ಗ್ರಾಮಾಭಿವೃದ್ಧಿಯಿಂದ ಜನಪರ ಕಾರ್ಯಕ್ರಮ
Team Udayavani, Jan 30, 2021, 7:06 PM IST
ಜಾವಗಲ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 4 ದಶಕಗಳಿಂದ ಸಮುದಾಯದ ಸಹಭಾಗಿತ್ವದೊಂದಿಗೆ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಿಕ ಪಿ.ಗಂಗಾಧರ ರೈ ತಿಳಿಸಿದರು.
ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ನಮ್ಮೂರು, ನಮ್ಮ ಕೆರೆ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಸಹಕಾರ ನೀಡಿ: ಕೆರೆ ಪುನಶ್ಚೇತನ ಕಾಮಗಾರಿಯನ್ನು ಶ್ರೀ ಧರ್ಮಸ್ಥಳ ಗ್ರಾಮೀಣ ಯೋಜನೆ ಸಹಕಾರದೊಂದಿಗೆ 14.5 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆರೆ ಮತ್ತು ಜೀವ ಜಲದ ಹನಿ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕೆಂದರು.
ನೀರಿನ ಮೂಲಗಳನ್ನು ಬಲಪಡಿಸಬೇಕಾದ ಅನಿವಾರ್ಯತೆ ಇದೆ. ನೀರಿಲ್ಲದ ಬದುಕನ್ನು ಎಂದಿಗೂ ಊಹಿಸಲು ಸಾಧ್ಯವಿಲ್ಲ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೆರೆಯ ಸಂರಕ್ಷಣೆಗಾಗಿ ನಮ್ಮೂರು ನಮ್ಮ ಕೆರೆ ಯೋಜನೆ ಜಾರಿಗೆ ತಂದು ಆ ಮೂಲಕ ಕೆರೆ ಹೂಳೆತ್ತಿಸಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸುವ ಕಾರ್ಯಕ್ರಮ ರೂಪಿಸಿದ್ದಾರೆಂದರು.
ರಾಜ್ಯಾದ್ಯಂತ ಈವರೆಗೆ 250 ಕೆರೆಗಳ ಪುನಶ್ಚೇತನಕಾರ್ಯಕ್ಕೆ ಚಾಲನೆ ನೀಡಿ ಅಭಿವೃದ್ಧಿಪಡಿಸಲಾಗಿದೆ. ಬಂದೂರು ಕೆರೆ ಸುತ್ತಮುತ್ತಲ 1 ಕಿ.ಮೀ.ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ 500-600 ಲೋಡ್ ಮಣ್ಣನ್ನು ಸಾಗಿಸಿ ಭೂಮಿಯ ಫಲವತ್ತತೆ ಹೆಚ್ಚಿಸಲು ಶ್ರಮಿಸಲಾಗಿದೆ ಎಂದರು.
ಇದನ್ನೂ ಓದಿ:ಬೈಕ್ ಮತ್ತು ಗೂಡ್ಸ್ ರಿಕ್ಷಾಗಳ ನಡುವೆ ಅಪಘಾತ : ಬೈಕ್ ಸವಾರ ಸಾವು
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್.ಮಹೇಶ್ ಮಾತನಾಡಿ, ಕೆರೆ ಪುನಶ್ಚೇತನಕ್ಕೆ ಇದುವರೆಗೂ ರೈತರ ಹೊಲಗಳಿಗೆ 900ಕ್ಕೂ ಅಧಿಕ ಟ್ರ್ಯಾಕ್ಟರ್ ಲೋಡ್ ಮಣ್ಣನ್ನು ಸಾಗಾಟ ಮಾಡಲಾಗಿದೆ. ಪ್ರತಿದಿನ 3 ಜೆಸಿಬಿ 35-40 ಟ್ರ್ಯಾಕ್ಟರ್ ಕೆಲಸ ಮಾಡುತ್ತಿವೆ ಎಂದರು. ಸಂಸ್ಥೆಯ ಅರಸೀಕೆರೆ ಹಾಗೂ ಹಾಸನ ತಾಲೂಕು ಯೋಜನಾಧಿಕಾರಿಗಳಾದ ಕೆ.ವಿನಾಯಕ ಪೈ, ಪುರುಷೋತ್ತಮ್ ವಲಯ ಮೇಲ್ವಿಚಾರಕ ಶ್ರೀನಿವಾಸ ಮೂರ್ತಿ, ಕೃಷಿ ಮೇಲ್ವಿಚಾರಕ ಅನಿಲ್, ಕೆರೆ ಅಭಿವೃದ್ಧಿಸಮಿತಿ ಸದಸ್ಯರಾದ ಗಣೇಶ್, ಬಸವಲಿಂಗೇಗೌಡ ಮತ್ತಿತರರಿದ್ದರು.