ತಾಲೂಕಿನಲ್ಲಿ ಮಿತಿ ಮೀರಿದ ಮಾದಕ ವಸ್ತು ಮಾರಾಟ ದಂಧೆ
ಗಾಂಜಾ ವ್ಯಸನಕ್ಕೆ ದಾಸರಾಗುತ್ತಿರುವ ಯುವ ಜನರು , ಸಾರ್ವಜನಿಕರು ದೂರು ನೀಡಿದರೂ ಪ್ರಯೋಜನವಿಲ್ಲ
Team Udayavani, Jul 9, 2019, 12:31 PM IST
ಮಾದಕ ವಸ್ತುಗಳ ಸೇವನೆ ತಾಣವಾಗಿರುವ ಪಾಳು ಬಿದ್ದಿರುವ ರೈತ ತರಬೇತಿ ಕೇಂದ್ರ.
ಅರಕಲಗೂಡು: ತಾಲೂಕಿನಲ್ಲಿ ಮಾದಕ ವಸ್ತು ಮಾರಾಟ ದಂಧೆ ಮಿತಿ ಮೀರಿದ್ದು, ಪೊಲೀಸ್ ಇಲಾಖೆ ಮೌನವಹಿಸಿದೆ.
ಅರಕಲಗೂಡು ತಾಲೂಕಿನಲ್ಲಿ ಮಾದಕ ವಸ್ತುಗಳ ಸೇವನೆಗೆ ಯುವಕರು ಬಲಿಯಾಗುತ್ತಿರುವ ಸಂಖ್ಯೆ ಅಧಿಕವಾಗಿದೆ. ಪಟ್ಟಣದ ತಾಲೂಕು ಕ್ರೀಡಾಂಗಣ, ಶಾಲಾ ಮೈದಾನ, ಸಂಜೆ ಸಮಯದಲ್ಲಿ ಸರ್ಕಾರಿ ಕಚೇರಿಗಳ ಕಾಂಪೌಂಡ್, ಸ್ಮಶಾನ, ಕೃಷಿ ಪಾಠಶಾಲೆ ಕಟ್ಟಡ ಹಾಗೂ ಬಸ್ ನಿಲ್ದಾಣಗಳು ಮಾದಕ ವಸ್ತುಗಳ ಸೇವನೆಯ ತಾಣಗಳಾಗಿವೆ.
ಈ ಸ್ಥಳಗಳಲ್ಲಿ ಮತ್ತಿನಿಂದ ತೂರಾಡುವ ವ್ಯಕ್ತಿಗಳನ್ನು ಸಾರ್ವಜನಿಕರು ಪ್ರಶ್ನೆ ಮಾಡಲು ಮುಂದಾದರೆ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಎಲ್ಲಾ ಬೆಳವಣಿಗೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಇದರಿಂದ ಮುಗ್ಧ ಮನಸ್ಸುಗಳನ್ನ ರಕ್ಷಿಸುವವರು ಯಾರು, ಈ ದಂಧೆ ನಡೆಸುತ್ತಿರುವ ತಂಡಗಳನ್ನ ಮಟ್ಟಹಾಕಲು ಯಾರೂ ಮುಂದಾಗದಿ ರುವುದು ಆತಂಕ ಸೃಷ್ಟಿಯಾಗಿದೆ.
ಗಾಂಜಾ ದಂಧೆಯ ಐವರ ಬಂಧನ: ತಾಲೂಕಿನಲ್ಲಿ ಗಂಜಾ ಮಾರಾಟ ರಾಜರೋಷವಾಗಿ ನಡೆಯುತ್ತಿದೆ ಎಂಬುದಕ್ಕೆ ತಾಲೂಕಿನ ಮಲ್ಲಿಪಟ್ಟಣ ಹೋಬಳಿ, ಅಬ್ಬೂರು ಮಾಚಗೌಡನಹಳ್ಳಿ ಗ್ರಾಮದಲ್ಲಿ ಜು.2 ರಂದು ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಅಡ್ಡೆಯ ಮೇಲೆ ಪೋಲೀಸರು ದಾಳಿ ನಡೆಸಿ ಸುಮಾರು 23 ಕೇಜಿ ಗಾಂಜಾ ವಶಪಡಿಸಿಕೊಂಡು ಐವರನ್ನು ಬಂಧಿಸಿ ದ್ದಾರೆ. ಆದರೆ ಈ ಗ್ರಾಮದಲ್ಲಿ ಇದೇ ಮೊದಲೇನಲ್ಲ, ಕಳೆದ 4-5 ತಿಂಗಳ ಹಿಂದೆ ಇದೇ ಗ್ರಾಮದ ಬಾಸೀದ್ ಎಂಬುವವನ ಮನೆಯ ಮೇಲೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದರೂ ಗಾಂಜಾ ಮಾರಾಟ ದಂಧೆ ನಿರಾತಂಕವಾಗಿ ನಡೆಯುತ್ತಿದೆ.
ಒಡಿಶಾ ರಾಜ್ಯದ ಸಂಬಂಧ: ಅಬ್ಬೂರು ಮಾಚ ಗೌಡನಹಳ್ಳಿ ಗ್ರಾಮದಲ್ಲಿ 2 ಬಾರಿ ಪೊಲೀಸರ ಕಾರ್ಯಾ ಚರಣೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳು ಒಡಿಶಾ ರಾಜ್ಯದವ ರಾಗಿದ್ದು, ಗಾಂಜಾವನ್ನ ಆ ರಾಜ್ಯದಿಂದಲೇ ತಂದು ಈ ಗ್ರಾಮದ ಕೆಲ ಕುಟುಂಬಗಳೊಂದಿಗೆ ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜು.2 ರಂದು ಪೊಲೀಸರು ಬಂಧಿಸಿದ ಆರೋಪಿಗಳು ಒಡಿಶಾ ರಾಜ್ಯದ ಕಾಲಿಮೆಲ್ಲಾ ತಾಲೂಕು ಮಲಕನಗಿರಿ ಜಿಲ್ಲೆಯ ಎಂ.ವಿ. 90 ಗ್ರಾಮದ ನಿಬಾಸ್ ಸುಷ್ಮಾ ಸರ್ಕಾರ್, ಹಾಗೂ ರೇಖಾಮಂಡಲ್ ಬಾಪನ್ಪಲ್ಲಿ ಎಂ.ಪಿ.ವಿ. 67ರ ನಿವಾಸಿಗಳನ್ನ ಬಂಧಿಸಿದ್ದಾರೆ. ಇವರು ಅಬ್ಬೂರು ಮಾಚಗೌಡನಹಳ್ಳಿ ನಿವಾಸಿ ಇನಾಯತ್ ಮತ್ತು ನೂರ್ ಅಹಮದ್ ಮನೆಗೆ ತಂದು ಹಸ್ತಾಂತರ ಮಾಡುವ ಸಮಯದಲ್ಲಿ ಬಂಧಿಸ ಲಾಗಿದೆ. ಆದರೂ ಗಾಂಜಾ ಮಾರಾಟ ದಂಧೆ ನಡೆ ಯುತ್ತಿದೆ ಎಂದರೆ, ಪೊಲೀಸ್ ಆಡಳಿತದ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟಿಸುತ್ತದೆ.
ಕೊಡಗು, ಮಂಗಳೂರಿನಿಂದಲೂ ಮಾದಕ ವಸ್ತು ಗಳು ರವಾನೆಯಾಗುತ್ತಿದೆ ಎಂಬ ವಿಷಯ ಸಾರ್ವ ಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಇಂತಹ ಜಾಲಗಳನ್ನು ಬಗ್ಗು ಬಡಿಯದಿದ್ದರೆ ಯುವ ಪೀಳಿಗೆ ಈ ದಂಧೆಯಲ್ಲಿ ಸಿಲುಕಿ ನರಳಬೇಕಾಗುತ್ತದೆ.
● ಅರಕಲಗೂಡು ಶಂಕರ್