ಬಹುಗ್ರಾಮ ನೀರಿನ ಯೋಜನೆಗೆ ಗ್ರಾಪಂ ಸಹಕಾರ ಅಗತ್ಯ
Team Udayavani, Dec 15, 2019, 3:00 AM IST
ಅರಸೀಕರೆ: ತಾಲೂಕಿನ ಜನತೆಗೆ ಹೇಮಾವತಿ ನದಿಮೂಲದ ಶುದ್ಧ ಕುಡಿಯುವ ನೀರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೂರೈಕೆಯಾಗಲಿದ್ದು, ಈ ಯೋಜನೆ ಯಶಸ್ವಿಯಾಗಲು ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ವಾಟರ್ ಮೆನ್ಗಳ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಬಹುಗ್ರಾಮದ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ 530 ಹಳ್ಳಿಗಳಿಗೆ ಕುಡಿಯುವ ಪೂರೈಕೆಯ ಹಿನ್ನೆಲೆಯಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಮುಕ್ತವಾಗಿ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮೆನ್ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನೊಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಸತತ ಬರಗಾಲದ ಹಿನ್ನೆಲೆಯಲ್ಲಿ ಅಂತರ್ಜಲ ಬತ್ತಿ ಕೆಲವು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಫ್ಲೋರೈಡ್ಯುಕ್ತ ನೀರನ್ನು ಜನರು ಕುಡಿಯುತ್ತಿದ್ದ ಜನರು ಫ್ಲೋರೋಸಿಸ್ ಮೊದಲಾದ ರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾವು ಸದನದಲ್ಲಿ ಹೋರಾಟ ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 245 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದರು.
ಹೈದರಾಬಾದ್ನ ಮೇಘಾ ಕಂಪನಿ ಕಾಮಗಾರಿ ಕೈಗೊಂಡಿದ್ದು, ಶೇ.99 ಭಾಗ ಕೆಲಸ ಸಂಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಪೈಪ್ಲೈನ್ಗಳ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರದ 250 ಹಳ್ಳಿಗಳಿಗೆ ಹೇಮಾವತಿ ನದಿಯ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಿ ಪರಶೀಲಿಸಲಾಗುತ್ತಿದೆ. ಆದ್ದರಿಂದ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮೆನ್ ಗಳು ತಮ್ಮ ತಮ್ಮ ಗ್ರಾಪಂವ್ಯಾಪ್ತಿಯ ಪ್ರತಿ ಹಳ್ಳಿಗಳ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಆಕಸ್ಮಾತ್ ಯಾವುದೇ ಲೋಪ ದೋಷಗಳು ಉಂಟಾಗುತ್ತಿದ್ದರೇ ಈ ಸಭೆಯಲ್ಲಿ ಗಮನಕ್ಕೆ ತಾವುಗಳು ತಂದರೆ ಪರಿಹರಿಸುವ ಪ್ರಯತ್ನವನ್ನು ನಾವುಗಳೆಲ್ಲರೂ ಸೇರಿ ಮಾಡಬಹುದಾಗಿದೆ. ಆದ್ದರಿಂದ ಸಂಬಂಧಪಟ್ಟ ಕಾವೇರಿ ನಿಗಮದ ಅಧಿಕಾರಿಗಳು ಕಂಪನಿಯ ಅಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಕರೆದು ಎಲ್ಲರ ಸಮ್ಮುಖ ದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎಂದು ತಮ್ಮ ಸಲಹೆ ಸೂಚನೆ ಪಡೆಯಲಾಗುತ್ತಿದೆ. ಕ್ಷೇತ್ರದ 36 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮೆನ್ಗಳು ಈ ಬಗ್ಗೆ ಮುಕ್ತವಾಗಿ ತಮ್ಮ ಸಮಸ್ಯೆ ಗಳನ್ನು ಸಭೆಗೆ ತಿಳಿಸಿ ಅವುಗಳ ಪರಿಹಾರಕ್ಕೆ ಮಾರ್ಗವನ್ನು ಕಂಡು ಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ವ್ಯರ್ಥವಾದ ಶುದ್ಧ ಗಂಗಾ ನೀರಿನ ಘಟಕ: ತಮ್ಮ ಕ್ಷೇತ್ರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸ್ಥಾಪಿಸಿದ್ದ ಶುದ್ಧ ಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಸ್ಥಾಪಿಸಿರುವ ಶುದ್ಧಗಂಗಾ ನೀರಿನ ಘಟಕಗಳನ್ನು ಹೊರತು ಪಡಿಸಿ ಉಳಿದ ಘಟಕಗಳು ಸಂಪೂರ್ಣವಾಗಿ ವಿಫಲವಾಗಿವೆ.
