ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ
Team Udayavani, Jun 11, 2020, 6:17 AM IST
ಚನ್ನರಾಯಪಟ್ಟಣ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸದೇ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಮನವಿ ಮಾಡಿದರು. ಪಟ್ಟಣ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಮಾತನಾಡಿದರು.
ಹಾಸನ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾಗಿದ್ದಾರೆ. ಜನರು ನೆರವಾಗಿ ಸರ್ಕಾರ ಕಚೇರಿಗೆ ತೆರಳುವಂತಿಲ್ಲ. ಪ್ರತಿ ಯೋಜನೆಗೆ ರಾಜಕಾರಣಿಗಳ ಶಿಫಾ ರಸು ಮಾಡಿಸುವಂತೆ ಹೇಳುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಮಂತ್ರಿಗಳು ಮುಂದಾಗಬೇಕು. ರಾಜಕಾರಣಿಗಳ ಹಿಂಬಾಲಕರಾಗಿರುವ ಅಧಿಕಾರಿಗಳ ಬಗ್ಗೆ ತಾಲೂಕು ಬಿಜೆಪಿ ಕೋರ್ ಕಮಿತಿ ರಚಿಸಿ ಯಾವ ಅಧಿಕಾರಿಗಳು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ ಎನ್ನುವುದ ಪಟ್ಟಿ ಮಾಡಿ ತಮ್ಮ ಗಮನಕ್ಕೆ ತರಲಿದೆ ಎಂದರು.
ಜಿಲ್ಲಾ ಮಂತ್ರಿಗಳು ಜಿಲ್ಲೆಯ ಏಳು ಶಾಸಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರಬೇಕು ಹಾಗೆಂದ ಮಾತ್ರಕ್ಕೆ ಶಾಸಕರ ತಾಳಕ್ಕೆ ಹೆಜ್ಜೆ ಹಾಕುವುದಲ್ಲ. ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲಾ ಬಿಜೆಪಿ ಮುಖಂಡ ರೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಅಧಿಕಾರದಲ್ಲಿ ಇದ್ದಾಗ ಪಕ್ಷವನ್ನು ಸದೃಢವಾಗಿ ಬೆಳೆಸುವುದು ಜಿಲ್ಲಾ ಮಂತ್ರಿಗಳಕರ್ತವ್ಯವಾಗಿದೆ ಎಂದರು.
ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯ ಮಾತನಾಡಿ, ನನ್ನ ಬಗ್ಗೆ ಅನುಮಾನ ಬೇಡ ದೈರ್ಯವಾಗಿ ಪಕ್ಷ ಸಂಘಟನೆ ಮಾಡಿ, ಆತಂಕ ಪಡದೇ ತಮ್ಮ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ಅಧ್ಯಕ್ಷ ಚನ್ನಕೇಶವ, ಮುಖಂಡರಾದ ಶಿವನಂಜೇಗೌಡ, ರಂಗೇಗೌಡ, ನಾಗರಾಜು, ಸತೀಶ, ನಂಜುಂಡ ಮೈಮ್, ಧರಣೀಶ, ಜಗದೀಶ ಮೊದಲಾದವರು ಉಪಸ್ಥಿತರಿದ್ದರು.