ಸಂತ್ರಸ್ತರಿಗೆ ಸ್ಪಂದಿಸದ ಕೇಂದ್ರ, ರಾಜ್ಯ ಸರ್ಕಾರ
Team Udayavani, Sep 10, 2019, 3:33 PM IST
ಹೊಳೆನರಸೀಪುರ ಚನ್ನಾಂಬಿಕಾ ಕನ್ವನ್ಷನಲ್ ಹಾಲ್ನಲ್ಲಿ ನಡೆದ ತಾಲೂಕು ಜೆಡಿಎಸ್ ಅಭಿನಂದನಾ ಸಮಾರಂಭವನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಗಣ್ಯರು ಉದ್ಘಾಟಿಸಿದರು.
ಹೊಳೆನರಸೀಪುರ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ, ಮನೆಗಳ ಕುಸಿತ ಸೇರಿದಂತೆ ಆಗಿರುವ ಅಪಾರ ಹಾನಿಯಿಂದಾಗಿ ಸುಮಾರು 34 ಸಾವಿರ ಕೋಟಿ ರೂ. ನಷ್ಟವಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಪಾದಿಸಿದರು.
ಪಟ್ಟಣದ ಚನ್ನಾಂಬಿಕಾ ಕನ್ವೆನ್ಷನ್ಹಾಲ್ನಲ್ಲಿ ತಾಲೂಕು ಜೆಡಿಎಸ್ ಪಕ್ಷ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಮತ ಪಡೆದು ಅಧಿಕಾರ ಸ್ವೀಕರಿಸಿ ಇಂದು ಸಂಕಷ್ಟದಲ್ಲಿರುವ ಅವರನ್ನೇ ಕಡೆಗಣಿ ಸುತ್ತಿರುವುದು ಎಷ್ಟರ ಮಟ್ಟಿಗೆ ಎಂದು ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿಗೆ ರಾಜ್ಯದ ಜನತೆ 25 ಸ್ಥಾನಗಳನ್ನು ನೀಡಿದೆ. ಆದರೆ ಅಷ್ಟು ಸ್ಥಾನಗಳನ್ನು ನೀಡಿದ ರಾಜ್ಯದ ಜನತೆ ಸಂಕಷ್ಟದ ವೇಳೆ ಸಹಕಾರದ ಹಸ್ತ ನೀಡದೇ ತಾರತಮ್ಯ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದರು.
ತಮ್ಮ ತಂದೆ ಹಾಗೂ ಶಾಸಕರಾಗಿರುವ ಎಚ್.ಡಿ. ರೇವಣ್ಣ ಅವರು, 2004ರಿಂದ 2008 ವರೆಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆಇಬಿ, ಕೆಎಂಎಫ್ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.
ತಾವು ಲೋಕಸಭಾ ಸದಸ್ಯನಾಗಿ ಆಯ್ಕೆ ಗೊಂಡ ನಂತರ ಅಭಿನಂದನೆ ಹೇಳಬೇಕೆಂದು ಅನ್ನಿಸಿದರೂ ಸಹ ಅಭಿನಂದನೆ ಹೇಳಲು ಸಾದ್ಯವಾಗಿರಲಿಲ್ಲ ಇದೀಗ ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿ ಎಚ್.ಕೆ.ಕುಮಾರಸ್ವಾಮಿ ಅವರು ಅಧ್ಯಕ್ಷರಾಗಿದ್ದು ಅವರಿಗೂ ಸಹ ಅಭಿನಂದನೆ ತಡವಾಗಿ ಅಭಿನಂದನೆ ಹೇಳುತ್ತಿದ್ದೇನೆಂದರು.
ಅಭಿವೃದ್ಧಿ ಪರ್ವ: ರಾಜ್ಯಾದ್ಯಕ್ಷ ಎಚ್.ಕೆ.ಕುಮಾರ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ವಿದ್ದರೂ ಹೊಳೆನರಸೀಪುರ ಕ್ಷೇತ್ರ ಮಾತ್ರ ಎಂದೆಂದಿಗೂ ಸಹ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಯತ್ತಾ ಸಾಗುತ್ತಿದೆ ಎಂದರು.
ರೈತರ ಸಾಲ ಮನ್ನಾ: ಮಾಜಿ ಸಚಿವ ರೇವಣ್ಣ ಮಾತನಾಡಿ ಕಳೆದ 2018 ಚುನಾವಣೆಯಲ್ಲಿ ರಾಜ್ಯ ದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಾಡಿದ ಮೊದಲ ಕೆಲಸ ಸಾಲ ಮನ್ನಾ. ಅದನ್ನು ಚಾಚೂ ತಪ್ಪದೇ ಅವರು ಅನು ಷ್ಠಾನಕ್ಕೆ ತಂದಿದ್ದಾರೆ. ಅದರಂತೆ ಜಿಲ್ಲೆಯಲ್ಲಿನ ರೈತರಿಗೆ ಸಾಲ ಮನ್ನಾದ ಉಪಯೋಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ರೇವಣ್ಣ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಮಾಜಿ ಸಚಿವ ರೇವಣ್ಣ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಮಂಜುನಾಥ್, ಪಕ್ಷದ ಮುಖಂಡ ರಾದ ಅರಕಲಗೂಡು ಸತೀಶ್, ಮುತ್ತಿಗೆ ರಾಜೇಗೌಡ, ತಾಲೂಕು ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಪುರಸಭೆ ಸದಸ್ಯರು, ಪಟ್ಟಣದ ಜೆಡಿಎಸ್ ಮುಖಂಡರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು.