋಷಣೆ ಯಾಗಿದೆ ಎಂದು ಹಾಸನ ಜಿಲ್ಲಾ ಬಿಜೆಪಿ ಮುಖಂಡರು ಬಣ್ಣಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್, ಶಾಸಕ ಪ್ರೀತಂ ಜೆ.ಗೌಡ, ಮಾಜಿ ಸಚಿವ ಎ.ಮಂಜು ಅವರು, ಕೊರೊನಾ ಪಿಡುಗಿನಿಂದ ತತ್ತರಿ ಸಿರುವ ದೇಶದ ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನೆರವಾಗಲಿದೆ. ಭಾರತವು ದಣಿಯುವುದಿಲ್ಲ. ಅಥವಾ ಕೈ ಚೆಲ್ಲುವುದಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು, ಮುಂದಕ್ಕೂ ಸಾಗಬೇಕು ಎಂಬ ಪ್ರಧಾನಿ ಮೋದಿಯವರ ಮಾತುಗಳು ದೇಶದ ಜನರಲ್ಲಿ ಹೊಸ ಉತ್ಸಾಹವನ್ನು ತಂದಿದೆ ಎಂದು ಹೇಳಿದರು.
ದೂರದೃಷ್ಟಿಯ ಕ್ರಮ: ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ ಆರ್ಥಿಕ ಪ್ಯಾಕೇಜ್ಗಳು ದೇಶದ ಅರ್ಥ ವ್ಯವಸ್ಥೆಗೆ ಬಲ ತುಂಬುವ ದೂರ ದೃಷ್ಟಿಯ ಕ್ರಮವಾಗಿದೆ. ತುರ್ತು ಆರೋಗ್ಯ ನಿಧಿಗೆ 15 ಸಾವಿರ ಕೋಟಿ ರೂ., ಅತಿ ಸಣ್ಣ ಉದ್ಯಮಕ್ಕೆ 3 ಲಕ್ಷ ಕೋಟಿ ರೂ., ವಿದ್ಯುತ್ ಸರಬರಾಜು ಕಂಪನಿ ಗಳಿಗೆ 90 ಸಾವಿರ ಕೋಟಿ ರೂ. ಸಹಾಯ ಧನ ಮತ್ತಿತರ ಘೋಷಣೆಗಳು ಇಂದಿನ ಸಂಕಷ್ಟ ಸಮಯಕ್ಕೆ ಸಂಜೀವಿನಿ ನೀಡಿದಂತಾಗಿದೆ ಎಂದರು.
ಕೊರೊನಾ ಪರಿಣಾಮವಾಗಿ ಸಂಕಷ್ಟ ಸ್ಥಿತಿಯಲ್ಲಿರುವ ದೇಶವಾಸಿಗಳಿಗೆ ನೆರ ವಾಗಲು ಪ್ರಧಾನಿಯವರು ತೆಗೆದುಕೊಂಡಿ ರುವ ನಿರ್ಧಾರಗಳನ್ನು ಜಿಲ್ಲಾ ಬಿಜೆಪಿಯು ಅಭಿನಂದಿಸಲಿದೆ ಎಂದ ಅವರು, ಈ ಪ್ಯಾಕೇಜ್ನ ವಿವರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು. ಪಕ್ಷದ ಹಿರಿಯ ಮುಖಂಡ ನವಿಲೆ ಅಣ್ಣಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಆರ್. ಗುರುದೇವ್ ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
ಅಂತರ್ ಜಿಲ್ಲಾ ಪಾಸ್ ಗೊಂದಲ ನಿವಾರಣೆ ಲಾಕ್ಡೌನ್ ಸಡಿಲಗೊಳಿಸಿದ ನಂತರ ಅಂತರ್ ಜಿಲ್ಲಾ ಸಂಚಾರಕ್ಕೆ ನೀಡಿರುವ ಪಾಸ್ನಲ್ಲಿರುವ ಗೊಂದಲ ನಿವಾರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಜನರಿಗೆ ತೊಂದರೆ ಯಾಗದಂತೆ ವ್ಯವಸ್ಥೆ ಮಾಡಲಾಗು ವುದು. ವಿದ್ಯುತ್ಛಕ್ತಿ ಬಿಲ್ನಲ್ಲಿನ ದೋಷಗಳು ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದ್ದು, ಒಂದೆರೆಡು ದಿನಗಳಲ್ಲಿಯೇ ಮುಖ್ಯಮಂತ್ರಿ ಯವರು ಪರಿಹಾರ ಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು.