ಮೈಕ್ರೋ ಫೈನಾನ್ಸ್ ಸಾಲಮನ್ನಾಕ್ಕೆ ಆಗ್ರಹ
Team Udayavani, Dec 6, 2019, 2:54 PM IST
ಸಕಲೇಶಪುರ: ಋಣಮುಕ್ತಕ್ಕಾಗಿ ಹೋರಾಟ ಸಮಿತಿ ಸಾಲಮನ್ನಾ ವಿಚಾರವಾಗಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಪಟ್ಟಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪರ ವಿರೋಧ ಹಾಗೂ ಮಾತಿನ ಚಕಮಕಿ ನಡೆದು ಸಭೆ ಗದ್ದಲದ ಗೂಡಾಗಿ ಅಂತ್ಯಗೊಂಡಿತು.
ಪಟ್ಟಣದ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಋಣಮುಕ್ತ ಹೋರಾಟ ಸಮಿತಿ ಮುಖಂಡ ಮಂಗಳೂರಿನ ಎ.ಬಿ. ಭಟ್ ಮಾತನಾಡಿ, ಬಡ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಸಾಲ ವಸೂಲಿಗಾರರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ಮಾಲೀಕರು ಆರ್ಬಿಐ ನೀಡಿರುವ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ, ಮೈಕ್ರೋ ಫೈನಾನ್ಸ್ನವರಿಗೆ ಸ್ವಸಹಾಯ ಸಂಘಗಳ ಸ್ಥಾಪಿಸುವ ಹಾಗೂ ಸಾಲ ವಿತರಣೆ ಮಾಡುವ ಯಾವುದೇ ಅವಕಾಶವಿಲ್ಲ. ದೇಶಕ್ಕೆ ಸ್ವಸಹಾಯ ಸಂಘಗಳು ಹಾಗೂ ಉಳಿತಾಯ ಗುಂಪುಗಳು ಒಳ್ಳೆಯ ಉದ್ದೇಶದಿಂದ ಉತ್ತಮವಾದ ಕೊಡುಗೆ ನೀಡುತ್ತಿವೆ. ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ದಾರಿಯಾಗಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಂಡ ಕೆಲವು ಉದ್ದಿಮೆ ದಾರರು, ಮೈಕ್ರೋಫೈನಾನ್ಸ್ ಮೂಲಕ ಮನೆಮನೆಗೆ ದಾಳಿಯಿಟ್ಟು ಬಡವರ ನೆಮ್ಮದಿಯನ್ನು ಕೆಡಿಸಿದೆ ಎಂದು ದೂರಿದರು.
ಹಣಕ್ಕಾಗಿ ಮನೆ ಬಾಗಿಲಿಗೆ ಬರಬಾರದು: ಜೊತೆಗೆ ಇವರ ಆರ್ಥಿಕ ವಹಿವಾಟು ಕಾನೂನು ಬಾಹಿರವಾಗಿದೆ. ಮನೆಬಾಗಿಲಿಗೆ ಬಂದು ಹಣ ನೀಡಿ ದುಪ್ಪಟ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದರ ಪರಿಣಾಮದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಮೈಕ್ರೋ ಫೈನಾನ್ಸ್ಗಳು ನೀಡಿರುವ ಸಾಲವನ್ನು ಮರುಪಾವತಿ ಮಾಡಲು ಬಲವಂತ ಮಾಡ ಬಾರದು, ಜೊತೆಗೆ ಈಗಾಗಲೇ ನೀಡಿರುವ ಸಾಲವನ್ನು ಸರಕಾರ ಋಣಮುಕ್ತ ಕಾಯ್ದೆ ಅನ್ವಯ ಮನ್ನಾಮಾಡಬೇಕು ಎಂದು ಒತ್ತಾಯಿಸಿದರು.
ಸ್ಪಷ್ಟನೆ ನೀಡಲು ಸಿದ್ಧ: ಈ ವೇಳೆ ಮೈಕ್ರೋ ಫೈನಾನ್ಸ್ ಮಾಲೀಕರು ಹಾಗೂ ವಸೂಲಿಗಾರರು, ಸಭೆಯಲ್ಲಿ ಸುಳ್ಳು ಹೇಳುವ ಮೂಲಕ ವೇದಿಕೆ ಮುಖಂಡರು ಮಹಿಳೆಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಈಗಾಗಲೇ ಕೋಟ್ಯಂತರ ರೂ. ಸಾಲವಾಗಿ ನೀಡಿದ್ದು ನೂರಾರು ಕೋಟಿ ವಹಿವಾಟು ನಡೆಸಲಾಗಿದೆ. ಬಡ ಮಹಿಳೆಯರ ಸಬಲೀಕರಣದಲ್ಲಿ ಮೈಕ್ರೋ ಫೈನಾನ್ಸ್ಗಳ ಪಾತ್ರ ಸಾಕಷ್ಟಿದೆ. ಆದರೆ, ವೇದಿಕೆ ಮುಖಂಡರು ಸ್ವಹಿತ ಸಾಧನೆಗಾಗಿ ಸುಳ್ಳು ಹೇಳುವ ಮೂಲಕ ಮಹಿಳೆಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಸ್ವಷ್ಟನೆ ನಾವು ನೀಡಲಿದ್ದೆವೆ ಎಂದು ವೇದಿಕೆ ಬಳಿಗೆ ತೆರಳಿದರು.
ಪೊಲೀಸರ ಮಧ್ಯ ಪ್ರವೇಶ: ಹೋರಾಟ ಸಮಿತಿ ಮುಖಂಡರು ಹಾಗೂ ಫೈನಾನ್ಸ್ ಮಾಲೀಕರ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ವೇಳೆ ಯುವಕರ ಗುಂಪು ಹೋರಾಟ ಸಮಿತಿ ಪರವಾಗಿ ಧ್ವನಿ ಎತ್ತಿದ್ದ ರಿಂದ ಸ್ಥಳದಲ್ಲಿ ಬಿಗುವಿನ ವಾತವಾರಣ ಸೃಷ್ಟಿಯಾಗಿತ್ತು. ಆಗ ಸ್ಥಳಕ್ಕೆ ಬಂದ ಪೊಲೀಸರು ಫೈನಾನ್ಸ್ ಮಾಲೀಕರನ್ನು ಸಭೆಯಿಂದ ಹೊರಕಳುಹಿ ಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
ಮಹಿಳೆಯ ಆಕ್ರೋಶ: ಸಭೆಗೆ ಬಂದಿದ್ದ ಮಹಿಳೆಯರ ಗುಂಪು ಫೈನಾನ್ಸ್ ಮಾಲೀಕರ ಪರ ಧ್ವನಿ ಎತ್ತಿ ಕಷ್ಟ ಕಾಲದಲ್ಲಿ ಹಣ ಒದಗಿಸುವ ಮೈಕ್ರೋ ಫೈನಾನ್ಸ್ಗಳ ಅವಶ್ಯಕತೆ ನಮಗಿದೆ. ಸುಳ್ಳು ಹೇಳಿ ಸಭೆಗೆ ಕರೆಸಿ ಇಲ್ಲಸಲ್ಲದ ಸುಳ್ಳು ಹೇಳುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ, ಹೋರಾಟ ಸಮಿತಿ ಮುಖಂಡರೇ ಭಾಷಣದಲ್ಲಿ ಹೇಳಿದಂತೆ ಸಭೆಗೆ ಬಂದಿರುವ ಬಡ ಮಹಿಳೆಯರಿಗೆ ಬ್ಯಾಂಕ್ನಲ್ಲಿ ಸಾಲ ಕೊಡಿಸಲಿ ನಂತರ ಮೈಕ್ರೋ ಫೈನಾನ್ಸ್ ವಿರುದ್ಧ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ವಾದ –ಪ್ರತಿವಾದ: ಇದಕ್ಕೆ ಪ್ರತಿರೋಧವಾಗಿ ಮೈಕ್ರೋ ಫೈನಾನ್ಸ್ಗಳ ಕನಿಷ್ಠ ಮಾನವೀಯತೆ ಮೈಗೂಡಿಸಿಕೊಂಡಿರಬೇಕು. ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದರು ಸಹ ಈ ಫೈನಾನ್ಸ್ನವರು ಹಣ ಕಟ್ಟಲು ಒತ್ತಾಯಿಸುತ್ತಾರೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಆದ್ದರಿಂದ ಮೈಕ್ರೋ ಫೈನಾನ್ಸ್ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕೆಲವು ಮಹಿಳೆಯರು ಹೇಳಿದರು. ಇದರಿಂದ ಸಭೆ ಗೊಂದಲದ ಗೊಡಾಗಿದ್ದಲ್ಲದೆ ಒಬ್ಬರ ಮಾತು ಒಬ್ಬರಿಗೆ ಕೇಳದಂತಾಯಿತು.
ತಾಲೂಕು ಋಣಮುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ ಹರೀಶ್, ಅಧ್ಯಕ್ಷೆ ಭಾಗಿರಥಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸಹ ಕಾರ್ಯದಶಿ ವಿಲಿಯಂ ಬಾಬು ಇತರರು ಇದ್ದರು.