ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾಕ್ಕೆ ಒತ್ತಾಯ
Team Udayavani, May 12, 2020, 10:53 AM IST
ಹಾಸನ: ಸ್ತ್ರೀ ಶಕ್ತಿ ಸಂಘಗಳು ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ವನ್ನು ಮನ್ನಾ ಮಾಡಬೇಕು ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕೊರೊನಾ ಪರಿ ಣಾಮ ಲಾಕ್ಡೌನ್ ಜಾರಿಯಾದ ನಂತರ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ನೀಡಿದ್ದ ಸಾಲ ಮರುಪಾವತಿಯಾಗುತ್ತಿಲ್ಲ.
ಸಾಲ ಪಡೆದ ಸದಸ್ಯರು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿ ಸಾಲ ಮರುಪಾವತಿ ಮಾಡಲಾಗದೇ ಸಂಕಷ್ಟ ಅನಭವಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸರ್ಕಾರ ಒಂದು ಬಾರಿ ಮನ್ನಾ ಮಾಡಬೇಕು ಎಂದು ಆಗ್ರಹಪಡಿಸಿದರು. ಹಾಸನ ಜಿಲ್ಲೆಯಲ್ಲಿ 6,700 ಸ್ತ್ರೀ ಶಕ್ತಿ ಸಂಘಗಳಿವೆ. ಸಂಘಗಳು ಒಬ್ಬೊಬ್ಬ ಸದಸ್ಯರಿಗೂ ಕನಿಷ್ಠ 10 ಸಾವಿರ ರೂ. ಸಾಲ ಸಾಲ ನೀಡಿವೆ.
ಸದಸ್ಯರು ಪಡೆದ ಸಾಲ ತೀರಿಸಲು ಸಾಧ್ಯವಾಗದೆ ಬಡ್ಡಿ ಏರುತ್ತಿದೆ. ಹಾಗಾಗಿ ಸರ್ಕಾರ ಒಂದು ಬಾರಿ ಸಾಲ ಮನ್ನಾ ಮಾಡಿದರೆ ಸಂಘಗಳು ಸುಸೂತ್ರವಾಗಿ ವ್ಯವಹರಿಸಿಕೊಂಡು ಹೋಗುತ್ತವೆ ಎಂದು ಹೇಳಿದರು. ಕೌರಿಕರು, ಅಗಸರು, ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಲು ಮುಖ್ಯ ಮಂತ್ರಿಯವರು 45 ದಿನ ತೆಗೆದುಕೊಂಡರು. ಜೆಡಿಎಸ್ ಪದೇ ಪದೇ ಒತ್ತಾಯ ಮಾಡಿದ್ದರಿಂದ ಕೊನೆಗೂ ಮುಖ್ಯಮಂತ್ರಿಯವರು 1,610 ಖೋಟಿ ರೂ. ಪರಿಹಾರ ಘೋಷಣೆ ಮಾಡಿದರು.
ಇನ್ನೂ ಕೆಲವು ವರ್ಗಗಳಿಗೆ ಪರಿಹಾರ ನೀಡಬೇಕಾಗಿದೆ. ದೇವಾಲಯಗಳ ಅರ್ಚಕರು, ಬೀದಿ ಬದಿ ತರಕಾರಿ ಮಾರಾಟ ಮಾಡುವವರು, ಹೋಟೆಲ್ಗಳ ಕಾರ್ಮಿಕರು, ಕಲ್ಯಾಣ ಮಂಟಪಗಳಲ್ಲಿನ ಸ್ವತ್ಛತಾ ಕಾರ್ಮಿಕರು, ಬೀಡಿ ಕಾರ್ಮಿಕರಿಗೂ ಪರಿಹಾರ ನೀಡಬೇಕು. ಮುಖ್ಯಮಂತ್ರಿಯವರು ಪರಿಹಾರದ 2ನೇ ಪ್ಯಾಕೇಜ್ ಘೋಷಣೆ ಮಾಡುವಾಗ ಈ ಎಲ್ಲ ವರ್ಗಗಳಿಗೂ ಪರಿಹಾರ ಘೋಷಣೆ ಮಾಡಬೇಕು ಎಂದು ರೇವಣ್ಣ ಅವರು ಒತ್ತಾಯಿಸಿದರು.