ವರ್ಷದಲ್ಲೇ ರೈಲು ಮಾರ್ಗಕ್ಕೆ ಚಾಲನೆ
Team Udayavani, Jul 21, 2018, 2:51 PM IST
ಹಾಸನ: ಚಿಕ್ಕಮಗಳೂರು – ಬೆಂಗಳೂರು ನಡುವೆ ನೇರ ರೈಲು ಮಾರ್ಗ ನಿರ್ಮಾಣದ ಕೊಂಡಿಯಾಗಿರುವ ಹಾಸನ – ಬೇಲೂರು ರೈಲು ಮಾರ್ಗದ ಸಮೀಕ್ಷೆಯನ್ನು ಅಕೋಬರ್ನೊಳಗೆ ಪೂರ್ಣಗೊಳಿಸಿ ಈ ವರ್ಷವೇ ನಿರ್ಮಾಣಕ್ಕೆ ಚಾಲನೆ ನೀಡಲು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಮ್ಮತಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ದೆಹಲಿ ಯಲ್ಲಿ ರೈಲ್ವೆ ಸಚಿವರನ್ನು ಮಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ತಾವು ಭೇಟಿಯಾಗಿದ್ದು, ಬೇಲೂರು – ಹಾಸನ ನಡುವಿನ 38 ಕಿ.ಮೀ. ರೈಲು ಮಾರ್ಗವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಶೇ 50:50 ಅನುಪಾತದಲ್ಲಿ ನಿರ್ಮಾಣ ಮಾಡಲು ರೈಲ್ವೆ ಸಚಿವರು ಒಪ್ಪಿಕೊಂಡಿದ್ದಾರೆ. ಈ ಮಾರ್ಗದ ನಿರ್ಮಾಣವನ್ನು ರೈಲ್ವೆಯ ಲಿಂಕ್ ಡಾಕ್ಯೂಮೆಂಟ್ನಲ್ಲಿ ಸೇರಿಸಿ ಅಕ್ಟೋಬರ್ ನಂತರ ರೈಲು ಮಾರ್ಗ ನಿರ್ಮಾಣದ ಟೆಂಡರ್ ಕರೆಯುವುದಾಗಿಯೂ ರೈಲ್ವೆ ಸಚಿವರು ಸ್ಪಷ್ಟಪಡಿಸಿದರು ಎಂದು ಹೇಳಿದರು.
ಚಿಕ್ಕಮಗಳೂರು – ಬೇಲೂರು – ಸಕಲೇಶಪುರ ರೈಲು ಮಾರ್ಗ ನಿರ್ಮಾಣಕ್ಕೆ ಈ ಹಿಂದೆಯೇ ಮಂಜೂರಾಗಿದೆ. ಆದರೆ, ಬೇಲೂರು – ಸಕಲೇಶಪುರ ಮಾರ್ಗ ನಿರ್ಮಾಣಕ್ಕಿಂತ ಬೇಲೂರು – ಹಾಸನ ನಡುವೆ ರೈಲು ಮಾರ್ಗ ನಿರ್ಮಾಣವಾದರೆ, ಚಿಕ್ಕಮಗಳೂರು- ಬೆಂಗಳೂರು ನಡುವೆ ನೇರ ರೈಲು ಸಂಪರ್ಕಕ್ಕೆ ಅನುಕೂಲವಾಗುತ್ತದೆ ಎಂದು ರೇವಣ್ಣ ಹೇಳಿದರು.
ಚಿಕ್ಕಮಗಳೂರು – ಬೇಲೂರು ಮತ್ತು ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗದ ಭೂ ಸ್ವಾಧೀನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೇಲೂರಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ತೆರೆಯಲೂ ನಿರ್ಧರಿಸಲಾಗಿದೆ ಎಂದು ರೇವಣ್ಣ ಹೇಳಿದರು.
ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ ನಿರ್ಮಾಣಕ್ಕೂ ರೈಲ್ವೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಮಾರ್ಚ್
ಅಂತ್ಯದ ವೇಳೆಗೆ ಈ ಮಾರ್ಗದ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ನಿರ್ಮಾಣ ಚುರುಕುಗೊಳಿಸಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈಲ್ವೆ ಸಚಿವರನ್ನು ಒತ್ತಾಯಿಸಿದರು ಎಂದರು.
ಮಂಗಳೂರು – ಹಾಸನ – ಬೆಂಗಳೂರು – ಚನ್ನೈ ನಡುವೆ ಶತಾಬ್ದಿ ಎಕ್ಸ್ಪ್ರೆಸ್ ರೈಲು ಸಂಚಾರ, ಮಂಗಳೂರು – ಬೆಂಗಳೂರು ನಡುವೆ ಹೆಚ್ಚು ರೈಲುಗಳ ಸಂಚಾರ ಆರಂಭಿಸುವಂತೆಯೂ ಮನವಿ ಮಾಡಲಾಗಿದೆ ಎಂದು ವಿವರ ನೀಡಿದರು. ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.