ಅಭಿವೃದ್ಧಿ ಹೆಸರಿನಲ್ಲಿ ಸಲ್ಲದ ಅಪಪ್ರಚಾರ
Team Udayavani, Mar 10, 2018, 4:53 PM IST
ಅರಸೀಕೆರೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧಿ ನಾಯಕರು ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಇಲ್ಲಸಲ್ಲದ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ಷೇಪಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹಾಸನ ರಸ್ತೆಯ ಶ್ರೀಅಯ್ಯಪ್ಪಸ್ವಾಮಿ ದೇವಾಲಯದವರೆಗೂ ಕಾಂಕ್ರೀಟ್ ರಸ್ತೆ ಹಾಗೂ ಚನ್ನರಾಯಪಟ್ಟಣದ ಮಾರ್ಗದ 25 ಕಿಮೀ ಉದ್ದದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ
ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಣ ಮಂಜೂರು: ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಡಾಂಬರ್ ರಸ್ತೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿಲಾಗುತ್ತಿದೆ. ಶ್ರವಣಬೆಳಗೊಳದ ಮಹಾಮಸ್ತಾಭಿಷೇಕ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ವಿಶೇಷ ಅನುದಾನದಿಂದ ಹಾಸನ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬ ನಿರೀಕ್ಷೆ ಹುಸಿಯಾದ ಕಾರಣ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ 50:54 ಯೋಜನೆಡಿಯಲ್ಲಿ ತಾವು ಸತತ ಹೋರಾಟ ಮಾಡಿದ ಫಲವಾಗಿ ಸುಮಾರು 14 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಹಣ ಮಂಜೂರು ಮಾಡಿದೆ ಎಂದರು.
ಕಾಂಕ್ರೀಟ್ ರಸ್ತೆಗಳ ನಿರ್ಮಾಣ: ನಗರದ ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗ ವಾಗಿ ಹಾಸನ ರಸ್ತೆಯ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದವರೆಗೂ 1.2 ಕಿ.ಮೀ. ಉದ್ದದ ರಸ್ತೆಯ ಅಗಲೀಕರಣ ಮಾಡಿ ಕಾಂಕ್ರೀಟ್ ರಸ್ತೆ ಮತ್ತು ಎರಡು ಬದಿಗಳಲ್ಲಿ ದೊಡ್ಡಮಟ್ಟದ ಚರಂಡಿಗಳ ನಿರ್ಮಾಣ ಹಾಗೂ
ಚನ್ನರಾಯಪಟ್ಟಣದ ರಸ್ತೆಯ ಮುದುಡಿ, ಹೊನ್ನಶೆಟ್ಟಿಹಳ್ಳಿ, ಚಗಚಗೆರೆ ಗ್ರಾಮಗಳ ಬಳಿ ಪದೇ ಪದೆ ಡಾಂಬರ್ ರಸ್ತೆ ಕಿತ್ತುಹೋಗುವ ಕಾರಣ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನುಳಿದಂತೆ ಸುಮಾರು ಮಾರ್ಗದ 25 ಕಿ.ಮೀ ಉದ್ದದ ರಸ್ತೆಯನ್ನು ಡಾಂಬರೀಕರಣದ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಅಂತೆಯೇ ಬಿ.ಎಚ್.ರಸ್ತೆಯ ತರಕಾರಿ ಮಾರುಕಟ್ಟೆ ಮುಂಭಾಗದಿಂದ ಗ್ರಾಮದೇವತೆ ಕರಿಯಮ್ಮ
ದೇವಾಲಯದವರೆಗೂ 4 ಕೋಟಿ ರೂ.ಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಮಾಹಿತಿ: ಹುಳಿಯಾರ್ ರಸ್ತೆ ಶಿವಾಲಯ ಮುಂಭಾಗದಿಂದ ಮಾಲೇಕಲ್ ತಿರುಪತಿ ಕ್ರಾಸ್ ರಸ್ತೆಯನ್ನು ದ್ವಿಪಥ ಕಾಂಕ್ರೀಟ್ ರಸ್ತೆ, ಬೃಹತ್ ಪ್ರಮಾಣದ ಚರಂಡಿಗಳ ನಿರ್ಮಾಣವನ್ನು 8 ಕೋಟಿ ರೂ.ಗಳಲ್ಲಿ ಮಾಡಲಾಗುತ್ತಿದೆ. ಬಿ.ಎಚ್.ರಸ್ತೆಯಿಂದ ಅಂಚೆಕೊಪ್ಪಲು ಸಂಪರ್ಕ ರಸ್ತೆಯನ್ನು 3 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪರೋಕ್ಷವಾಗಿ ಟೀಕೆ: ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆಗಳನ್ನು ತುಂಬುವಂತಹ ಎತ್ತಿನಹೊಳೆ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬಂದಿರುವ ಬಗ್ಗೆ ನಮ್ಮ ಯಾವುದೇ ಹೋರಾಟವಿಲ್ಲ ಎಂದು ಟೀಕಿಸುವ ರಾಜಕೀಯ ವಿರೋಧಿಗಳಿಗೆ ಅವರ ಪಕ್ಷದ ಶಾಸಕರೇ ಅಧಿಕಾರದಲ್ಲಿದಾಗ ಮಾಡಿದ ಸಾಧನೆ ಏನು ಎನ್ನುವುದನ್ನು ಕ್ಷೇತ್ರದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
ನಗರಸಭಾಧ್ಯಕ್ಷ ಎಂ.ಸಮೀವುಲ್ಲಾ, ಸದಸ್ಯರಾದ ಬಿ.ಎನ್.ವಿದ್ಯಾಧರ್, ಕೆ.ಸಿ.ಪಂಚಾಕ್ಷರಿ, ಮೋಹನ್ ಕುಮಾರ್, ನಾಜೀಮ್, ಬಾಲಮುರುಗನ್, ಫೈರೋಜ್, ಯೂನಸ್, ನಗರಸಭಾ ಪೌರಾಯುಕ್ತ ಪರಮೇಶ್ವರಪ್ಪ, ಮುಖಂಡರಾದ ಧರ್ಮೇಶ್, ಯಳವಾರೆ, ಕೇಶವಮೂರ್ತಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.