ಪುರಸಭೆ ಅನುದಾನ ಬಳಕೆಯಲ್ಲಿ ತಾರತಮ್ಯ
Team Udayavani, Dec 6, 2020, 7:38 PM IST
ಚನ್ನರಾಯಪಟ್ಟಣ: ಅಲ್ಪಸಂಖ್ಯಾತರ ಬಡಾವಣೆಗೆ ಬಿಡುಗಡೆಯಾಗಿದ್ದ ಅನುದಾನವನ್ನು ಬೇರೆ ಕಡೆ ವರ್ಗಾಹಿಸುವ ಮೂಲಕ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು23ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ಆರೋಪಿಸಿದರು.
ಪುರಸಭೆ ಅಧ್ಯಕ್ಷ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಬಡಾವಣೆ ಅಭಿವೃದ್ಧಿ ಯೋಜನೆ ಮೂಲಕ22 ಹಾಗೂ 23 ವಾರ್ಡ್ಗೆ60 ಲಕ್ಷ ರೂ. ಅನುದಾನ ನಿಗದಿಯಾಗಿತ್ತು. ನಿಗದಿತ ವಾರ್ಡ್ನಲ್ಲಿ ಕಾಮಗಾರಿ ಮಾಡದೆ ಅನುದಾನ ಸಂಪೂರ್ಣ ಮುಗಿದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ವಾರ್ಡ್ನಲ್ಲಿ ಕಾಮಗಾರಿ ಆಗಿದೆ ಎನ್ನುವುದು ತಿಳಿಸುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು.
ನಗರೋತ್ಥಾನ ಯೋಜನೆಯಲ್ಲಿ ಲೋಕೋಪಯೋಗಿ ಮೂಲಕ ರಾಷ್ಟ್ರೀಯ ಹೆದ್ದಾರಿಯಿಂದ ಗಾಯಿತ್ರಿ ಚಿತ್ರ ಮಂದಿರ ದವರೆಗೆ ರಸ್ತೆ ಕಾಮಗಾರಿಗೆ 20 ಲಕ್ಷ ರೂ. ನಿಗದಿಯಾಗಿದ್ದು, ಕಾಮಗಾರಿ ಅನುಮೋದನೆ ಪಡೆಯಲಾಗಿದೆ. ಆ ಕಾಮಗಾರಿಮಾಡದೆ ದ್ವೇಷದ ರಾಜಕೀಯ ಮಾಡಲಾಗುತ್ತಿದೆ. ಅನುಮೋದನೆ ಪಡೆದ ಕಾಮಗಾರಿ ಎಲ್ಲಿಗೆ ವರ್ಗಾವಣೆ ಮಾಡಿದ್ದಾರೆ, ಯಾವ ವಾರ್ಡ್ನಲ್ಲಿ ಕಾಮಗಾರಿ ಮಾಡಿದ್ದಾರೆ ಎನ್ನುವುದು ಅಧಿಕಾರಿಗಳು ಸಭೆಗೆ ತಿಳಿಸಬೇಕು ಎಂದು ಪಟ್ಟು ಹಿಡಿದರು.ಹೆಚ್ಚು ಅನುದಾನ ನೀಡುತ್ತೇವೆ: ಈ ವೇಳೆ ಶಾಸಕ ಬಾಲಕೃಷ್ಣಮಾತನಾಡಿ, ಎಲ್ಲಾ ವಾರ್ಡ್ಗಳನ್ನು ಪರಿಗಣಿಸಿ ಕಾಮಗಾರಿ ಮಾಡಲಾಗುತ್ತಿದೆ. ಸುಮ್ಮನೆ ಹಳೆಯ ವಿಷಯದ ಬಗ್ಗೆ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುವುದು ಬೇಡ, ಮುಂದೆ ಆಗಬೇಕಾಗಿರುವ ಕೆಲಸದ ಬಗ್ಗೆ ಮಾತನಾಡುವುದು ಒಳಿತು ಎಂದಾಗ, ಪುರಸಭೆ ಅಧ್ಯಕ್ಷ ನವೀನ್, ಶಾಸಕ ಮಾತಿಗೆ ಧ್ವನಿಗೂಡಿಸಿ, 23ನೇ ವಾರ್ಡ್ಗೆ ಮುಂದಿನ ಬಾರಿ ಹೆಚ್ಚು ಅನುದಾನ ನೀಡುತ್ತೇವೆ ಎಂದು ಹೇಳಿದರು.
ಸದಸ್ಯ ಪ್ರಕಾಶ್ ಆಕ್ರೋಶಗೊಂಡು ಮಾತನಾಡಿ, ಕಾಂಗ್ರೆಸ್ ಪಕ್ಷದ ಸದಸ್ಯ ಎಂದುಕಳೆದ ಎರಡೂವರೆ ವರ್ಷದಿಂದ ಒಂದು ರೂ.ಅನುದಾನನೀಡದೆಅನುಮೋದನೆಆಗಿರುವಕಾಮಗಾರಿ ಬೇರೆಡೆಗೆ ಸ್ಥಳಾಂತರ ಮಾಡುವುದು ಎಷ್ಟು ಸರಿ, ನನ್ನ ವಾರ್ಡ್ ನಲ್ಲಿ ಹೆಚ್ಚು ವಾಣಿಜ್ಯ ಸಂಕೀರ್ಣ ಇವೆ, ಅಲ್ಲಿ ತೆರಿಗೆ ಸಂಗ್ರಹ ಹೆಚ್ಚು ಬರುತ್ತಿದೆ. ಆದರೆ, ಕಾಮಗಾರಿ ಮಾಡಿಸದೆ ಇರಲು ಕಾರಣವೇನು? ಇದೇ ರೀತಿ ರಾಜಕೀಯ ಮಾಡುವುದಾದರೆ ತೆರಿಗೆ ಸಂಗ್ರಹ ಮಾಡುವುದು ನಿಲ್ಲಿಸಿ, ವಾರ್ಡ್ನ ಜನತೆ ಅಗತ್ಯ ಕಾಮಗಾರಿ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಬಾಡಿಗೆ ವಸೂಲಿ ಮಾಡುತ್ತಿಲ್ಲ: ಪುರಸಭೆಯ ವಾಣಿಜ್ಯ ಮಳಿಗೆಯನ್ನು ಹರಾಜಿನಲ್ಲಿ ಪಡೆದು, ರಿಜಿಸ್ಟರ್ ಮಾಡಿಕೊಂಡು ವರ್ಷ ಕಳೆದರೂ ಹಸ್ತಾಂತರ ಮಾಡದೆ ಹಳಬರನ್ನೇ ಮುಂದುವರಿಸಲಾಗುತ್ತಿದೆ, ಅಧಿಕಾರಿಗಳು ಸರಿಯಾಗಿ ಬಾಡಿಗೆ ವಸೂಲಿ ಮಾಡುತ್ತಿಲ್ಲ. ಈ ಬಗ್ಗೆ ಸದಸ್ಯರು ಪ್ರಶ್ನೆ ಮಾಡಿ ವರ್ತಕರ ಕೆಂಗಣ್ಣಿಗೆ ಗುರಿ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.
ತಾನು ಅಧ್ಯಕ್ಷನಾದ ಮೇಲೆ 20 ಲಕ್ಷ ರೂ. ಅಂಗಡಿ ಬಾಡಿಗೆ ಹಣವಸೂಲಿಮಾಡಲಾಗಿದೆ,ಯಾರುಬಾಡಿಗೆ ನೀಡುವುದಿಲ್ಲ, ಆ ಮಳಿಗೆಗೆ ಬೀಗ ಜಡಿಯಲಾಗುತ್ತಿದೆ. ಎಂದು ಅಧ್ಯಕ್ಷ ನವೀನ್ ಸಭೆಗೆ ತಿಳಿಸಿದರು.