ಇವುಗಳಿಗೆ ಅಳವಡಿಸಿರುವ ಯಂತ್ರೋಪಕರಣಗಳು ಕಳಪೆ ಯಾಗಿದ್ದು, ಎಲ್ಲವು ಸ್ಥಗಿತವಾಗಿದೆ. ಇತ್ತೀಚೆಗೆ ಈ ಬಗ್ಗೆ ಸಚಿವರಾದ ಈಶ್ವರಪ್ಪನವರು ಶುದ್ಧಗಂಗಾ ನೀರಿನ ಘಟಕಗಳ ಸ್ಥಾಪನೆಯಲ್ಲಿ ಲೋಪ ದೋಷಗಳು ಉಂಟಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಂತೆಯೇ ತಾವೂ ಕೂಡ ಈ ಎಲ್ಲಾ ನೀರಿನ ಘಟಕಗಳ ಸ್ಥಾಪನೆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈ ಗೊಳ್ಳಲು ಸಚಿವರನ್ನು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದೇನೆ ಎಂದರು.
ಈ ಸಭೆಯಲ್ಲಿ ಜಿಪಂ ಸದಸ್ಯರಾದ ಪಟೇಲ್ ಶಿವಪ್ಪ, ಮಾಡಾಳು ಸ್ವಾಮಿ, ಬಿಳಿಚೌಡಯ್ಯ, ವತ್ಸಲಾ , ಲೋಲಾಕ್ಷಮ್ಮ, ತಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಪ್ರೇಮಾ, ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ಅಭಿಯಂತರರಾದ ಶಿವಾನಂದ್ , ಮೇಘಾ ಕಂಪನಿಯ ವ್ಯವಸ್ಥಾಪಕ ವಿನೋದ್ ಹಾಗೂ ಇನ್ನಿತರರು ಹಾಜರಿದ್ದರು.
ಪ್ರಾಯೋಗಿಕ ನೀರು ಸರಬರಾಜು: ನೀರು ಸರಬರಾಜಿಗಾಗಿ ತಾಲೂಕಿನ 16 ಕಡೆಗಳಲ್ಲಿ ಟ್ಯಾಂಕ್ಗಳ ನಿರ್ಮಿಸಿದ್ದು. ಎಲ್ಲಾ ಗ್ರಾಮಗಳಲ್ಲಿ ಪೈಪ್ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ತಾಲೂಕಿನ 250 ಗ್ರಾಮಗಳಿಗೆ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಶುದ್ಧ ಕುಡಿಯುವ ನೀರು ಜನತೆಗೆ ಲಭ್ಯವಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಜ್ಯಾಕ್ವೆಲ್ ನಿಂದ ನೀರು ಸರಬರಾಜು: ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಂಜಿತಾ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಸಮೀಪ ಹೇಮಾವತಿ ನದಿ ಕಾಲುವೆ ಬಳಿಯ ಜ್ಯಾಕ್ವೆಲ್ ಘಟಕದಿಂದ ನದಿ ಮೂಲದ ನೀರನ್ನು ಲಿಫ್ಟ್ ಮಾಡಿ ಗಂಡಸಿ ಹ್ಯಾಂಡ್ ಪೋಸ್ಟ್ನ ಹಳೇ ಸಂತೇ ಮೈದಾನದಲ್ಲಿ ನಿರ್ಮಿಸಿರುವ ಜಲ ಶುದ್ಧೀಕರಣ ಘಟಕಕ್ಕೆ ತಂದು ನೀರನ್ನು ಶುದ್ಧೀಕರಿಸಿದ ನಂತರ ತಾಲೂಕಿನ 530 ಹಳ್ಳಿಗಳಿಗೆ ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದರು.