ಪದವೀಧರ ಶಿಕ್ಷಕರ ಬೇಡಿಕೆ ಈಡೇರಿಸಿ
ಪದವಿ, ವಿದ್ಯಾರ್ಹತೆ, ಸೇವಾನುಭವ ಹೊಂದಿದ್ದರೂ ಪದೋನ್ನತಿ ನೀಡಿಲ್ಲ: ಆರೋಪ
Team Udayavani, Jun 28, 2019, 2:56 PM IST
ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಬೇಲೂರು ತಾಲೂಕು ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಬೇಲೂರು: ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಈಗಾಗಲೇ ಪದವೀಧರರಿಗೆ ಬೋಧನಾ ಕ್ರಮದಲ್ಲಿ ಅನ್ಯಾಯವಾಗುತ್ತಿದೆ ಎಂದು ಹತ್ತಾರು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಬೇಲೂರು ತಾಲೂಕು ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಕೀರ್ ಆಲಿ ಖಾನ್ ಮನವಿ ಸಲ್ಲಿಸಿದ ನಂತರ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಮಂಜೇಗೌಡ, 1ರಿಂದ 7ನೇ ತರಗತಿಗೆ ನೇಮಕವಾದ ನಾವು 2005 ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೂ ಬೋಧಿಸುತ್ತಿದ್ದೇವೆ ಎಂದರು.
ಸೇವಾ ಹಿರಿತನ ಕಡೆಗಣನೆ: ಪದವಿ ಹಾಗೂ ವಿದ್ಯಾರ್ಹತೆ ಸೇವಾನುಭವ ಹೊಂದಿದ್ದರೂ ನಮ್ಮನ್ನು ಪರಿಗಣಿದೇ ಉಲ್ಲೇಖ (1) ರ ಆದೇಶದನ್ವಯ ಪ್ರಾಥಮಿಕ ಶಾಲಾ ಶಿಕ್ಷಕರು (1-5 ಪಿಎಸ್ ಟಿ) ವೃಂದಕ್ಕೆ ಸೇರ್ಪಡೆ ಮಾಡಿ ಅನ್ಯಾಯವಾಗಿರುತ್ತದೆ. ಆದ್ದರಿಂದ ನಮಗೆ ನ್ಯಾಯ ದೊರೆಯುವವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು(1-5) ಆದೇಶದಂತೆ 1 ರಿಂದ 5 ನೇ ತರಗತಿಗಳ ವಿಷಯಗಳನ್ನು ಮಾತ್ರ ಬೋಧಿಸುತ್ತಿದ್ದೇವೆ. 2019 ರ ಜುಲೈ 1 ರಿಂದ 6 ರಿಂದ 8ನೇ ತರಗತಿ ಬೋಧನಾ ಕಾರ್ಯ ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ತರಬೇತಿ ಬಹಿಷ್ಕರಿಸಲು ನಿರ್ಧಾರ: ಇನ್ನು ಮುಂದೆ ಇಲಾಖೆ ಆಯೋಜಿಸುವ 6 ರಿಂದ 8 ನೇ ತರಗತಿಗಳಿಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ನಾವೂ ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಬಿ.ಫಾಲಾಕ್ಷ, ಪ್ರಧಾನ ಕಾರ್ಯದರ್ಶಿ ಶಶಿಧರ್, ಕೋಶಾಧ್ಯಕ್ಷ ರವಿನಾಯ್ಕ, ನಿರ್ದೇಶಕರಾದ ಗಂಗಾಧರ್ ಶಂಕರಪ್ಪ. ಜಯಣ್ಣ. ಈರಯ್ಯ, ಮೋಹನ್ಕುಮಾರ್, ಮಾರುತಿ, ಸುಧಾ, ಆನಂದ್ ಮೊದ ಲಾದವರಿದ್ದರು.