ಚನ್ನರಾಯಪಟ್ಟಣ ಮಿನಿ ವಿಧಾನಸೌಧ ಸೀಲ್ಡೌನ್
Team Udayavani, Jul 20, 2020, 10:29 AM IST
ಚನ್ನರಾಯಪಟ್ಟಣ: ತಾಲೂಕು ಸರ್ವೆ ಇಲಾಖೆ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನ ಮಿನಿ ವಿಧಾನಸೌಧವನ್ನು ಸೀಲ್ಡೌನ್ ಮಾಡಲಾಗಿದೆ.
ಜು.17ರಂದು ತಾಲೂಕು ಕಚೇರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ಸರ್ವೆ ಇಲಾಖೆ ಅಧಿಕಾರಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಸೋಂಕಿತ ವ್ಯಕ್ತಿಯನ್ನು ಹಾಸನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಚೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಮಿನಿ ವಿಧಾನ ಸೌಧದಲ್ಲಿ ಉಪನೋಂದಣಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಪಖಜಾನೆ, ಕಾರ್ಮಿಕ ಇಲಾಖೆ, ಸರ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಒಂದೇ ಕಟ್ಟಡಲ್ಲಿ ಇದ್ದು ಸರ್ವೆ ಇಲಾಖೆ ಅಧಿಕಾರಿಗೆ ಸೋಂಕು ಬಂದ ಸೋಂಕಿನಿಂದ ಎಲ್ಲಾ ಇಲಾಖೆಗಳ ಬಾಗಿಲು ಹಾಕಿಸಲಾಗಿದೆ.
ಮಿನಿ ವಿಧಾನ ಸೌಧದ ಆವರಣದಲ್ಲಿ ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯೂ ಇದೆ. ಅಲ್ಲಿಗೂ ಸಾರ್ವಜನಿಕರ ಪ್ರವೇಶ ಮಾಡದಂತೆ ಒಂದು ವಾರದ ವರೆಗೆ ನಿಷೇಧ ಹೇರಲಾಗಿದ್ದು, ಕಚೇರಿ ಒಳಗೆ ಹಾಗೂ ಹೊರಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಕೊರೊನಾ ಸೇವೆ ಮಾಡುತ್ತಿರುವ ಸಿಬ್ಬಂದಿಯನ್ನು ಹೊರತು ಸರ್ವೆ ಇಲಾಖೆಯ ಸಿಬ್ಬಂದಿ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ತಹಶೀಲ್ದಾರ್ ಜೆ.ಬಿ.ಮಾರುತಿ ತಿಳಿಸಿದ್ದಾರೆ.