ಸದಸ್ಯ ಪ್ರಕಾಶ್ ಮಾತನಾಡಿ,15ನೇ ವಾರ್ಡ್ನಲ್ಲಿ ಸರ್ಕಾರಿ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದಾಗ 15ನೇ ವಾರ್ಡ್ನ ಸದಸ್ಯೆ ರಾಣಿ ಮಾತನಾಡಿ, ನನ್ನ ವಾರ್ಡ್ನ ಬಗ್ಗೆ ಮಾತನಾಡು ವುದು ಬೇಡ, ನಾವು ಅದನ್ನು ಕೇಳುತ್ತೇವೆ ಎಂದರು.
ಇದಕ್ಕೆ ಸುಮ್ಮನಾಗದ ಪ್ರಕಾಶ್, ಸರ್ಕಾರಿ ಆಸ್ತಿ ಅನ್ಯರ ಪಾಲಾಗುತ್ತಿರುವುದನ್ನು ಪ್ರಶ್ನೆ ಮಾಡಿದ್ದೇನೆ ಹೊರತು, ನಿಮ್ಮ ವಾರ್ಡ್ನ ಕಾಮಗಾರಿ, ಅನುದಾನದ ಬಗ್ಗೆ ನಾನು ಪ್ರಶ್ನಿಸುತ್ತಿಲ್ಲ, ದಯಮಾಡಿ ಅಧ್ಯಕ್ಷರು ಹಾಗೂ ಶಾಸಕರು ತಮ್ಮ ಸದಸ್ಯರಿಗೆ ತಿಳಿಹೇಳುವುದು ಒಳಿತು ಎಂದರು.
ಸದಸ್ಯರ ಹೆದರಿಸುವುದು ಬೇಡ: ಪುರಸಭೆಯಲ್ಲಿನ ಸಮಸ್ಯೆ ಹಾಗೂ ಅಕ್ರಮದ ಬಗ್ಗೆ ಪ್ರಶ್ನೆ ಮಾಡುತ್ತೇನೆ ಹೊರತು, ನನ್ನ ವೈಯಕ್ತಿಕ ಉಪಯೋಗಕ್ಕಾಗಿ ಮಾತನಾಡುವುದಿಲ್ಲ, ನನ್ನ ಬಾಯಿ ಮುಚ್ಚಿಸಲು ನೀವು ಹೆದರಿಸುತ್ತೀರಾ? ಚರ್ಚೆ ಮಾಡ ಬೇಡಿ ಎಂದು ಹೇಳಿದರೆ ನಾನು ಸಭೆಯಿಂದ ಹೊರಗೆ ಹೋಗುತ್ತೇನೆ, ಸುಮ್ಮನೆ ಹೆದರಿಸುವುದು ತರವಲ್ಲ, ಕಳೆದ ಸಾಲಿನಲ್ಲಿಯೂ ಇದೇ ರೀತಿ ಹೆದರಿಸುತ್ತಿದ್ರಿ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಬಾಲಕೃಷ್ಣ, ನಾನು ಏಕವಚನದಲ್ಲಿ ಮಾತನಾಡುವ ವ್ಯಕ್ತಿಯಲ್ಲ, ನೀವು ಎಲ್ಲಾ ವಾರ್ಡ್ನ ಬಗ್ಗೆ ಕೇಳಿದಕ್ಕೆ ನಾನು ಏರುಧ್ವನಿಯಲ್ಲಿ ಮಾತನಾಡಿದೆ ಅಷ್ಟೆ ಹೊರತು, ಹೆದರಿಸಿಲ್ಲ ಎಂದು ಹೇಳಿದರು. ಪುರಸಭಾ ಉಪಾಧ್ಯಕ್ಷ ಯೋಗೀಶ್ ಇತರರಿದ್ದರು.