ಸಂಬಳವಿಲ್ಲದೇ ಹೊರಗುತ್ತಿಗೆ ನೌಕರರ ಸಂಕಷ್ಟ
Team Udayavani, May 15, 2022, 4:38 PM IST
ಹೊಳೆನರಸೀಪುರ: ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲ್ಲ ಎಂಬ ಗಾದೆ ಪಟ್ಟಣದ ಪುರಸಭೆ ಹೊರಗುತ್ತಿಗೆ ನೌಕರರ ಸಂಬಳ ದೊರಕದೆ ಪರದಾಡುವಂತಾಗಿದೆ. ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆಯಲ್ಲಿ ಸುಮಾರು 40 ಮಂದಿ ಹೊರಗುತ್ತಿಗೆ ನೌಕರರಿದ್ದು ಅವರಿಗೆ ದೊರಕಬೇಕಾದ ಸಂಬಳ ದೊರಯದೆ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ ಎಂಬುದು ಹೊರ ಗುತ್ತಿಗೆ ನೌಕರರ ಅಳಲಾಗಿದೆ.
ಪಟ್ಟಿ ನೀಡುವಲ್ಲಿ ಪುರಸಭೆ ಹಿಂದೇಟು: ಪ್ರತಿ ತಿಂಗಳು ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡಬೇಕಾದ ಗುತ್ತಿಗೆದಾರ ಹಣ ನೀಡಲು ಸಿದ್ಧವಿದ್ದರೂ ಸಹ ಪುರಸಭೆ ತನ್ನ ಬಳಿ ನೌಕರಿ ಮಾಡುತ್ತಿರುವವರ ಹೆಸರುಗಳ ಪಟ್ಟಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜಾರಿ ಸ್ಥಾನದಲ್ಲಿ ಪುರಸಭೆ: ಈ ಹಿಂದೆ ಸಂಬಳ ನೀಡುವಲ್ಲಿ ಗುತ್ತಿಗೆದಾರ ನೌಕರರಿಗೆ ಸರಿಯಾಗಿ ನೀಡದ ಸತಾಯಿಸುತ್ತಿದ್ದರು. ಆದರೆ ಹೊಳೆನರಸೀಪುರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಆದ್ದರಿಂದಲೇ ದೇವರು ವರ ಕೊಡಲು ಮುಂ ದಾದರೂ ಪೂಜಾರಿ ಹೆಸರಿನ ಪಟ್ಟಿ ನೀಡುವಲ್ಲಿ ತಡ ಮಾಡುತ್ತಿರುವ ಹಿನ್ನೆಲೆ ಬಗ್ಗೆ ತಿಳಿಯದಾಗಿದೆ.
ಪಟ್ಟಿ ನೀಡುವಂತೆ ಗುತ್ತಿಗೆದಾರ: ಏಪ್ರಿಲ್ ತಿಂಗಳ ಸಂಬಳ ಬಿಡುಗಡೆ ಮಾಡಿ ಹೊರಗುತ್ತಿಗೆ ಪೌರ ನೌಕರರಿಗೆ ನೀಡುವುದಾಗಿ ಗುತ್ತಿಗೆದಾರ ಮುಂದೆ ಬಂದು ಹೆಸರು ಗಳ ಪಟ್ಟಿ ನೀಡುವಂತೆ ನಾಲ್ಕಾರು ಬಾರಿ ಕಚೇರಿಗೆ ತೆರಳಿ ಸಂಬಳದ ಪಟ್ಟಿ ನೀಡುವಂತೆ ಕೋರಿದರೂ ಸಹ ನೋಡೋಣ. ಅಮೇಲೆ ಕೊಡಿಸ್ತೀನಿ ಎಂಬ ಸಬೂಬುಗಳ ಮಾತಿನಿಂದ ಪಟ್ಟಿ ಪಡೆಯಲು ಹೋಗಿದ್ದ ಗುತ್ತಿಗೆದಾರ ಇದೀಗ ಪಟ್ಟಿ ತನ್ನ ಕೈ ಸೇರುವರೆಗೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ಗೊತ್ತಾಗಿದೆ.
ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರ ತನಗೆ ಏಪ್ರಿಲ್ ತಿಂಗಳ ಸಂಬಳ ಬಂದಿಲ್ಲ.ತನಗೆ ಬರಬೇಕಾದ ಸಂಬಳ ಬಂದರೆ ಮನೆ ನಿಭಾಯಿಸಲು ಸಹಕಾರಿ ಆಗುತ್ತೆ. ಆದರೆ ಅಧಿಕಾರಿ ತಾತ್ಸರ ನೀತಿಯಿಂದ ನಾವುಗಳು ಮಾತನ್ನು ಆಡಲು ಆಗದೆ ಮಾತನ್ನ ನುಂಗಲು ಸಹ ಕಷ್ಟ ಸಾಧ್ಯವಾಗಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
ಅಂದಾಜು 3.55 ಲಕ್ಷ: ಒಂದು ಮೂಲದ ಪ್ರಕಾರ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 40 ಮಂದಿಗೆ ಕನಿಷ್ಠ ಎಂಟು ಸಾವಿರವೆಂದು ಪರಿಗಣಿಸಿದರೂ ಸಹ ಪ್ರತಿ ತಿಂಗಳ 3.2 ಲಕ್ಷದಿಂದ 3.55 ಲಕ್ಷ ಸಂಬಳ ವಿತರಣೆ ಆಗಬೇಕಿದೆ.
ಸಂಬಳ ಬಗ್ಗೆ ವಿ.ಡಿ.ಶಾಂತಲಾ ಭರವಸೆ : ಈ ಸಂಬಳ ನೀಡದ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿ.ಡಿ. ಶಾಂತ ಲಾ ಅವರನ್ನು ಸಂಪರ್ಕಿಸಿದ್ದಾಗ ಹೌದು ಏಪ್ರಿಲ್ ತಿಂಗಳ ಸಂಬ ಳವನ್ನು ಹೊರಗುತ್ತಿಗೆ ನೌಕರರಿಗೆ ನೀಡಬೇಕಿದೆ. ಕೆಲ ತಾಂತ್ರಿಕ ಕಾರಣಗಳಿಂದ ಸ್ವ ಲ್ಪ ತಡವಾಗಿದೆ. ಗುತ್ತಿಗೆ ಪಡೆದಿರುವ ಅತ್ರಿ ಏಜೆನ್ಸಿಸ್ ನಾಳೆ ನಾಡಿದ್ದರಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ಸಂಬಳ ದೊರೆಯಲಿದೆ ಎಂದು ಮಾಹಿತಿ ನೀಡಿದರು.