ಜಿಲ್ಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ
Team Udayavani, Apr 8, 2020, 1:10 PM IST
ಹಾಸನ: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ರಾತ್ರಿ ಷಬ್-ಎ-ಬರಾತ್ ಆಚರಣೆ ದಿನವಾದ ಏ.9 ಹಾಗೂ ಏ.10 ರ ಗುಡ್ಫ್ರೆçಡೇ ದಿನಗಳಂದು ಸಾಮೂಹಿಕ ಪ್ರಾರ್ಥನೆ ಹಾಗೂ ಹೊರಗೆ ಬರುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಮುಖ್ಯಾಧಿಕಾರಿ ಆರ್. ಶ್ರೀನಿವಾಸ್ಗೌಡ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಹಾಗೂ 144 ನೇ ಸೆಕ್ಷನ್ ಜಾರಿಯಲ್ಲಿರುವುದರಿಂದ ಮನೆಯಿಂದ ಜನರು ಹೊರ ಬಾರದು. ಹಾಗಾಗಿ ಏ.9 ಮತ್ತುಏ.10 ರಂದು ಮುಸಲ್ಮಾನರು ಮತ್ತು ಕ್ರೈಸ್ತರು ಮನೆಯಲ್ಲಿ ಪ್ರಾರ್ಥನೆ ಮಾಡಬೇಕು. ಕೋವಿಡ್ 19 ಸೋಂಕು ಹರಡುವ ಕಾರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಿಯಮ ಉಲ್ಲಂಘಿಸಿ ಹೊರಗೆ ಬಂದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಪೊಲೀಸ್ ಠಾಣೆ, ತಾಲೂಕು, ಉಪ ವಿಭಾಗ ಮಟ್ಟದಲ್ಲೂ ಸಮುದಾಯದ ಶಾಂತಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಅರಸೀಕೆರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು. ವಾಟ್ಸಾಪ್ನಲ್ಲಿ ಬಂದ ವಿವಾದಾತ್ಮಕ ವಿಡಿಯೋ ಶೇರ್ ಮಾಡಿದರೆ ಅಡ್ಮಿನ್ ಹಾಗೂ ಶೇರ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಎ.ಎಸ್ಪಿ ಬಿ.ಎನ್ ನಂದಿನಿ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು