ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ಕಲ್ಪಿಸಿ
Team Udayavani, Oct 16, 2020, 3:13 PM IST
ಹಾಸನ: ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗಗಳಿಗೂ ಬಸ್ ಸಂಚಾರ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತ ನಾಡಿದ ಅವರು, ಎಲ್ಲಾ ತಾಲೂಕುಗಳ ವಾಹನ ಸಂಚಾರಕ್ಕೆ ಯೋಗ್ಯವಿರುವ ಮಾರ್ಗಗಳಲ್ಲಿ ಬಸ್ ಓಡಿಸಲು ವ್ಯವಸ್ಥೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು. ನಗರ ವ್ಯಾಪ್ತಿಯಲ್ಲಿಯೂ ರಸ್ತೆ ಸಾರಿಗೆ ಬಸ್ಹೆಚ್ಚಿನ ಸಂಖ್ಯೆಯಲ್ಲಿ ಓಡಿಸ ಬೇಕು ಎಂದು ನಿರ್ದೇಶನ ನೀಡಿದರು.
ಅನುಮತಿ ನೀಡಿ:ಕೆಎಸ್ಅರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಶೆಟ್ಟಿ ಹಾಗೂ ಇತರ ಅಧಿಕಾರಿಗಳು ಪ್ರತಿಕ್ರಿಯಿಸಿ, ಕೇಂದ್ರೀಯ ಬಸ್ ನಿಲ್ದಾಣದ ಬಳಿ ರೈಲ್ವೆ ಮೇಲುಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಸಾರಿಗೆ ಬಸ್ಗಳು ರಿಂಗ್ ರಸ್ತೆ ಮೂಲಕ ಸಂತೆಪೇಟೆ ಸುತ್ತಿ ಬರಬೇಕಾಗಿದೆ. ಇದರಿಂದ ಸಮಯ ಹಾಗೂ ವೆಚ್ಚ ಹೆಚ್ಚುತ್ತದೆ ಆದ ಕಾರಣ, ಹಾಸನ ತಾಲೂಕು ಕಚೇರಿ ಬಳಿಯಿಂದ ಕೆಲವು ಬಸ್ಗಳ ಸಂಚಾರಕ್ಕೆ ಅನುಮತಿ ನೀಡಿದರೆ ಕನಿಷ್ಠ20 ಹೊಸ ಸಿಟಿ ಬಸ್ ಓಡಿಸಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಸ್ ನಿಲ್ದಾಣ ದಿಂದ ಲೆವೆಲ್ ಕ್ರಾಸಿಂಗ್ ಮೂಲಕ ಬರುವ ಬೈಪಾಸ್ ನಿಂದಲೇ ಬಸ್ ಓಡಿಸಿ ಇದರಿಂದ ನಿಲ್ದಾಣದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೂ ಅನುಕೂವಾಗಲಿದೆ ಎಂದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ ಅವರು ಇದಕ್ಕೆ ಸಮ್ಮತಿ ಸೂಚಿಸಿದರು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಜನರು ಸತ್ಯಮಂಗಲಕ್ಕೆನಗರ ಸಾರಿಗೆ ಬಸ್ ಸೌಲಭ್ಯ ಹೆಚ್ಚಿಸಬೇಕು ಹಾಗೂ ರೈಲ್ವೇ ನಿಲ್ದಾಣದಿಂದ ಸಹ ಪಾವತಿ ಆಧಾರದಲ್ಲಿ ಸಂಚರಿಸುವ ಆಟೋಗಳು ಪಡೆಯುತ್ತಿರುವ ಅಧಿಕ ಹಣಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಾದೇಶಿಕ ಸಾರಿಗೆ ಅಧಿಕಾರಿ,ಕೆಎಸ್ ಆರ್ಟಿಸಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಗಳಿಗೆ ಸೂಚಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಕುಮಾರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಅಪಘಾತ ವಲಯ ಗುರುತಿಸಿ :
ಹಾಸನ: ಜಿಲ್ಲೆಯಲ್ಲಿ ರಸ್ತೆ ಅಪಘಾತ ತಗ್ಗಿಸಲು ಬ್ಲಾಕ್ಸ್ಪಾಟ್ಗಳ ಗುರುತಿಸುವುದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವಂತೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಮತ್ತು ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ
ಸಭೆಯಲ್ಲಿ ಮಾತನಾಡಿ, ಈಗಾಗಲೇ ಗುರುತಿಸಿರುವ ಬ್ಲಾಕ್ ಸ್ಪಾಟ್ಗಳನ್ನು ಸರಿಪಡಿಸಲು ಕೈಗೊಂಡಿರುವಕ್ರಮಗಳ ಬಗ್ಗೆ ಇಲಾಖಾವಾರು ವಿವರ ಪಡೆದರು. ಪ್ರತಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಹಾಗೂ ಗ್ರಾಪಂ ಹಂತದವರೆಗೆ ಇಂತಹ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಸರಿಪಡಿಸಬೇಕು, ಅಪಘಾತ ನಿಯಂತ್ರಿಸಲುಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಅನುದಾನ ಬಳಸಿ: ರಸ್ತೆ ಸರಿಪಡಿಸಲು ಹಾಗೂ ಸೂಚನಾಫಲಕ ಆಳವಡಿಸಲು ಲಭ್ಯವಿರುವ ಇಲಾಖಾ ಅನುದಾನ ಬಳಸಬೇಕು, ಹೆಚ್ಚುವರಿ ಅಗತ್ಯದ್ದರೆ ರಸ್ತೆ ಸುರಕ್ಷಾ ನಿಧಿಗೂ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಬ್ಲಾಕ್ ಸ್ಪಾಟ್ ಪ್ರದೇಶಗಳನ್ನು ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು. 64 ಬ್ಲಾಕ್ ಸ್ಪಾಟ್ ಸರಿಪಡಿಸುವ ಬಗ್ಗೆ ಸಾರಿಗೆ, ಪೊಲೀಸ್ ಹಾಗೂ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಈಗಾಗಲೇ ಬ್ಲಾಕ್ ಸ್ಪಾಟ್ ಗಳಿಂದಾಗಿ ಕಳೆದ5 ತಿಂಗಳಲ್ಲಿ ಆಗಿರುವ ಅಮಘಾತಗಳ ಬಗ್ಗೆ ಪರಿಶೀಲನಾ ವರದಿ ನೀಡುವಂತೆ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.