ಪುಪ್ಪಗಿರಿ ರಾಷ್ಟ್ರೀಯ ಉತ್ಸವಕ್ಕೆ ಪ್ರಚಾರ ರಥಕ್ಕೆ ಚಾಲನೆ
Team Udayavani, Dec 24, 2019, 3:00 AM IST
ಬೇಲೂರು: ಪುಷ್ಪಗಿರಿ ರಾಷ್ಟ್ರೀಯ ಉತ್ಸವ ಮತ್ತು ಶ್ರೀಗಳ ದಶಮಾನೊತ್ಸವ ಹಾಗೂ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದ ಪ್ರಚಾರ ರಥಕ್ಕೆ ಪುಷ್ಪಗಿರಿ ಮಹಾ ಸಂಸ್ಥಾನದ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಬಸವೇಶ್ವರ ವೃತ್ತದಲ್ಲಿ ಜ. 4 ,5 ರಂದು ನಡೆಯುವ ತಾಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಸಂಸ್ಥಾನದಲ್ಲಿ ರಾಷ್ಟ್ರೀಯ ಉತ್ಸವ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಪುಷ್ಪಗಿರಿ ಮಹಾ ಸಂಸ್ಥಾನದ ಮಠದ ಶ್ರೀ ಸೋಮಶೇಖರ ಶಿವಚಾರ್ಯ ಮಹಾಸ್ವಾಮೀಜಿ, ಈ ಕಾರ್ಯಕ್ರಮದ ಉದ್ದೇಶ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂದರು.
ನೀರಾವರಿ ಹೋರಾಟ: ಹಳೇಬೀಡು, ಜಾವಗಲ್, ಮಾದೀಹಳ್ಳಿ, ಹಗರೆ, ಹಲವು ಹೋಬಳಿಗಳು ಇಂದು ಬರಗಾಲದಿಂದ ಬಳಲುತ್ತಿವೆ. ರಾಜ್ಯ ರೈತರ ಸಂಘ ಹೋರಾಟದಲ್ಲಿ ನಾವು ಪಾಲ್ಗೊಂಡು ಹೋರಾಟ ಮಾಡಿದ ಫಲವಾಗಿ ಇಂದು ಶಾಶ್ವತ ನೀರಾವರಿ ಯೋಜನೆಗೆ 100ಕೋಟಿ ರೂ. ನೀಡಿದೆ. ಇದಕ್ಕೆ ಸ್ಥಳೀಯ ಶಾಸಕರು, ಮಠಾದೀಶರು, ಹಲವಾರು ಮುಖಂಡರು ಕಾರಣರಾಗಿರುತ್ತಾರೆ ಎಂದರು.
ಉತ್ಸವಕ್ಕೆ ಜ.4ರಂದು ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಚಿತ್ರ ನಟ ಪುನೀತ್ ರಾಜ್ಕುಮಾರ್ ಹಾಗೂ ಹಲವಾರು ಸಚಿವರು, ಶಾಸಕರು ಹಾಗೂ ಗಣ್ಯರು ಪುಷ್ಪಗಿರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆಂದರು. ಜ.4ರ ಸಂಜೆ 6ಗಂಟೆಗೆ ಉತ್ಸವದ ವೇದಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸರ್ವ ಸಮುದಾಯದ ಉತ್ಸವ: ಶಾಸಕ ಲಿಂಗೇಶ್ ಮಾತನಾಡಿ, ಪುಷ್ಪಗಿರಿ ಉತ್ಸವವು ಕೇವಲ ಧರ್ಮಕ್ಕೆ ಸೀಮಿವಲ್ಲ. ಈ ಕಾರ್ಯಕ್ರಮಕ್ಕೆ ನಾಡಿನ ಎಲ್ಲಾ ಸಮುದಾಯದ ಜನರು ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ನಾಡಿನ ಸಮಸ್ತ ಜನತೆ ಸುಖ-ಶಾಂತಿ ನೆಮ್ಮದಿಯಿಂದ ಬಾಳಬೆಕೆಂಬುದೆ ಈ ಉತ್ಸವದ ಉದ್ದೇಶವಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ 9.30ಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವವದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ನೃತ್ಯ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕ ಸಹಕಾರ ಅತ್ಯಗತ್ಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಚಾಲನೆ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ರಂಗೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಎಂ.ಎ.ನಾಗರಾಜು, ಬಿಜೆಪಿ ಮುಖಂಡ ರೇಣುಕುಮಾರ್, ಅರುಣ್ಕುಮಾರ್, ರವಿಕುಮಾರ್, ಬಿ.ಕೆ.ಚಂದ್ರಕಲಾ, ಭುವನೇಶ್, ಉಮಾಶಂಕರ್, ಶ್ರೀನಿವಾಸ್ ಇದ್ದರು.
ಶ್ರೀಗಳ ಪಟ್ಟಾಭಿಷೇಕ ದಶಮಾನೋತ್ಸವ: ಜ.5ರಂದು ಶ್ರೀಗಳ ಪಟ್ಟಾಭಿಷೇಕದ ದಶಮಾನೋತ್ಸವ ಕಾರ್ಯಕ್ರಮ ಸಂಜೆ 6ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದಾರೆ. ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಹಲವಾರು ಸಚಿವರು ಶಾಸಕರು ಸಚಿವರು ಪಾಲ್ಗೊಳ್ಳುವರು ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಾಶ್ವತ ನೀರಾವರಿ-ಸಂಭ್ರಮಾಚರಣೆ: ಶಾಸಕ ಲಿಂಗೇಶ್ ಮಾತನಾಡಿ, ಬರಪೀಡಿತ ಹಳೇಬೀಡು ಸುತ್ತಮುತ್ತಲ ಪ್ರದೇಶಗಳ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಮನಗಂಡು ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಿದ ಫಲವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಎಲ್ಲಾ ಕೆರೆಗಳು ಭರ್ತಿಯಾಗಿರುವ ಕಾರಣ ಈ ಸಂಭ್ರಮವನ್ನು ಜ.5ರ ರಾತ್ರಿ 9ಗಂಟೆಗೆ ಸ್ವಾಮಿಜಿಯವರ ನೇತೃತ್ವದಲ್ಲಿ ಎಲ್ಲಾ ರೈತ ಸಂಘಗಳು, ಎಲ್ಲಾ ಪಕ್ಷದ ಮುಖಂಡರು ಸಂಭ್ರಮಾಚರಣೆಯನ್ನು ಮಾಡಲಾಗುವುದು ಎಂದರು.