ಪುಸ್ತಕ ಓದುವುದರಿಂದ ಜ್ಞಾನಾರ್ಜನೆ
Team Udayavani, Jun 17, 2020, 6:40 AM IST
ಸಕಲೇಶಪುರ: ಪುಸ್ತಕಗಳನ್ನು ಓದುವ ಮುಖಾಂತರ ಬೆಳೆಗಾರರು ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳ ಬೇಕೆಂದು ಎಂದು ಖ್ಯಾತ ಸಾಹಿತಿ ಬಿ.ಆರ್.ಲಕ್ಷ್ಮಣ್ ರಾವ್ ಹೇಳಿದರು. ಪಟ್ಟಣದ ರಾಘವೇಂದ್ರ ನಗರ ಬಡಾವಣೆಯಲ್ಲಿರುವ ಹಾಸನ ಜಿಲ್ಲಾ ಬೆಳಗಾರರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ ನಂತರ ಮಾತನಾಡಿದರು.
ಕಾಫಿ ಬೆಳೆಯ ಕುರಿತು ಬೆಳೆಗಾರರು ಮಾಹಿತಿ ಪಡೆಯಲು ಹಾಗೂ ಸಾಹಿತ್ಯದ ಪುಸ್ತಕಗಳನ್ನು ಓದಲು ಪ್ರೇರೇಪಿಸಲು ಗ್ರಂಥಾಲಯ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಲಿದೆ. ಗ್ರಂಥಾ ಲಯದ ಅಭಿವೃದಿಯ ದೃಷ್ಟಿಯಿಂದ ನಾನು ಮುಂದಿನ ದಿನಗಳಲ್ಲಿ ಹೆಚ್ಚಿನ ಪುಸ್ತಕವನ್ನು ನೀಡುತ್ತೇನೆ. ಇದನ್ನು ಎಲ್ಲಾ ಬೆಳೆಗಾರರು ಸದುಪಯೋಗ ಮಾಡಿ ಕೊಳ್ಳಬೇಕೆಂದು ಹೇಳಿದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ತೊ.ಚ. ಅನಂತಸುಬ್ಬರಾಯ ಮಾತನಾಡಿ, ಬೆಳೆಗಾರರ ಸಂಘದ ಮುಖಂಡ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ 7 ಜನ ಸದಸ್ಯರನ್ನೊಳಗೊಂಡ ತಂಡ ರಚಿಸಿ ಗ್ರಂಥಾಲ ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಭವ್ಯವಾದ ಗ್ರಂಥಾಲಯವನ್ನು ನಿರ್ಮಿಸುವ ಉದ್ದೇಶ ವಿದೆ ಎಂದರು. ಗ್ರಂಥಾಲಯ ಉದ್ಘಾಟನೆ ನಂತರ ಬೆಳೆಗಾರರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ,ಕಾರ್ಯದರ್ಶಿ ವಿಶ್ವನಾಥ್ ನಾಯಕ್, ಖಚಾಂಚಿ ಪರಮೇಶ್, ಹಾನುಬಾಳ್ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರಾಜೀವ್, ಟಿಎಪಿಸಿಎಮ್ಎಸ್ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಬೆಳೆಗಾರ ಪತ್ರಿಕೆಯ ವ್ಯವಸ್ಥಾಪಕ ಸುರೇಂದ್ರ ಹಾಗೂ ಸದಸ್ಯರು ಹಾಜರಿದ್ದರು.