14 ದಿನಗಳ ಹಾಸನಾಂಬೆ ಜಾತ್ರೋತ್ಸವ ಸಂಪನ್ನ
Team Udayavani, Oct 27, 2022, 7:44 PM IST
ಹಾಸನ: ಶ್ರೀ ಹಾಸನಾಂಬೆಯ 14 ದಿನಗಳ ಅದ್ಧೂರಿ ಜಾತ್ರೋತ್ಸವ ಗುರುವಾರ ಸಂಪನ್ನವಾಯಿತು. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಶ್ರೀ ಹಾಸನಾಂಬೆ ದೇವಾಲಯದ ಬಾಗಿಲನ್ನು ಗುರುವಾರ ಮಧ್ಯಾಹ್ನ 12.47ಕ್ಕೆ ವಿಧ್ಯುಕ್ತವಾಗಿ ಮುಚ್ಚಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿ.ಪಂ. ಸಿಇಒ ಕಾಂತರಾಜು, ಎಸ್ಪಿ ಹರಿರಾಂ ಶಂಕರ್ ಸಮ್ಮುಖದಲ್ಲಿ ಸಾವಿರಾರು ಭಕ್ತರ ಜಯಘೋಷದೊಂದಿಗೆ ಶ್ರೀ ಹಾಸನಾಂಬೆ ದೇವಾಲದ ಬಾಗಿಲಿಗೆ ಬೀಗ ಮುದ್ರೆ ಹಾಕಲಾಯಿತು.
6 ಲಕ್ಷ ಭಕ್ತರಿಂದ ದೇವಿ ದರ್ಶನ: ಈ ವರ್ಷ ಸುಮಾರು 6 ಲಕ್ಷ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಪ್ರತಿದಿನ 20 ರಿಂದ 30 ಸಾವಿರ, ರಜಾ ದಿನಗಳಂದು 30 ರಿಂದ 40 ಸಾವಿರ ಭಕ್ತರು ದೇವಿ ದರ್ಶನಕ್ಕೆ ಆಗಮಿಸಿದ್ದರು ಎಂದು ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಮಾಹಿತಿ ನೀಡಿದ್ದಾರೆ.