ಅಟಲ್ ಭೂ ಜಲ ಯೋಜನೆಗೆ ವಿಶ್ವ ಬ್ಯಾಂಕ್ ಮೆಚ್ಚುಗೆ
Team Udayavani, Nov 15, 2020, 7:37 PM IST
ಹಾಸನ: ಅಟಲ್ ಭೂ ಜಲ ಯೋಜನೆಯ ಅನುಷ್ಠಾನ ಸಿದ್ಧತೆ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಗೆ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕನ್ನು ಪೈಲಟ್ ಪ್ರಾಜೆಕ್ಟ್ ಆಗಿ ಪರಿಗಣಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈಯೋಜನೆಯಲ್ಲಿ ಕೈಗೆತ್ತಿಕೊಳ್ಳುವ ಕೆರೆಗಳ ಅಭಿವೃದ್ಧಿ ಸಮೀಕ್ಷೆ ನಡೆದಿದೆ. ಯೋಜನೆಯ ಅನುಷ್ಠಾನ ಪೂರ್ವ ಸಮೀಕ್ಷೆ ಮತ್ತಿತರ ಪೂರ್ವಭಾವಿ ಸಿದ್ಧತಾ ಕಾರ್ಯಗಳಿಗೆ 80 ಕೋಟಿ ರೂ. ಅಗತ್ಯವಿದ್ದು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಯೋಜನೆಯ ಅನುಷ್ಠಾನ ಆರಂಭವಾಗಲಿದೆ ಎಂದು ತಿಳಿಸಿದರು.
ಸಾಕಷ್ಟು ಸಮಯ ಬೇಕು: ಈ ಯೋಜನೆಯಲ್ಲಿ ಮುಖ್ಯವಾಗಿ ಮೊದಲ ಹಂತದಲ್ಲಿ ಮಳೆಯ ನೀರು ಸದ್ಬಳಕೆಯ ಬಗ್ಗೆ ಚಿಂತನೆ, ಆನಂತರ ನೀರಿನ ಸಂಗ್ರಹಣೆ ಮತ್ತು ನಿರ್ವಹಣಾ ಕಾರ್ಯಗಳ ಬಗ್ಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಯೋಜೆನ ಅನುಷ್ಠಾನವಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವೇ ಉಪಗ್ರಹ ಮೂಲಕ ಸಮೀಕ್ಷೆ ನಡೆಸಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ರಾಜ್ಯದ ತಾಲೂಕುಗಳ ಆಯ್ಕೆಯನ್ನು ಮಾಡಿದೆ.ಈಯೋಜನೆ ತರಾತುರಿಯಲ್ಲಿ ಆನುಷ್ಠಾನವಾಗುವುದಿಲ್ಲ. ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್.ಲಿಂಗೇಶ್, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಶ್ರೀನಿವಾಸಗೌಡ, ಜಿಪಂ ಸಿಇಒ ಪರಮೇಶ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.
10 ಕೆರೆ, 5 ಪಿಕಪ್ ಡ್ಯಾಂಗೆ ಹಾನಿ : ಈ ವರ್ಷ ಅತಿವೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ 10 ಕೆರೆ, 5ಪಿಕಪ್ ಡ್ಯಾಂಗಳಿಗೆ ಹಾನಿಯಾಗಿದೆ.ಈಕೆರೆಗಳ ದುರಸ್ತಿಗೆ ಇನ್ನೂ ಅಂದಾಜು ಸಿದ್ಧಪಡಿಸಿಲ್ಲ ಎಂದು ಸಚಿವರು, ¸ ಬೇಲೂರು ತಾಲೂಕಿನಲ್ಲಿ 3, ಹಾಸನ ತಾಲೂಕಿನಲ್ಲಿ, ಸಕಲೇಶಪುರ ತಾಲೂಕಿನಲ್ಲಿ 2, ಅರಸೀಕೆರೆ ತಾಲೂಕಿನಲ್ಲಿ ಒಂದು ಕೆರೆಗಳು ಹಾನಿಯಾಗಿದೆ ಎಂದು ವಿವರ ನೀಡಿದರು. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 170 ಕೆರೆಗಳಿದ್ದು, 64 ಕೆರೆಗಳು ಭರ್ತಿಯಾಗಿವೆ. 35 ಕೆರೆಗಳು ಭಾಗಶಃ ಭರ್ತಿಯಾಗಿವೆ. 26 ಕೆರೆಗಳು ಖಾಲಿಯಿವೆ ಎಂದು ಹೇಳಿದರು. ಸಭೆಯಲ್ಲಿ ಕೆರೆಗಳಲ್ಲಿ ಬೆಳೆದಿರುವ ಜಾಲಿ ತೆರವಿನ ಬಗ್ಗೆ ಶಾಸಕರು ಸಚಿವರ ಗಮನ ಸೆಳೆದರು.
ರಾಜ್ಯದಲ್ಲಿಕೆರೆಗಳ ಉತ್ತುವರಿ ತೆರವು ಕಾರ್ಯಾಚರಣೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಉತ್ತಮ ಪ್ರಗತಿ ಆಗಿಲ್ಲ. ಜಿಲ್ಲೆಯಲ್ಲಿ 6400 ಕೆರೆಗಳಿವೆ. ಆದರೆ, ಇದುವರೆಗೆ 1100 ಕೆರೆಗಳ ಸರ್ವೆ ಮಾತ್ರ ಆಗಿದೆ ಎಂದು ಉದಾಹರಣೆ ನೀಡಿದ ಸಚಿವರು, ರಾಜ್ಯದಲ್ಲಿಕೆರೆ ಸಂಜೀವಿನಿಯೋಜನೆಗೆ 25 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಶಾಸಕರು ಆಯ್ಕೆ ಮಾಡಿಕೊಳ್ಳುವಕೆರೆಯನ್ನು 30 ರಿಂದ 35ಲಕ್ಷ ರೂ. ಅಂದಾಜಿನಲ್ಲಿ ಅಭಿವೃದ್ಧಿ ಪಡಿಸಲಾಗುವುದು. -ಜೆ.ಸಿ.ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ.