ಕೆಂಪು ವಲಯದಿಂದ ಬರೋರನ್ನ ನಿರ್ಬಂಧಿಸಿ
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ರಾಜ್ ಸಿಂಗ್ ಸೂಚನೆ
Team Udayavani, May 9, 2020, 11:55 AM IST
ಸಾಂದರ್ಭಿಕ ಚಿತ್ರ
ಹಾಸನ: ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಪಾಸಿಟಿವ್ ಪ್ರಕರಣ ಇಲ್ಲದಿರುವುದು ಸ್ವಾಗತಾರ್ಹವಾಗಿದ್ದು ಮುಂದಿನ ದಿನಗಳಲ್ಲಿಯೂ ಹಾಸನ ಜಿಲ್ಲೆಗೆ ಕೋವಿಡ್ ಹರದಡಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೋವಿಡ್ ಕೆಂಪು ವಲಯದಿಂದ ಹಾಸನ ಜಿಲ್ಲೆಗೆ ಬರುವವರನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ರಾಜ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಉಸಿರಾಟದ ತೊಂದರೆ, ಶೀತ, ಜ್ವರ, ಕೆಮ್ಮು, ಇತರೆ ರೋಗ ಲಕ್ಷಣ ಇರುವವರನ್ನು
ನಿರಂತರವಾಗಿ ವರದಿ ಮಾಡಿ ತಪಾಸಣೆಗೆ ಒಳಪಡಿಸಬೇಕು. ಔಷಧಿ ಅಂಗಡಿಗಳ ಮೂಲಕ ಪ್ಯಾರಾಸಿಟಮಾಲ್ ಹಾಗೂ ಜ್ವರ ಸಂಬಂಧಿತ ಔಷಧಿ ಖರೀದಿಸುವವರ ಮಾಹಿತಿ ಪಡೆದುಕೊಳ್ಳಬೇಕೆಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ಈಗಾಗಲೇ ಔಷಧಿ ವ್ಯಾಪಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಪ್ಲಾರಾಸಿಟಮಾಲ್ ಔಷಧಿ ಖರೀದಿ ಸುವವರ ದೂರವಾಣಿ ಸಂಖ್ಯೆ ಪಡೆದು ಅವರು ಯಾವ ಕಾರಣಕ್ಕೆ ಔಷಧಿ ಖರೀದಿಸಿದ್ದಾರೆಂದು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಸ್ತರಣೆ:ಹಿಮ್ಸ್ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್ ಮಾತನಾಡಿ, ಹಿಮ್ಸ್ ಆಸ್ಪತ್ರೆ ಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೋಷಿಸಿ 400 ಹಾಸಿಗೆಗಳ ವಾರ್ಡ್ಗಳನ್ನು ಮಾರ್ಪಾಡು ಮಾಡಲಾಗಿತ್ತು, ಪ್ರಸ್ತುತ ಅಷ್ಟು ಬೆಡ್ಗಳ ಅವಶ್ಯಕತೆ ಇಲ್ಲದಿರುವುದರಿಂದ 200 ಬೆಡ್ ಕಡಿಮೆ ಮಾಡಿ ಸಾರ್ವಜನಿಕ ಆಸ್ಪತ್ರೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾರ್ಪಾಡಿಗೆ ಸಿದ್ಧರಾಗಿ: ಇದಕ್ಕೆ ಪ್ರತಿಕ್ರಿಯಿಸಿದ ನವೀನ್ರಾಜ್ಸಿಂಗ್, ಅಗತ್ಯವಿರುವ ಎಲ್ಲಾ ಉಪಕರಣ ಖರೀದಿಸಿ ಎಂದು ಸೂಚಿಸಿದರಲ್ಲದೆ, ಕೋವಿಡ್ ಕುರಿತಾಗಿ
ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡುವಂತಿಲ್ಲ, ಹೀಗಾಗಿ ಎಂತಹ ಸಂದರ್ಭದಲ್ಲೂ ಪುನಃ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲು ಸಿದ್ಧರಿರಬೇಕೆಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಜಿಪಂ ಸಿಇಒ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ, ಉಪವಿಭಾಗಾಧಿಕಾರಿ ಡಾ.ನವೀನ್ಭಟ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮತ್ತಿತರರಿದ್ದರು.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಡೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಮಾಸ್ಕ್ ಧರಿಸದೆ ಓಡಾಡುವವರಿಗೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇರುವವರಿಗೆ ದಂಡ ವಿಧಿಸಲಾಗುತ್ತಿದೆ.
● ಬಿ.ಎ.ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