ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಕೊಂದ ಪತ್ನಿ
Team Udayavani, Jan 30, 2021, 6:32 PM IST
ಚನ್ನರಾಯಪಟ್ಟಣ: ತಾಯಿಯೇ ತನ್ನ 2 ವರ್ಷದ ಗಂಡು ಮಗುವನ್ನು ಕೊಲೆ ಮಾಡಿದ ಪ್ರಕರಣ ಚನ್ನರಾಯಪಟ್ಟಣ ತಾಲೂಕು ಹುಲ್ಲೇನಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹುಲ್ಲೇನಹಳ್ಳಿಯ ನಂಜಪ್ಪ ಎಂಬವರ ಪತ್ನಿ ಸುಮಾ(22) ತನ್ನ 2 ವರ್ಷದ ಮಗ ತನ್ಮಯಿ ನನ್ನು ಕೊಲೆ ಮಾಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ನಂಜಪ್ಪ ಮತ್ತು ಸುಮಾ ನಡುವೆ ಜ.19 ರಂದು ಜಗಳ ನಡೆದಿತ್ತು. ಗಲಾಟೆ ನಂತರ ನಂಜಪ್ಪ ಜಮೀನಿಗೆ ಹೋಗಿದ್ದರು. ಕೆಲ ಸಮಯದ ನಂತರ ಸುಮಾ, ತನ್ನ ಪತಿ ನಂಜಪ್ಪಗೆ ಕರೆ ಮಾಡಿ ಮಗು ವಾಂತಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾಳೆ. ತಕ್ಷಣ ಮನೆಗೆ ಬಂದ ನಂಜಪ್ಪ, ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದರು. ಆದರೆ, ಮಗು ಬದುಕುಳಿಯಲಿಲ್ಲ. ಆ ನಂತರ ಮಗುವಿನ ಶವವನ್ನು ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು.
ಅನುಮಾನವಿತ್ತು: ಚೆನ್ನಾಗಿದ್ದ ಮಗು ಪತ್ನಿಯೊಂದಿಗೆ ಜಗಳವಾದ ಕೆಲವೇ ಕ್ಷಣಗಳಲ್ಲಿ ಮಗು ವಾಂತಿ ಮಾಡಿಕೊಂಡಿದ್ದರ ಬಗ್ಗೆ ಅನುಮಾನಗೊಂಡ ನಂಜಪ್ಪ, ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಹೂತಿದ್ದ ಮಗುವಿನ ಶವವನ್ನು ಪೊಲೀಸರು ಜ.25 ರಂದು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿರುವುದು ದೃಢಪಟ್ಟಿತು. ಆ ನಂತರ ಸುಮಾಳನ್ನು ಪೊಲೀಸರು ತೀವ್ರ ವಿಚಾರಣೆ ಗೊಳಪಡಿಸಿದಾಗ, ತನಗರಿವಿಲ್ಲದೆ ಮಗುವಿನ ತಲೆಯನ್ನು ಗೋಡೆಗೆ 2-3 ಜಜ್ಜಿದ್ದಾಗಿ, ಆ ನಂತರ ಮಗು ವಾಂತಿ ಮಾಡಿಕೊಳ್ಳಲಾರಂಭಿಸಿತು. ಆದರೆ ಈ ವಿಷಯವನ್ನು ಪತಿ ನಂಜಪ್ಪಗೆ ಹೇಳಿರಲಿಲ್ಲ ಎಂದು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ:ಪುತ್ತೂರು: ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋದ ಮನೆ
ಆರೋಪಿ ನ್ಯಾಯಾಂಗ ಬಂಧನಕ್ಕೆ: ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ನುಗ್ಗೆಹಳ್ಳಿ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಕೆಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.