ಕಾಂಗ್ರೆಸ್ಗೆ ಜೆಡಿಎಸ್ ಸಹವಾಸ ಬೇಡ: ಗೋಪಾಲಸ್ವಾಮಿ
Team Udayavani, Jun 2, 2020, 7:03 AM IST
ಹಾಸನ: ಇನ್ನೆಂದೂ ಜೆಡಿಎಸ್ನೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಬಾರದು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಕಾಂಗ್ರೆಸ್ನವರಿಂದ ಓಟು ಕೊಡಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆ ಯಾಚಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸನ ಜಿಲ್ಲಾ ಪಂಚಾಯಿತಿ ಸಭೆಗೆ ಜೆಡಿಎಸ್ಸದಸ್ಯರ ಗೈರು ಹಾಜರಾತಿಯಿಂದ ಜಿಲ್ಲೆಗೆ ಬಂದಿರುವ 15ನೇ ಹಣಕಾಸು ಯೋಜನೆಯ 112 ಕೋಟಿ ರೂ. ಅನುದಾನ ವಾಪಸ್ ಹೋಗುವ ಹಿನ್ನೆಲೆಯಲ್ಲಿ ಜೆಡಿಎಸ್ ಜಿ ಪಂ ಸದಸ್ಯರನ್ನು ಸಭೆಗೆ ಕರೆತರುವಂತೆ ರೇವಣ್ಣ ಅವರಿಗೆ ತಾವು ಮನವಿ ಮಾಡಿದ್ದು ನಿಜ.
ಆದರೆ ಅನುದಾನ ಬಂದಿಲ್ಲ, ಎಂದು ರೇವಣ್ಣ ಅವರು ಹೇಳುತ್ತಾರೆ. ನಾನು ಅನುದಾನ ಬಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡೇ ಮಾತನಾಡಿದ್ದೇನೆ. ನಾನು ಪಿಯುಸಿಯಲ್ಲಿ ಮೂರು ಭಾರಿ ಫೇಲ್ ಆಗಿ ಆನಂತರ ಡಿಗ್ರಿ ಮಾಡಿಕೊಂಡಿರುವ ದಡ್ಡ ಎಂದ ಅವರು, ಬೇಕಾದರೇ ಎಚ್.ಡಿ. ರೇವಣ್ಣನವರು ಹಾಸನದಲ್ಲಿಬುದ್ದಿವಂತ ಪಿಎಗಳನ್ನು ಇಟ್ಟುಕೊಂಡು ಮಾಹಿತಿ ಪಡೆಯಲಿ ಎಂದು ವ್ಯಂಗ್ಯವಾಡಿದರು.
ರೇವಣ್ಣ ಅವರು ತಮ್ಮ ಪುತ್ರನ ಚುನಾವಣೆಯಲ್ಲಿ ಯಾರ್ಯಾರ ಮನೆ ಬಾಗಿಲಿಗೆ ಬಂದು ಕೈ-ಕಾಲು ಹಿಡಿದಿದ್ದರು ಎಂದು ಮೊದಲು ನೆನಪಿಸಿಕೊಳ್ಳಲಿ. ರೇವಣ್ಣ ಅವರನ್ನು ನಾನು ಎಂದೂ ಟೀಕೆ ಮಾಡಿರಲಿಲ್ಲ. ಜಿಪಂ ಸಭೆಗೆ ಬರುವಂತೆ ಮನವಿ ಮಾಡಿದ್ದೆ ಅಷ್ಟೆ. ಆದರೆ ಈಗ ಅವರು ನನಗೆ ಬುದ್ದಿ ಇಲ್ಲ. ಎಂದು ಹೇಳಿದ್ದಾರೆ. ಅವರು ಮೊದಲು ಮಾಹಿತಿ ಪಡೆದು ಮಾತನಾಡಲಿ ಎಂದರು.