ಡಾ.ಅಂಬೇಡ್ಕರ್ಗೆ ಅವಮಾನ ಖಂಡನೀಯ
Team Udayavani, Dec 7, 2019, 1:01 PM IST
ಬೇಲೂರು: ಡಾ. ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸೀಮಿತವಲ್ಲ. ಅವರು ರಚಿಸಿದ ಸಂವಿಧಾನದ ಮೂಲಕ ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ನೀಡಿದ್ದಾರೆ. ಇಂಥವರನ್ನು ಅಮಾನಿಸುವ ಕೆಲಸವಾಗುತ್ತಿದ್ದು, ಇದು ಖಂಡನೀಯ ಎಂದು ಕರ್ನಾಟಕ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಬಿ.ಎಲ್. ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 63ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ತಾಲೂಕು ಘಟಕದಿಂದ ಆಚರಿಸಲಾಗದ ಮಹಾಪರಿನಿರ್ವಾಣ ದಿನದ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಇಂತಹ ಕೃತ್ಯಗಳು ಮತ್ತು ಅಂಬೇಡ್ಕರ್ಗೆ ವಿರುದ್ಧವಾಗಿ ಮಾತನಾಡುವುದು. ಅವರನ್ನು ಅವಮಾನಿಸುವಂತಹ ಕೃತ್ಯಗಳು ನಿಲ್ಲಬೇಕು. ಮುಂದೆ ಇಂತಹ ಕೃತ್ಯಗಳನ್ನು ನಡೆಸಿದರೆ, ಅಂಥವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಪ್ರಧಾನ ಸಂಚಾಲಕ ರವಿಕುಮಾರ್ ಮಾತನಾಡಿ, ಡಾ.ಅಂಬೇಡ್ಕರ್ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ. ಅವರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಉನ್ನತಿ ಹೊಂದಬೇಕು.
ಭಾರತದಲ್ಲಿ ಸಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರು ಅಂಬೇಡ್ಕರ್. ಅಲ್ಲದೆ ಅವರು ತಳ ಸಮುದಾಯಗಳನ್ನು ಮೇಲತ್ತುವ ಕೆಲಸಗಳನ್ನು ಮಾಡಿ, ಮಹಿಳೆಯರ, ಕಾರ್ಮಿಕರ ಹಾಗೂ ಶೋಷಿತರ ಪರವಾಗಿ ಹೊರಾಟ ನಡೆಸಿ, ಹಕ್ಕುಗಳನ್ನು ತಂದು ಕೊಟ್ಟವರು. ಅವರ ಆಶಯದಂತೆ ಎಲ್ಲರು ನಡೆದಾಗ ದೇಶದಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಮುಖಂಡ ಹೊಯ್ಸಳ, ಕೃಷ್ಣಯ್ಯ, ತಾಲೂಕು ಮುಖಂಡರಾದ ವಸಂತಕುಮಾರ್, ನಿಂಗರಾಜು, ಧರ್ಮಯ್ಯ, ಮಲ್ಲಿಕಾರ್ಜುನ್, ಚಂದ್ರು, ನಾಗರಾಜು, ಮಹೇಶ್, ಪ್ರಕಾಶ್ ಸೇರಿದಂತೆ ಇನ್ನಿತರರಿದ್ದರು.