ಹೇಮೆ ಒಡಲಿಗೆ ಕೋಳಿ, ಪ್ಲಾಸ್ಟಿಕ್ ತ್ಯಾಜ್ಯ
ನದಿ ತೀರದಲ್ಲಿರೆಕ್ಕೆ ಪುಕ್ಕದ ರಾಶಿ , ಮಾಂಸ,ಕಸದಿಂದಕಲುಷಿತಗೊಳ್ಳುತ್ತಿರುವ ಶುದ್ಧ ನೀರು
Team Udayavani, Nov 30, 2020, 2:27 PM IST
ಸಕಲೇಶಪುರ : ಲಕ್ಷಾಂತರ ಜನರಿಗೆ ಜೀವನಾಡಿ ಆಗಿರುವ ಹೇಮಾವತಿ ನದಿಗೆ ಕೋಳಿ, ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿದ್ದು, ದಿನದಿಂದ ದಿನಕ್ಕೆ ನೀರು ಮಲೀನ ಗೊಳ್ಳುತ್ತಿದೆ. ಇದೇ ನೀರನ್ನೇ ಜನ ಕುಡಿಯಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಮೂಡಿಗೆರೆ ತಾಲೂಕಿನ ಜಾವಳ್ಳಿಯಲ್ಲಿ ಹುಟ್ಟಿ ಸಕಲೇಶಪುರ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ನದಿ, ಲಕ್ಷಾಂತರ ಮಂದಿಯ ದಾಹ ನೀಗಿಸುತ್ತಿದೆ. ಹಾಸನ, ತುಮಕೂರು, ಮಂಡ್ಯ ಸೇರಿ ಮೂರು ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ, ರೈತರಿಗೆ ಅನ್ನ ನೀಡುತ್ತಿದೆ.
ಇಂತಹ ಪವಿತ್ರವಾದ ನದಿ ರಕ್ಷಣೆ ಮಾಡುವಲ್ಲಿ ತಾಲೂಕು ಆಡಳಿತ, ಪುರಸಭೆ ಮುಂದಾಗದ ಕಾರಣ, ಪಟ್ಟಣದ ಕೆಲವು ಕೋಳಿ, ಕುರಿ, ಇತರಮಾಂಸದ ಅಂಗಡಿಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯ ವನ್ನು ಚೀಲದಲ್ಲಿ ತುಂಬಿಕೊಂಡು ರಾತ್ರಿ ವೇÙ ೆ ನದಿಗೆ ಎಸೆಯಲಾಗುತ್ತಿದೆ. ಇದರಿಂದ ನದಿ ನೀರು ಮಲೀನಗೊಳ್ಳುತ್ತಿದೆ.
ಚರಂಡಿ ನೀರೂ ಸೇರ್ಪಡೆ : ಪಟ್ಣಣ ವ್ಯಾಪ್ತಿಯಲ್ಲಿ ಚರಂಡಿ ನೀರು ಸಹ ಅಲ್ಲಲ್ಲಿ ನದಿಗೆ ಸೇರುತ್ತಿದೆ. ಈ ಹಿಂದೆ ಹೇಮಾವತಿ ನದಿ ತೀರದಲ್ಲೇ ಪುರಸಭೆಯಿಂದ ಕಸವನ್ನು ವಿಲೇವಾರಿ ಮಾಡಲಾಗುತ್ತಿತ್ತು. ಸಾರ್ವಜನಿಕರ ವಿರೋಧ ವ್ಯಕ್ತವಾದ ಕಾರಣ, ನಿಲ್ಲಿಸಲಾಗಿದೆ. ಆದರೂ, ಕೆಲವು ಕಿಡಿಗೇಡಿಗಳು ಕಸವನ್ನು ನದಿ ತೀರದಲ್ಲಿ ಹಾಕುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಮದ್ಯದ ಪಾರ್ಟಿ: ಕೆಲವು ಕಿಡಿಗೇಡಿಗಳು ನದಿ ತೀರದಲ್ಲಿ ಮದ್ಯ ಮತ್ತು ಮಾಂಸದ ಪಾರ್ಟಿ ಮಾಡಿ ಬಾಟಲ್ಗಳನ್ನು ನದಿ ತೀರದಲ್ಲಿ ಎಸೆಯುವುದು ಸಾಮಾನ್ಯವಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ದುರಸ್ತಿಯಲ್ಲಿ ಇರುವ ಕಾರಣ ಪಟ್ಟಣದ ನಾಗರಿಕರು ಮಲೀನ ನೀರನ್ನೇ ಕುಡಿದು ಹಲವು ಕಾಯಿಲೆಗಳಿಗೆ ತ್ಯಾಗ ಬೇಕಾಗಿದೆ.
ಮ ರಳು ಗಣಿಗಾರಿಕೆ: ಹೇಮಾವತಿ ನದಿ ತೀರದಲ್ಲಿ ಮಿತಿ ಮೀರಿದ ಮರಳುಗಾರಿಕೆ ಮಾಡಲಾಗುತ್ತಿದೆ. ಈ ಹಿಂದೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ, ಇತ್ತೀಚೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಸಾಗಿಸುವ ದಂಧೆ ನಡೆಯುತ್ತಿದೆ. ಇದರಿಂದ ಹೇಮಾವತಿ ನದಿ ಪಾತ್ರ ಸಂಪೂರ್ಣ ಬರಿದಾಗುತ್ತಿದೆ. ಒಟ್ಟಾರೆಯಾಗಿ ನದಿ ತೀರದ ಸ್ವಚ್ಛತೆ ಕಾಪಾಡ ಬೇಕಾಗಿರುವ ತಾಲೂಕು ಆಡಳಿತ, ಪುರಸಭೆ, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
ಹೆಪ್ಪು ಗಟ್ಟುತ್ತಿರುವ ನೀರು : ಸುಮಾರು 10ಕ್ಕೂ ಹೆಚ್ಚು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದಕೋಳಿ, ಇತರೆ ಮಾಂಸದ ತ್ಯಾಜ್ಯ ನದಿ ತೀರಕ್ಕೆ ತಂದು ಎಸೆಯಲಾಗಿದೆ. ಕೋಳಿಯ ಗರಿಗಳು,ಕೋಳಿ ಕಾಲು, ಮಾಂಸದ ತುಂಡುಗಳು ಮತ್ತಿತರ ತ್ಯಾಜ್ಯದ ಚೀಲಗಳಲ್ಲಿ ತುಂಬಿ ಸೇತುವೆಯ ಮೇಲಿಂದ ನದಿಗೆ ಎಸೆಯಲಾಗಿದೆ. ನದಿಯಲ್ಲಿ ನೀರಿನ ಹರಿವು ತೀರಾಕಡಿಮೆಯಾಗಿದ್ದು,ಕೆಲವು ಹೊಂಡ ಹಾಗೂ ಸಣ್ಣ ಗುಂಡಿಗಳಲ್ಲಿ ನೀರು ಶೇಖರಣೆಯಾಗಿದೆ. ಈ ರೀತಿ ಕೋಳಿ ತ್ಯಾಜ್ಯ ಎಸೆಯುತ್ತಿರುವುದರಿಂದ ನೀರು ಸಂಪೂರ್ಣ ಮಲಿನಗೊಂಡು, ಹೆಪ್ಪು ಕಟ್ಟಿದ ರೀತಿಯಲ್ಲಿದೆ. ಮಾಂಸದ ತ್ಯಾಜ್ಯವನ್ನು ತಿನ್ನಲು ನಾಯಿಗಳ ಹಿಂಡು ಪ್ರತಿ ದಿನ ನದಿಗೆ ಬರುತ್ತಿವೆ. ಮಾಂಸದ ತ್ಯಾಜ್ಯವನ್ನು ಗುಂಡಿಯಲ್ಲಿ ಹಾಕಿ ಸಂಸ್ಕರಿಸಬೇಕೆಂಬ ನಿಯಮವಿದ್ದರೂಯಾವುದನ್ನು ಮಾಡದೆ, ಮಾಂಸದ ಅಂಗಡಿಗಳ ಮಾಲಿಕರು ನೇರವಾಗಿ ತ್ಯಾಜ್ಯವನ್ನು ನದಿಗೆ ತಂದು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.
ಹೇಮಾವತಿ ನದಿಗೆ ಮಾಂಸದ ತ್ಯಾಜ್ಯ ಹಾಕುವ ಅಂಗಡಿಗಳ ಲೈಸೆನ್ಸ್ ರದ್ಧತಿಗೆ ಶಿಫಾರಸು ಮಾಡಲಾಗುವುದು, ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. –ಮಂಜುನಾಥ್, ತಹಶೀಲ್ದಾರ್
ನದಿಯಲ್ಲಿಕೋಳಿ ಮಾಂಸದ ತ್ಯಾಜ್ಯ ತಂದು ಹಾಕುತ್ತಿರುವುದು ಸರಿಯಲ್ಲ. ಇದರಿಂದ ಮಲೀನ ನೀರನ್ನುಕುಡಿಯುವ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ. ನದಿಗೆ ತ್ಯಾಜ್ಯ ಹಾಕುವವರ ವಿರುದ್ಧಕಠಿಣ ಕ್ರಮಕೈಗೊಳ್ಳಬೇಕು. –ರಕ್ಷಿತ್, ಸಕಲೇಶಪುರ ಪಟ್ಟಣ ನಿವಾಸಿ
-ಸುಧೀರ್ ಎಸ್.ಎಲ್