ಲಘುವಾಗಿ ಮಾತಾಡಿ ಕೆಣಕಬೇಡಿ: ಸಿದ್ದು ವಿರುದ್ದ ದೇವೇಗೌಡರು ಸಿಡಿಮಿಡಿ
Team Udayavani, Nov 10, 2017, 8:33 AM IST
ಹಾಸನ: “ನಿಮ್ಮನ್ನು, ಯಡಿಯೂರಪ್ಪನವರನ್ನು ಈವರೆಗೂ ಗೌರವದಿಂದಲೇ ಕಂಡಿದ್ದೇನೆ. ಎಂದೂ ಲಘುವಾಗಿ ಮಾತನಾಡಿಲ್ಲ. ನನ್ನನ್ನು ಕೆಣಕಬೇಡಿ. ಮಾತುಗಳ ಮೇಲೆ ಹಿಡಿತವಿರಲಿ. ನಾನು ಇಲ್ಲಿಯವರೆಗೂ ತಡೆದಿದ್ದೇನೆ. ಈಗ ನಿಮ್ಮ ವ್ಯಂಗ್ಯದ ಮಾತುಗಳನ್ನು ಕೇಳಲು ಹೇಸಿಗೆಯಾಗುತ್ತದೆ. ನಿಮ್ಮ ಹಣ, ಐಲು, ಧಿಮಾಕಿಗೆ ಜನರೇ ಬುದ್ಧಿ ಕಲಿಸ್ತಾರೆ ಕಾಯಿರಿ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರಂಭಿಸಿರುವ “ಕರ್ನಾಟಕ ವಿಕಾಸ ವಾಹಿನಿ’ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. “ದೇವೇಗೌಡರು ಒಂದೂವರೆ ವರ್ಷ, ಕುಮಾರಸ್ವಾಮಿಯವರು 20 ತಿಂಗಳು ವಿಕಾಸ ಮಾಡಲಿಲ್ಲವೇ? ಈಗ ಕುಮಾರಸ್ವಾಮಿ ಕಮೋಡ್, ದಿಂಬು ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹಾಗಾದರೆ, ನಾನು ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಮಾಡಲಿಲ್ಲವಾ? ಕುಮಾರಸ್ವಾಮಿ 20 ತಿಂಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಲಿಲ್ಲವಾ? ಹೃದಯದ ಶಸ್ತ್ರಚಿಕಿತ್ಸೆಯಾಗಿ ಒಂದು ತಿಂಗಳಾಗಿದೆ. ಅಂತಹ ಕುಮಾರಸ್ವಾಮಿಯವರ ಬಗ್ಗೆ ಮಾತನಾಡಲು ಕನಿಷ್ಠ ಸೌಜನ್ಯ ಬೇಡವಾ? ಹಳ್ಳಿಯಲ್ಲಿ ಇಂಡಿಯನ್ ಕಮೋಡ್ ಇರುತ್ತವೆ. ಅಲ್ಲಿ ಶೌಚಕ್ಕೆ ಕೂರಲು ಆಗಲ್ಲ. ಫಾರಿನ್ ಕಮೋಡ್ ತೆಗೆದುಕೊಂಡು ಹೋದರೆ ಅದಕ್ಕೂ ವ್ಯಂಗ್ಯವಾಡಬೇಕಾ’ ಎಂದು ಕಿಡಿ ಕಾರಿದರು.