ಯಾರೊಂದಿಗೂ ಮೈತ್ರಿಯಿಲ್ಲ: ದೇವೇಗೌಡ
Team Udayavani, Nov 7, 2019, 9:48 PM IST
ಹಾಸನ: ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಮನೆಗೆ ಸಂಬಂಧ ಮಾಡೋಕೆ ನಾನು ಹೋಗಬೇಕಾ? ನನಗೂ ರಾಜಕೀಯ ಮಾಡೋದು ಗೊತ್ತಿದೆ. 6 ದಶಕಗಳ ಕಾಲ ಹೋರಾಟದ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ಕನಿಷ್ಠ ಪ್ರಜ್ಞೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ದೇವೇಗೌಡರು, ಜಗದೀಶ್ ಶೆಟ್ಟರ್ ಅವರು ಅದೇನೋ ಮರು ಮದುವೆ, ಬೇಳೆ ಕಾಳು ಎಂದಿದ್ದಾರೆ.
ಆದರೆ, ನಾನು ಈ ವಯಸ್ಸಿನಲ್ಲಿ ಯಾರೊಂದಿಗೂ ಸಂಬಂಧ ಮಾಡೋಕೆ ಹೋಗುವ ಅಗತ್ಯವಿಲ್ಲ. ಜೆಡಿಎಸ್ ಕುರಿತು ಏನೇನೋ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಖ ಮತ್ತೆ ನೋಡ್ತೀನಾ ಎಂದು ಕಿಡಿ ಕಾರಿದರು.
ಮಾಧ್ಯಮಗಳಿಗೂ ಒಂದು ಸಾಮಾನ್ಯ ಜ್ಞಾನವಿಲ್ಲ. ರಾಜಕೀಯ ಮಾತಾಡಿದರೆ ಏನೇನೋ ತೋರಿಸುತ್ತೀರಾ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.