ಕಾವೇರಿ ವಿವಾದ: 20 ದಿನಗಳಲ್ಲಿ ರಾಜ್ಯದ ಭವಿಷ್ಯ ನಿರ್ಧಾರ
Team Udayavani, Aug 1, 2017, 8:10 AM IST
ಹಾಸನ: ಕಾವೇರಿ ಜಲ ವಿವಾದದ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಇನ್ನು 20 ದಿನದಲ್ಲಿ ತೀರ್ಪು ನೀಡಲಿದೆ. ರಾಜ್ಯಕ್ಕೆ ನ್ಯಾಯ ಸಿಗದಿದ್ದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡಲೇಬೇಕಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಹೇಮಾವತಿ ನಾಲೆಗಳಲ್ಲಿ ನೀರು ಹರಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತ್ರಿಸದಸ್ಯ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾ.ಮಿಶ್ರಾ ಅವರು ಆ.25 ರ ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಅಷ್ಟರೊಳಗೆ ಕಾವೇರಿ ವಿವಾದದ ವಿಶೇಷ ಮೇಲ್ಮನವಿ ಮೇಲಿನ ತೀರ್ಪು ನೀಡಲಿದ್ದಾರೆ. ನ್ಯಾಯಪೀಠವು ವಿವಾದವನ್ನು ಮತ್ತೆ ಕಾವೇರಿ ನ್ಯಾಯಮಂಡಳಿಗೆ ಕಳುಹಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದು, ತ್ರಿಸದಸ್ಯ ಪೀಠದ ತೀರ್ಪು ಅಂತಿಮವಾಗಲಿದೆ. ಆದರೆ ರಾಜ್ಯಕ್ಕೆ ನ್ಯಾಯ ಸಿಗದಿದ್ದರೆ ಬೀದಿಗಿಳಿಯಲೇ ಬೇಕಾಗುತ್ತದೆ ಎಂದರು.