ಮಲೆನಾಡಿಗೆ ಎತ್ತಿನಹೊಳೆ ಯೋಜನೆ ಮಾರಕ
ಪೈಪ್ಲೈನ್ ಅಳವಡಿಕೆಯಿಂದ ಮಣ್ಣು ಸಡಿಲಗೊಂಡು ಭೂಕುಸಿತ ಸಂಭವಿಸುವ ಆತಂಕ
Team Udayavani, May 27, 2019, 8:49 AM IST
ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಸಮೀಪ ಎತ್ತಿನಹೊಳೆ ಯೋಜನೆಗಾಗಿ ಯಂತ್ರಗಳನ್ನು ಬಳಸಿ ಭಾರೀ ಗಾತ್ರದ ಬಂಡೆಗಳು ಹಾಗೂ ಮಣ್ಣನ್ನು ತೆಗೆಯುತ್ತಿರುವುದು.
ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು ತಾಲೂಕಿನ ಜನತೆಯಿಂದ ಕೇಳಿ ಬರುತ್ತಿದೆ.
ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರನ್ನು ನೀಡಲು ಅರಬ್ಬಿ ಸಮುದ್ರ ಸೇರುತ್ತಿದ್ದ ಕೆಂಪು ಹೊಳೆ, ಎತ್ತಿನಹೊಳೆ ನೀರನ್ನು ಪೂರ್ವಾಭಿ ಮುಖವಾಗಿ ತಿರುಗಿಸಿ ನೀರು ಪೂರೈಕೆ ಮಾಡಲು ಸುಮಾರು 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಹಲವೆಡೆ ನಡೆಸಲಾಗುತ್ತಿದೆ.
ಈ ಯೋಜನೆಗಾಗಿ ತಾಲೂಕಿನ ಹಲವೆಡೆ ಸಾವಿರಾರು ಎಕರೆಗಳಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಬೃಹತ್ ಗಾತ್ರದ ಪೈಪ್ಗ್ಳನ್ನು ನೆಲದೊಳಗೆ ಹಾಕಲು ಯಂತ್ರ ಗಳಿಂದ ಭೂಮಿಯನ್ನು ಭಾರೀ ಆಳದಲ್ಲಿ ಕೊರೆ ಯಲಾಗಿದೆ. ಭೂಮಿಯ ಒಳಗಿದ್ದ ಬೃಹತ್ ಗಾತ್ರದ ಬಂಡೆಗಳನ್ನು ತೆಗೆದು ಕಾಮಗಾರಿಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಮಣ್ಣು ಸಡಿಲ ಗೊಂಡು ಭೂಕುಸಿತಗಳು ಉಂಟಾಗಲು ಕಾರಣವಾಗಿದೆ.
ವ್ಯಾಪಕ ಅರಣ್ಯ ನಾಶ: ಸಣ್ಣಪುಟ್ಟ ನದಿಗಳು, ಜರಿಗಳು ಹರಿಯುವ ದಿಕ್ಕನ್ನೇ ತಿರುಗಿಸಲಾಗಿದ್ದು ಇದರಿಂದ ಮಲೆನಾಡಿನಲ್ಲಿ ಹಿಂದೆಂದೂ ಕಾಣದ ಜಲಕ್ಷಾಮ ಈ ಬಾರಿ ಕಂಡು ಬರುತ್ತಿದೆ. ಹಲವೆಡೆ ಅನಧಿಕೃತವಾಗಿ ಡೈನಮೆಂಟ್ಗಳನ್ನು ಸ್ಫೋಟಿಸ ಲಾಗಿದ್ದು ಇದರಿಂದ ಹಲವು ಅಡ್ಡಪರಿಣಾಮಗಳು ಉಂಟಾಗಿದೆ. ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ಮರಗಳನ್ನು ಕಡಿಯಲಾಗಿದ್ದು ಅಪಾರ ಪ್ರಮಾಣದ ಅರಣ್ಯವನ್ನು ನಾಶ ಮಾಡಲಾಗಿದೆ. ಯೋಜನೆಯ ಹೆಸರಿನಲ್ಲಿ ನದಿ ತಟದಲ್ಲಿದ್ದ ಮರಳನ್ನು ಲೂಟಿ ಮಾಡಲಾಗಿದ್ದು, ಮರಳು ಶೇಖರಣೆಯಾಗಲು ಇನ್ನು ಅನೇಕ ವರ್ಷಗಳು ಕಾಯಬೇಕಾಗಿದೆ. ಹಿಂದೆಲ್ಲಾ ಮಳೆಯ ಪ್ರಮಾಣ ವಿಪರೀತವಾಗಿದ್ದರು ಸಹ ಭೂಕುಸಿತ ಗಳು ಭಾರೀ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಆದರೆ ಕಳೆದ ವರ್ಷ ಅತಿವೃಷ್ಟಿಯಿಂದಾಗಿ ತಾಲೂಕಿನ ಹಲವಡೆ ಭೂಕುಸಿತಗಳು ಉಂಟಾಗಿ ಜನರನ್ನು ತಲ್ಲಣಗೊಳಿಸಿತ್ತು. ರಾಷ್ಟ್ರೀಯ ಹೆದ್ದಾರಿ 75, ಬಿಸ್ಲೆ ಘಾಟ್, ಹಿಜ್ಜನಹಳ್ಳಿ ಸಮೀಪ ಉಂಟಾದ ಭೂ ಕುಸಿತಗಳು ರಸ್ತೆಯ ಸಂಪರ್ಕವಿಲ್ಲದಂತೆ ಮಾಡಿತ್ತು.
