ಚನ್ನರಾಯಪಟ್ಟಣ ತಾಲೂಕು 14 ದಿನ ಲಾಕ್ಡೌನ್
Team Udayavani, Jul 7, 2020, 7:09 AM IST
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಸಮುದಾಯಕ್ಕೆ ಕೋವಿಡ್ 19 ಹರಡುತ್ತಿದ್ದು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ 14 ದಿನ ಲಾಕ್ಡೌನ್ಗೆ ಮುಂದಾಗಿದ್ದು, ಸೋಮವಾರ ಲಾಕ್ಡೌನ್ ಯಶಸ್ವಿ ಯಾಗಿದೆ. ತಾಲೂಕಿನ ವರ್ತಕರು ಹಾಗೂ ಸಂಘ ಸಂಸ್ಥೆಗ್ಳ ಪದಾಧಿಕಾರಿಗಳು ಈಗಾಗಲೇ ತಾಲೂಕು ಆಡಳಿತದೊಂದಿಗೆ ಸಭೆ ನಡೆಸಿ 14 ದಿನ ಲಾಕ್ಡೌನ್ಗೆ ಮುಂದಾಗಿದ್ದಾರೆ.
ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 11ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು, ನಂತರ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಲಾಕ್ಡೌನ್ಗೆ ವರ್ತಕರು ಮುಂದಾಗಿದ್ದಾರೆ. ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಪೂರ್ಣ ಬಂದ್ ಮಾಡಲು ತೀರ್ಮಾನ ಮಾಡಲಾಗಿದೆ. ಭಾನುವಾರ ರಾಜ್ಯ ಸರ್ಕಾರದ ಆದೇಶದಂತೆ ಬಂದ್ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.
ಇದಕ್ಕೆ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಮೊದಲ ದಿವಸ ಬಂದ್ಗೆ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಔಷಧಿ ಅಂಗಡಿ, ಬ್ಯಾಂಕ್ ಹೊರತು ಪಡಿಸಿ ಮದ್ಯದ ಅಂಗಡಿಯ ಮಾಲೀಕರೂ ಲಾಕ್ಡೌನ್ಗೆ ಬೆಂಬಲ ಸೂಚಿಸಿದ್ದಾರೆ. ಪಟ್ಟಣದಲ್ಲಿ ಬೈಕ್ ಹಾಗೂ ಕಾರುಗಳು ಮಾತ್ರ ಸಂಚರಿಸಿದವು.
ಬ್ಯಾಂಕ್ ವ್ಯವಹಾರ ಮಾಡುವವರನ್ನು ಹೊರತು ಪಡಿಸಿ ಉಳಿದವರು ರಸ್ತೆಗೆ ಇಳಿಯದೇ ಕೋವಿಡ್ 19 ಹರಡುವುದನ್ನು ನಿಯಂತ್ರಣಕ್ಕೆ ಸಹಕಾರ ನೀಡಿದ್ದಾರೆ. ತಾಲೂಕಿನ ಹಿರೀಸಾವೆ, ಉದಯ ಪುರ, ನುಗ್ಗೇಹಳ್ಳಿ, ಶ್ರವಣಬೆಳಗೊಳ, ಬಾಗೂರು ಹೋಬಳಿ ಕೇಂದ್ರದ ವರ್ತಕರು ಲಾಕ್ಡೌನ್ಗೆ ಸಹಕಾರ ನೀಡಿದ್ದಾರೆ. ಹಳ್ಳಿಗಳಿಂದ ಸಾರ್ವಜನಿಕರು ಹೋಬಳಿ ಕೇಂದ್ರದ ಕಡೆ ಬಾರದಂತೆ ತಾಲೂಕು ಆಡಳಿತ ಹಾಗೂ ಆಯಾ ಗ್ರಾಮ ಪಂಚಾಯಿತಿಯಿಂದ ಆಟೋ ಪ್ರಚಾರ ಮಾಡಲಾಗಿದೆ.