ಕೊಬ್ಬರಿ ಬೆಳೆಗಾರರಿಗೆ ವರ್ತಕರಿಂದ ಮೋಸ
Team Udayavani, May 29, 2020, 6:33 AM IST
ಚನ್ನರಾಯಪಟ್ಟಣ: ಕೋವಿಡ್ 19ನಿಂದ ಮಾರುಕಟ್ಟೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ವರ್ತಕರು ರೈತರಿಂದ ಕಡಿಮೆ ಬೆಲೆ ಖರೀದಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಫೆಡ್ ನಲ್ಲಿ ಕ್ವಿಂಟಲ್ ಕೊಬ್ಬರಿಗೆ 10,300 ರೂ. ದರ ಇದೆ,
ಆದರೆ ಕೊಬ್ಬರಿ ವರ್ತಕರು ರೈತರಿಂದ 9,200 ರೂ.ಗೆ ಖರೀದಿ ಮಾಡುವ ಮೂಲಕ ರೈತರ ಕಣ್ಣೆದುರೇ ಮೋಸ ಮಾಡುತ್ತಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಇರಲಿ ಸೂಕ್ತ ಬೆಲೆಯೂ ದೊರೆಯದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ಇದನ್ನು ಗಮನಿಸಬೇಕಾಗಿದೆ ಎಂದು ಮನವಿ ಮಾಡಿದರು. ಲಾಕ್ಡೌನ್ ಪರಿಣಾಮದಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ವೇಳೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಾಗಿದೆ. ರೈತರನ್ನು ಕೋವಿಡ್ 19 ಹೆಸರಿನಲ್ಲಿ ಭಯ ಉಂಟು ಮಾಡುವುದು ಅವರಿಂದ ಕಡಿಮೆ ಬೆಲೆಗೆ ಕೊಬ್ಬರಿ ಖರೀದಿ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತಹವರ ವಿರುದ ಕ್ರಮ ಕೈಗೊಳ್ಳಬೇಕಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಹಾಗೂ ನಿರ್ದೇಶಕರು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ತುರ್ತು ಸಭೆ ಕರೆದು ರೈತ ಮುಖಂಡರ ಜತೆ ಚರ್ಚೆ ನಡೆಸಿ ಬೆಲೆ ಏರಿಕೆಯೊಂದಿಗೆ ಶೀಘ್ರದಲ್ಲಿಯೇ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ರೈತರಿಗೆ ನೆರವಾಗಬೇಕು.
ಮುಂದೆ ಇದೇ ರೀತಿಯಾದರೆ ಕೊಬ್ಬರಿ ಜೊತೆಯಲ್ಲಿ ತೆಂಗಿನ ಬೆಲೆಗೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ಕೋವಿಡ್ 19 ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಕೆಲವರು ಚಂದಾ ವಸೂಲಿಗೆ ಇಳಿದಿದ್ದಾರೆ. ಲಕ್ಷಾಂತರ ರೂ. ಹಣ ದೇಣಿಗೆ ರೂಪದಲ್ಲಿ ಪಡೆದು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು ಎಂದರು.