ಸಂಚಾರಕ್ಕೆ ಅಯೋಗ್ಯವಾದ ಹಗರೆ – ಹಳೇಬೀಡು ರಸ್ತೆ
Team Udayavani, Oct 20, 2019, 3:00 AM IST
ಹಳೇಬೀಡು: ಹೋಬಳಿಯ ಹಗರೆ ಮತ್ತು ಹಳೇಬೀಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮೊಳಕಾಲುದ್ದದ ಗುಂಡಿಗಳು: ಹಗರೆಯಿಂದ ಹಳೇಬೀಡು ತಲುಪಲು ಕೇವಲ 10 ಕಿಲೋಮೀಟರ್ ದೂರವಿದೆ. ಆದರೆ ಈ ರಸ್ತೆ ಮಾತ್ರ ಮೊಳಕಾಲುದ್ದ ಗುಂಡಿಗಳನ್ನ ಹೊಂದಿದ್ದು. ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ರಾತ್ರಿಯ ವೇಳೆ ವಾಹನಗಳು ಈ ರಸ್ತೆಯಾಲ್ಲಿ ಬರುವಾಗ ಹೆಚ್ಚು ಅಪಘಾತಗಳು ಸಂಭವಿಸಿರುವ ಉದಾರಣೆಗಳಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಭಾಗದ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಇಲ್ಲಿನ ರಸ್ತೆ ತೀರಾ ಕಳಪೆಮಟ್ಟದ್ದಾಗಿದ್ದು, ಡಾಂಬರು ಹಾಕಿದ ಆರೇಳು ತಿಂಗಳಿನಲ್ಲಿಯೇ ಸಂಪೂರ್ಣ ಕಿತ್ತು ಹೋಗಿದ್ದು, ಮಳೆ ಬಂದಾಗ ಕೆಸರುಗದ್ದೆಯಾಗಿ ರಸ್ತೆ ಮಾರ್ಪಟ್ಟಿರುತ್ತದೆ.
24ಗಂಟೆ ವಾಹನ ಸಂಚಾರ: ಈ ರಸ್ತೆ ಬೇಲೂರು ಮತ್ತು ಹಾಸನ ರಾಷ್ಟ್ರೀಯ ಹೆದ್ದಾರಿಗೆ ತುಂಬ ಹತ್ತಿರವಿರುವುದರಿಂದ ದಿನದ 24 ಗಂಟೆಯೂ ವಾಹನಗಳು ಇಲ್ಲಿಯೇ ಸಂಚಾರ ಮಾಡುತ್ತವೆ. ಆದರೆ ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.
ಅಪಘಾತ ಸ್ಥಳ: ಹಳೇಬೀಡು ಮತ್ತು ಹಗರೆ ನಡುವೆ ರಸ್ತೆ ಹದಗೆಟ್ಟಿರುವ ಸ್ಥಳ ಮತ್ತು ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಹಾಗೂ ಪುಷ್ಪಗಿರಿ ಮಠಕ್ಕೆ ತೆರಳುವ ಇದೇ ಸ್ಥಳದಲ್ಲಿ ದಾರಿಯಲ್ಲಿ ಬಾರಿ ವಾಹನಗಲು ಪಲ್ಟಿಯಾಗಿ ಹಲವು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಯಾವೊಬ್ಬ ಅಧಿಕಾರಿಯೂ ತಲೆಕೆಡಿಕೊಳ್ಳುತ್ತಿಲ್ಲ.
ರಸ್ತೆಯಲ್ಲೇ ಧರಣಿ-ಎಚ್ಚರಿಕೆ: ಈ ರಸ್ತೆಯಲ್ಲಿ ಶಾಲಾ ಕಾಲೇಜು ಮಕ್ಕಳು ಓಡಾಡುತ್ತಿರುತ್ತಾರೆ. ಶಾಲಾ ವಾಹನಗಳೂ ಹೆಚ್ಚಾಗಿ ಸಂಚರಿಸುತ್ತವೆ. ಇನ್ನು ಮುಂದೆ ಇಂತಹ ಅವಘಗಳು ಸಂಭವಿಸಿ ಇದೇ ರೀತಿ ನಿರ್ಲಕ್ಷ್ಯ ದೊರಣೆ ಮುಂದುವರೆದರೆ ಭಂಡಾರಿಕಟ್ಟೆ ಗ್ರಾಮಸ್ಥರು ರಸ್ತೆಯಲ್ಲಿಯೇ ಧರಣಿ ಕುಳಿತು ಹೋರಾರಾಟ ಮಾಡುತ್ತೇವೆ. ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಭಂಡಾರಿಕಟ್ಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಳೇಬೀಡು-ಹಗರೆ ಮುಖ್ಯ ರಸ್ತೆ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತವೆ. ಪುಷ್ಪಗಿರಿ ಮಠ ಹಾಗೂ ಮಲ್ಲಿಕಾರ್ಜುನ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಶಾಸಕರು ಕ್ರಮ ಕೈಗೊಳ್ಳಬೇಕು.
-ಡಾ. ಶ್ರೀ ಸೋಮಶೇಖರ ಶಿವಾಚಾರ್ಯರು ಪುಷ್ಪಗಿರಿ ಮಠ ಹಳೇಬೀಡು
ಭಂಡಾರಿಕಟ್ಟೆ ಗ್ರಾಮದಿಂದ ಹಳೇಬೀಡಿನವರೆಗೆ ರಸ್ತೆ ಹದಗೆಟ್ಟಿದೆ. ಸದ್ಯಕ್ಕೆ ಮೊದಲ ಹಂತದಲ್ಲಿ ಜಾತ್ರಾ ಮಹೋತ್ಸವವಿರುವ ಕಾರಣ ಅಧಿಕಾರಿಗಳಿಗೆ ಸೂಚಿಸಿ ಗುಂಡಿ ಮುಚ್ಚುವ ಕೆಲಸ ಮಾಡಿ ಆನಂತರ ಕಚ್ಚಾ ರಸ್ತೆಯಾಗಿ ಮಾಡಲು ಕ್ರಮ ಕೈಗೊಳ್ಳುತ್ತೇನೆ
-ಕೆ.ಎಸ್. ಲಿಂಗೇಶ್, ಶಾಸಕರು