ಚುನಾವಣೆಗೆ ಹೆದರಿ ಗೌಡ್ರು ರಾಜ್ಯಸಭೆಗೆ ಪ್ರವೇಶ
Team Udayavani, Jun 13, 2020, 6:35 AM IST
ಚನ್ನರಾಯಪಟ್ಟಣ: ಸಾರ್ವಜನಿಕ ಚುನಾವಣೆಯಲ್ಲಿ ಜನರು ತಿರಸ್ಕಾರ ಮಾಡುವುದರಿಂದ ಎಚ್.ಡಿ. ದೇವೇಗೌಡರು ಹಿಂಬಾಗಿಲ ಮೂಲಕ ರಾಜ್ಯ ಸಭೆ ಪ್ರವೇಶ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಟೀಕಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎನ್ಎಸ್ ಐಬಿ, ಯುವ ಕಾಂಗ್ರೆಸ್ ಹಾಗೂ ಸೋಷಿಯಲ್ ಮೀಡಿಯಾ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದಲ್ಲಿ ನೇರವಾಗಿ ರಾಜಕೀಯ ಮಾಡಿ ಅಧಿಕಾರಕ್ಕೆ ಬರುವುದು ಗೊತ್ತಿಲ್ಲ. ವಾಮಮಾರ್ಗದಲ್ಲಿ ಅಧಿಕಾರ ಮಾಡುವುದು ಇವರ ಗುಣವಾಗಿದೆ ಎಂದು ಲೇವಡಿ ಮಾಡಿದರು. ಇಡೀ ಕುಟುಂಬವೇ ಅಧಿಕಾರಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ಇಳಿ ವಯಸ್ಸಿನಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುತ್ತಿದ್ದಾರೆ. ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಯಾಗಿ ದೇವೇಗೌಡರ ಮೊಮ್ಮಗನನ್ನು ಗೆಲ್ಲಿಸಿದ್ದೇವೆ.
ಸಂಸದರಾದ ಮೇಲೆ ಸೌಜನ್ಯಕ್ಕಾದರೂ ಧನ್ಯವಾದ ಹೇಳದ ಕುಟುಂಬ ಇವರದು ಎಂದು ವ್ಯಂಗ್ಯವಾಡಿದರು. ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಕ್ಷೇತ್ರದ ಅಭಿವೃದಿಗೆ ಶ್ರಮಿಸಿಲ್ಲ ಎಂದು ಮಾಜಿ ಶಾಸಕಪುಟ್ಟೇಗೌಡ ಆರೋಪಿಸಿದರು. ದೇವೇಗೌಡರ ಹೆಸರಿನಲ್ಲಿ ಶಾಸಕರಾಗಿರುವ ಬಾಲಕೃಷ್ಣ ಅವರು, ಕೆಲವು ಇಲಾಖೆಯ ಗುತ್ತಿಗೆಯನ್ನು ತನ್ನ ಹಿಂಬಾಲಕರಿಗೆ ಸೀಮಿತಗೊಳಿಸಿದ್ದಾರೆ.
ಇದಕ್ಕೆ ಕಡಿವಾಣ ಹಾಕಬೇಕಾದರೆ ಕ್ಷೇತ್ರದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು. ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಶಾಸಕರ ಲೋಪವನ್ನು ಮುಂದಿಟ್ಟುಕೊಂಡು ಪಕ್ಷದ ಕಾರ್ಯಕರ್ತರು ಗ್ರಾಪಂ ಚುನಾವಣೆಗೆ ಸಿದಟಛಿರಾಗಬೇಕು ಎಂದರು. ಕ್ಷೇತ್ರದ ವೀಕ್ಷಕಿ ಕಮಲಾಕ್ಷಿ , ತಾಲೂಕು ಉಸ್ತುವಾರಿ ಸಂಜಯ್ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಉಪಸ್ಥಿತರಿದ್ದರು.