ಇ- ಕೆವೈಸಿ ಆರಂಭ: ಪಡಿತರ ಪಡೆಯಲು ಪರದಾಟ
Team Udayavani, Dec 9, 2019, 3:00 AM IST
ಚನ್ನರಾಯಪಟ್ಟಣ: ಇ-ಕೆವೈಸಿ ಆರಂಭಗೊಂಡಿದ್ದು ಡಿಸೆಂಬರ್ ಹಾಗೂ ಜನವರಿ ತಿಂಗಳ ಮೊದಲ ಹತ್ತು ದಿವಸ ಪಡಿತರ ಆಹಾರ ಧಾನ್ಯ ವಿತರಣೆಯನ್ನು ಆಹಾರ ಇಲಾಖೆ ಮಾಡುವುದಿಲ್ಲ. ಈ ಬಗ್ಗೆ ಪಡಿತರ ಆಹಾರ ಪಡೆಯುವವರಿಗೆ ಮಾಹಿತಿ ಕೊರತೆಯಿಂದ ನಿತ್ಯವೂ ನ್ಯಾಯಬೆಲೆ ಅಂಗಡಿ ಸುತ್ತುತ್ತಿದ್ದಾರೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಪ್ರಾರಂಭ ಮಾಡಿದ್ದು ಪಡಿತರ ಚೀಟಿದಾರರು ತಮ್ಮ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ನೀಡಬೇಕಿದೆ. ಈ ಪ್ರಕ್ರಿಯೆ ತಿಂಗಳ ಮೊದಲ ವಾರ ಇರುವುದರಿಂದ ಆಹಾರ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಅನರ್ಹರಿಗೆ ಕಾರ್ಡ್ ಹಿಂಪಡೆಯಲು ಸರ್ಕಾರ ಆದೇಶಿಸಿತ್ತು ಇದರಿಂದ ನೂರಾರು ಮಂದಿ ಹಿಂಪಡೆದಿದ್ದರು.
ಅಂಗಡಿ ಬಾಗಿಲು ಹಾಕುವಂತಿಲ್ಲ: ಇನ್ನು ಇ-ಕೆವೈಸಿ ಮಾಡುವುದರಿಂದ ಸಾಕಷ್ಟು ಪಡಿತರ ಚೀಟಿಗಳು ಅನರ್ಹಗೊಳ್ಳುವ ಸಧ್ಯತೆ ಇದ್ದು ಸರ್ಕಾರಿ ಈಗಾಗಲೇ ರಾಜ್ಯಾದ್ಯಂತ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಬಾಗಿಲು ಹಾಕದೇ ಎಂದಿನಂತೆ ಬೆಳಗ್ಗೆ 10ರಿಂದ ಸಂಜೆ ನಾಲ್ಕು ಗಂಟೆಯ ವರೆಗೆ ಬಾಗಿಲು ತೆರೆದು ಪಡಿತರ ಕುಟುಂಬದ ಬೆರಳಚ್ಚು ಪಡೆಯುವ ಮೂಲಕ ಆಹಾರ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ಸಿಗೆ ಸಹಕಾರ ನೀಡಬೇಕಿದೆ.
ಇ-ಕೆವೈಸಿಗೆ ನೀರಸ ಪ್ರತಿಕ್ರಿಯೆ: ಈಗಾಗಲೆ ರಾಗಿ, ಜೋಳ, ಭತ್ತ ಸೇರಿದಂತೆ ವಿವಿಧ ಬಳೆಗಳು ಕಟಾವು ಹಂತದಲ್ಲಿದ್ದು, ರೈತರು, ಕೃಷಿ ಕಾರ್ಮಿಕರು ಹಾಗೂ ಇತರ ಕೂಲಿ ಕಾರ್ಮಿಕರು ಬೆಳಗ್ಗೆ ಎದ್ದು ಹೊಲ, ಗದ್ದೆಗಳ ಕಡೆ ತೆರಳುತ್ತಿದ್ದಾರೆ ಇಂತಹ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿ ಕಡೆ ಯಾರೂ ಆಗಮಿಸುತ್ತಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಪಡಿತರ ಚೀಟಿ ಹೊಂದಿರುವವರು ಸಾಕಷ್ಟು ಮಂದಿ ಕೂಲಿ ಕಾರ್ಮಿಕರೂ ಬೆಳಗ್ಗೆ ಎದ್ದು ಗಾರೆ ಕೆಲಸ, ಮಾರುಕಟ್ಟೆ ಕೆಲಸ ಸೇರಿದಂತೆ ಇತರ ಕೂಲಿ ಕೆಲಸಕ್ಕಾಗಿ ತೆರಳುತ್ತಿರುವುದರಿಂದ ನ್ಯಾಯಬೆಲೆ ಅಂಗಡಿ ಬಳಿ ಸುಳಿಯುತ್ತಿಲ್ಲ.
ನೆಟ್ವರ್ಕ್ ಪ್ರಾಬ್ಲಂ: ಇ-ಕೆವೈಸಿಗೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಅಷ್ಟಾಗಿ ಸಮಸ್ಯೆಗಳು ಕಾಣುತ್ತಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ತಂತ್ರಜ್ಞಾನ ತೊಂದರೆಗಳು ಉದ್ಭವವಾಗುತ್ತಿವೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಅಂತರ್ಜಾಲದ ಸಮಸ್ಯೆ ಇರುವುದಿಲ್ಲ 9 ಗಂಟೆಯ ನಂತರ ರಾತ್ರಿ 7 ಗಂಟೆಯ ವರೆಗೆ ನೆಟ್ವರ್ಕ್ ದೊರೆಯದೆ ಪರದಾಡುವಂತಾಗಿದೆ. ಇಂತಹಾ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರ ನಿಗದಿ ಮಾಡಿರುವ ವೇಳೆಯಲ್ಲಿ ಬಾಗಿಲು ತೆಗೆದರೆ ಏನು ಪ್ರಯೋಜನ ಎಂದು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುವಂತಾಗಿದೆ.
ತಳಮಳ ಶುರು: ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದರಿಂದ ಆಹಾರ ಇಲಾಖೆ ಸರ್ವರ್ ಒತ್ತಡಕ್ಕೆ ಸಿಲುಕಿತ್ತು. ಪಡಿತರ ವಿತರಣೆ ಮಂದಗತಿಯಲ್ಲಿ ಸಾಗಿತ್ತು. ಜನ ಆಧಾರ್ ಪಡೆಯಲು ಖಾಸಗಿ ಆನ್ ಲೈನ್ ಸೆಂಟರ್ಗಳ ಎದುರು ಆಹಾ ರಾತ್ರಿ ಜಾಗರಣೆ ಮಾಡಿದ್ದರು. ಪದೇ ಪದೆ ಇಂತಹ ಸಮಸ್ಯೆಗಳು ಕಂಡು ಬಂದ ಮೇಲೂ ಸಾಹಸದಿಂದ ಹಿಂದೆ ಸರಿದ ಇಲಾಖೆ ಈಗ ಕಡ್ಡಾಯವಾಗಿ ಇ-ಕೆವೈಸಿ ಮುಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದೆ. ಈ ಪ್ರಕ್ರಿಯೆಯಲ್ಲಿ ಕುಟುಂಬದ ಒಬ್ಬ ಸದಸ್ಯ ಹೊರಗೆ ಉಳಿದರೂ ಪೂರ್ಣಗೊಳ್ಳುವುದಿಲ್ಲ . ದುಡಿಮೆಗಾಗಿ ಹೊರ ರಾಜ್ಯ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳಲ್ಲಿ ತಳಮಳ ಶುರುವಾಗಿದೆ.
ಇಲಾಖೆಯಿಂದ ವೆಚ್ಚ ಪಾವತಿ: ಇ-ಕೆವೈಸಿಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗೆ ತಗುಲಲಿರುವ ವೆಚ್ಚವನ್ನು ಇಲಾಖೆ ಭರಿಸಲಿದೆ. ಪ್ರತಿ ಸದಸ್ಯನ ಆಧಾರ್ ಮತ್ತು ಬೆರಳಚ್ಚು ಜೋಡಣೆಗೆ ಐದು ರೂ.ಗಳನ್ನು ನಿಗಧಿ ಪಡಿಸಿದೆ ಕುಟುಂಬಕ್ಕೆ ಗರಿಷ್ಠ 20 ರೂ. ಮಿತಿಯಿದೆ. ಆನ್ಲೈನ್ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಮೇಲೆ ಒಟ್ಟು ಮೊತ್ತವನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಾವತಿ ಮಾಡಲಿದೆ.
