ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ
Team Udayavani, Sep 24, 2022, 5:59 PM IST
ಅರಸೀಕೆರೆ: ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಕರಿಗೆ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಗಂಡಸಿ ನಾಗರಾಜ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮ ಅನುಸಾರ ಗ್ರಾಹಕರಿಂದ ಎರಡು ಬಾರಿ ಪ್ರತ್ಯೇಕ ಬಯೋಮೆಟ್ರಿಕ್ ಪಡೆಯಬೇಕಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ಹೇಳತೀರದಾಗಿದ್ದು, ಕೂಲಿ ಕೆಲಸಕ್ಕೆ ತೆರಳುವವರಿಗೆ ಸಕಾಲದಲ್ಲಿ ಪಡಿತರ ನೀಡಲು ಸಾಧ್ಯವಾಗದ ಕಾರಣ ಮಾತಿನ ಪ್ರಹಾರ ಎದುರಿಸಬೇಕಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕಿದರು ಎನ್ನುವಂತೆ ಯಾವುದೋ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಅಪ ಪ್ರಚಾರ ಮಾಡಿದರೆ ಅದರ ಫಲವನ್ನು ನಾವು ಅನುಭವಿಸು ವಂತಾಗಿರುವುದು ದುರದೃಷ್ಟಕರ. ಉಭಯ ಸರ್ಕಾರ ಗಳು ವಾಸ್ತವ ಮನಗಂಡು ಲೋಪ ಸರಿಪಡಿಸಿ ಪಡಿತರ ವಿತರಕರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಬಾಣಾವರ ಜಯಣ್ಣ ಮಾತನಾಡಿ, ಪಡಿತರ ಮಾರಾಟದ ಕಮಿಷನ್ ನೀಡಿ ತಿಂಗಳುಗಳೇ ಕಳೆದಿದೆ. ಜೀವನ ನಡೆಸುವುದೇ ದುಸ್ತರವಾಗಿದೆ. ಪರಿಸ್ಥಿತಿ ಹೀಗಿದ್ದರೂ ಪದೇ ಪದೆ ಸರ್ಕಾರ ಗದಾ ಪ್ರಹಾರ ನಡೆಸುತ್ತಿರುವುದು ನಮ್ಮೆಲ್ಲರಿಗೂ ತೀವ್ರ ನೋವು ತಂದಿದೆ. ಸಮಸ್ಯೆ ಗಂಭೀರತೆಯು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯರಿಗೂ ಗೊತ್ತಿದೆ. ಒಂದೇ ಬಾರಿ ಬಯೋಮೆಟ್ರಿಕ್ ಪಡೆಯುವ ಜತೆಗೆ ಸರ್ವರ್ ಸಮಸ್ಯೆ ಇತ್ಯರ್ಥ ಪಡಿಸಲು ಮನ್ನಣೆ ನೀಡಬೇಕು ಎಂದರು.
ಬಾಣಾವರ ಉಮೇಶ್, ಕೊರನಹಳ್ಳಿ ಆನಂದ್ ಹಾಗೂ ಇನ್ನಿತರರು ಇದ್ದರು.