ರಸ್ತೆ ಬದಿ ಕಸ ಸುರಿದರೆ ಕ್ರಿಮಿನಲ್ ಕೇಸ್
ಸಾರ್ವಜನಿಕರಿಗೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಎಚ್ಚರಿಕೆ
Team Udayavani, Aug 23, 2019, 2:49 PM IST
ಬೇಲೂರು ಪಟ್ಟಣದ ಮೂಡಿಗೆರೆ ರಸ್ತೆ ಬದಿಯಲ್ಲಿ ಹಾಕಿದ್ದ ಕಸವನ್ನು ಮುಖ್ಯಾಧಿಕಾರಿ ಮಂಜುನಾಥ್ ಸ್ವಚ್ಛಗೊಳಿಸಿದರು.
ಬೇಲೂರು: ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಪೌರ ಕಾರ್ಮಿಕರು ಸ್ವಚ್ಛತೆ ಮಾಡುತ್ತಿದ್ದರೂ ಕೆಲವು ಅಂಗಡಿ ಮಾಲೀಕರು ಹಾಗೂ ಹೋಟೆಲ್ ಉದ್ಯಮದವರು ಕಸವನ್ನು ಕಸದ ವಾಹನಕ್ಕೆ ಹಾಕದೇ ರಸ್ತೆ ಬದಿಗೆ ತಂದು ಸುರಿಯುತ್ತಿರುವುದು ಕಂಡು ಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಎಚ್ಚರಿಸಿದರು.
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಕಂದಕದ ಬಳಿ ಎಳನೀರು, ಬಾಳೆಹಣ್ಣು, ಕೋಳಿ ತ್ಯಾಜ್ಯವನ್ನು ಗುಂಡಿಗೆ ಸುರಿದಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸ್ವಚ್ಛತೆ ಕಾಪಾಡಲು ದಿನನಿತ್ಯ ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದರು.
ಈಗಾಗಲೇ ಅಂಗಡಿ ಮಾಲೀಕರು, ಎಳನೀರು ವ್ಯಾಪಾರಿಗಳು ಮತ್ತು ಕೋಳಿ, ಮತ್ತು ಮಾಂಸದ ಅಂಗಡಿ ಹಾಗೂ ಹೋಟೇಲ್ ಮಾಲೀಕರು, ವ್ಯಾಪಾರಿಗಳ ಸಭೆ ಕರೆದು ಕಸವನ್ನು ಕಸ ಸಂಗ್ರಹಣೆ ವಾಹನಕ್ಕೆ ಹಾಕಬೇಕು ಎಂದು ತಿಳಿಸಿದ್ದರೂ ಸಹ ಕೆಲ ವ್ಯಾಪಾರಿಗಳು ಎಳನೀರು ಸಿಪ್ಪೆ ಹಾಗೂ ಕೋಳಿಯ ತ್ಯಾಜ್ಯವನ್ನು ಕಂದಕಕ್ಕೆ ತಂದು ಸುರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದರು.
ಈಗಾಗಲೇ ಈ ಜಾಗದಲ್ಲಿ ಸೂಚನಾ ಫಲಕ ಹಾಕಿದ್ದು, ಯಾರಾದರೂ ಕಸವನ್ನು ತಂದು ಇಲ್ಲಿ ಹಾಕಿದ್ದು ಕಂಡುಬಂದಲ್ಲಿ, ಅವರ ಮೇಲೆ ಕ್ರಿಮಿನಲ್ಮೊಕದ್ದಮೆ ದಾಖಲಿಸ ಲಾಗುವುದು. ಈ ಜಾಗದಲ್ಲಿ ಕಸ ಸುರಿಯದಂತೆ ಗಿಡ ನೆಡಲಾಗಿದ್ದು ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.