ತಾಲೂಕಿನಲ್ಲಿ 102 ನ್ಯಾಯಬೆಲೆ ಅಂಗಡಿಗಳು: ತಾಲೂಕಿನಲ್ಲಿ 102 ನ್ಯಾಯಬೆಲೆ ಅಂಗಡಿಗಳಿದ್ದು ದಂಡಿಗನಹಳ್ಳಿ ಹೋಬಳಿಯಲ್ಲಿ 18, ಶ್ರವಣಬೆಳಗೊಳ ಹೋಬಳಿ 17, ಹಿರೀಸಾವೆ ಹೋಬಳಿ 18, ಬಾಗೂರು ಹೋಬಳಿ 14, ಕಸಬಾ ಹೋಬಳಿ 10, ನುಗ್ಗೇಹಳ್ಳಿ ಹೋಬಳಿ 14 ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 11 ನ್ಯಾಯಬೆಲೆ ಅಂಗಡಿಗಳಿದ್ದು 80 ಸಾವಿರ ಕುಟುಂಬಗಳಿಗೆ ಪ್ರತಿ ತಿಂಗಳು ಪಡಿತರ ಆಹಾರ ವಿತರಣೆ ಮಾಡಲಾಗುತ್ತಿದೆ.
ಹೆಚ್ಚುವರಿ 20 ನ್ಯಾಯಬೆಲೆ ಅಂಗಡಿಗೆ ತೆರೆಯಲು ಆಹ್ವಾನ: ಒಂದು ಸಾವಿರಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಯ ಕೇಂದ್ರಗಳಲ್ಲಿ ಹೆಚ್ಚುವರಿ ನ್ಯಾಯಬೆಲೆ ಅಂಗಡಿ ತೆರೆಯಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಕಸಬಾ ಹೋಬಳಿಯ ಬೆಲಸಿಂದ, ಶ್ರವಣೇರಿ, ದಿಂಡಗೂರು, ಹಾರಸೋಮನಹಳ್ಳಿ, ಶೆಟ್ಟಿಹಳ್ಳಿ, ಶ್ರವಣಬೆಳಗೊಳ ಹೋಬಳಿ ಹುಳಿಗೆರೆ. ದಂಡಿಗನಹಳ್ಳಿ ಹೋಬಳಿಯಲ್ಲಿ ತಿಪ್ಪೂರು, ಜೋಡಿಘಟ್ಟೆ, ಹಿರೇಹಳ್ಳಿ, ತರಭೇನಹಳ್ಳಿ, ಅಗ್ರಹಾರ, ಪಡುವನಹಳ್ಳಿ. ಬಾಗೂರು ಹೋಬಳಿಯ ಎಂ.ಶಿವರ, ಕೆ.ಬೈರಾಪುರ, ಬಿದರೆ, ಬಾಗೂರು. ನುಗ್ಗೇಹಳ್ಳಿ ಹೋಬಳಿ ಹೊನ್ನಮಾರನಹಳ್ಳಿ ಇಲ್ಲಿಗೆ ಈಗಾಗಲೆ ಅರ್ಜಿಗಳು ಬಂದಿವೆ. ಶ್ರವಣಬೆಳಗೊಳ ಹೋಬಳಿ ರಾಚೇನಹಳ್ಳಿ, ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ, ದೊಡ್ಡಮತಿಘಟ್ಟ ಹಾಗೂ ಮಾಳೇನಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ.
ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಕಾರ್ಡ್ ಹಿಂದಿರುಗಿಸಿದ್ದರು. ಇ-ಕೆವೈಸಿ ಪ್ರಾರಂಭಿಸಲಾಗಿದೆ ಇದು ತಿಂಗಳ ಮೊದಲ ಹತ್ತು ದಿನ ನಡೆಯಲಿದ್ದು ನಂತರ ಎಂದಿನಂತೆ ಪಡಿತರ ಆಹಾರ ನೀಡಲಾಗುತ್ತದೆ.
-ಎಚ್.ಎಸ್.ಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ
* ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ
Lok Sabha Election: ಕಾಂಗ್ರೆಸ್ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ
Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ
Hasan: ಫೋನ್ ಕದ್ದಾಲಿಸಿದ್ದರೆ ತನಿಖೆ ಮಾಡಲಿ… ಕುಮಾರಸ್ವಾಮಿ ತಿರುಗೇಟು
Hasana: ಪಕ್ಕದಲ್ಲೇ ಕುಳಿತು ಹಳ್ಳ ತೋಡಿದ್ದೂ ನನಗೆ ನೆನಪಿದೆ: ಡಿಕೆಶಿಗೆ ಎಚ್ಡಿಕೆ ತಿರುಗೇಟು