ಪಕ್ಷ ಸೂಚಿಸಿದರೆ ಹಾಸನದಿಂದ ಸ್ಪರ್ಧೆ: ರೇವಣ್ಣ
Team Udayavani, Feb 9, 2023, 11:45 PM IST
ಹಾಸನ: ಪಕ್ಷ ತೀರ್ಮಾನಿಸಿದರೆ ಹಾಸನ ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳುವ ಮೂಲಕ ಟಿಕೆಟ್ ಪೈಪೋಟಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ದೇವೇಗೌಡರ ಕುಟುಂಬದವರು ಹಾಸನ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಸೋಲಿಸುವೆ. ಒಂದು ಮತ ಕಡಿಮೆಯಾದರೂ ತತ್ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿರುವುದನ್ನು ಸ್ವೀಕಾರ ಮಾಡಬೇಕಲ್ಲವೇ? ಈ ಬಗ್ಗೆ ಪಕ್ಷ ಏನು ಸೂಚನೆ ಕೊಡುತ್ತದೆಯೋ ಅದನ್ನು ಪಾಲಿಸುವೆ ಎಂದು ಹೇಳುವ ಮೂಲಕ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಹೆಸರನ್ನು ಪ್ರಸ್ತಾವಿಸದೇ ಅವರ ವಿರುದ್ಧ ಸ್ಪರ್ಧೆಗಿಳಿಯಲು ಸಿದ್ಧ ಎಂದು ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಸನದಿಂದ ರೇವಣ್ಣ ಅವರೇ ಸ್ಪರ್ಧೆಗಿಳಿಯುವ ಮೂಲಕ ಅಭ್ಯರ್ಥಿಯ ಗೊಂದಲವನ್ನು ನಿವಾರಿಸಲಿದ್ದಾರೆಂಬ ಸುದ್ದಿ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡದ ಅವರು, ನಾನು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆಗಿಳಿಯಲು ಸಿದ್ಧನಿದ್ದೇನೆ ಎಂದರು.
ಅರಕಲಗೂಡು ಕ್ಷೇತ್ರದಲ್ಲಿ ಎ. ಮಂಜು ಜೆಡಿಎಸ್ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈಗ ಹೋಬಳಿವಾರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ನಡೆದಿದೆ. ಅವರ ಅಭಿಪ್ರಾಯಗಳನ್ನು ಪಡೆದು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.