ಅತಿವೃಷ್ಟಿ- ಅನಾವೃಷ್ಟಿ: ಕಳೆದ ವರ್ಷ ಅತಿವೃಷ್ಟಿ ಯುಂಟಾಗಿದ್ದು ಈ ಬಾರಿ ಅನಾವೃಷ್ಟಿಯಾಗಿ ರುವುದರಿಂದ ತಾಲೂಕಿನಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ಕೊಳ್ಳಗಳು, ಕೆರೆಗಳು, ನದಿಗಳು ಬರಿದಾಗಿದೆ. ಜಲಕ್ಷಾಮ ಉಂಟಾಗಿರುವುದರಿಂದ ಹಲವು ಜಲಚರಗಳು ಸಾವಿಗೀಡಾಗಿದೆ. ಅರಣ್ಯ ನಾಶದಿಂದ ಕಾಡುಪ್ರಾಣಿಗಳು ನಾಡಿಗೆ ಬರುತ್ತಿದ್ದು ಕಾಡಾನೆ ಸಮಸ್ಯೆಯಂತೂ ಮಿತಿ ಮೀರಿದೆ. ಕಳೆದ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಕೆಂಪುಹೊಳೆ ಈ ಬೇಸಿಗೆಯಲ್ಲಿ ಬರಿದಾಗಿದೆ. ಮಲೆನಾಡಿನಲ್ಲಿ ಮಳೆ ಮರೀಚಿಕೆಯಾಗಿದ್ದು ಕಳೆದ 3ತಿಂಗಳುಗಳಿಂದ ಮಳೆ ನಾಪತ್ತೆಯಾಗಿದೆ. ಮಲೆನಾಡಿನ ಉಷ್ಣಾಂಶ 34 ಡಿಗ್ರಿವರೆಗೆ ದಾಖ ಲಾಗಿದ್ದು ಬಯಲು ಸೀಮೆಯಂತೆ ಭಾಸವಾಗು ತ್ತಿದೆ. ರಾತ್ರಿಯ ಸಮಯದಲ್ಲಿ ಫ್ಯಾನ್ಗಳಿಲ್ಲದೇ ನಿದ್ದೆ ಮಾಡಲು ಅಸಾಧ್ಯವಾಗಿದೆ.
ಬತ್ತುತ್ತಿರುವ ನದಿಗಳು: ನೀರಿನ ಹೆಸರಿನಲ್ಲಿ ರಾಜ ಕಾರಣಿಗಳ, ಅಧಿಕಾರಿಗಳ, ಗುತ್ತಿಗೆದಾರರ ಜೇಬು ತುಂಬಿಸುವ ಈ ಯೋಜನೆಯ ಪರಿಣಾಮ ಧರ್ಮಸ್ಥಳದ ಮಂಜುನಾಥನಿಗೂ ತೊಂದರೆಯುಂಟಾಗಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಧರ್ಮಸ್ಥಳದ ಧರ್ಮದರ್ಶಿ ವಿರೇಂದ್ರ ಹೆಗ್ಗಡೆಯವರೇ ಭಕ್ತಾದಿಗಳೇ ನಿಮ್ಮ ಪ್ರವಾಸವನ್ನು ಮುಂದೂಡಿ ಎಂದು ಹೇಳುವ ಪರಿಸ್ಥಿತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಗಳು ಉದ್ಭವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಲೆನಾಡಿನ ಸ್ಥಿತಿ ಚಿಂತಾಜನಕ: ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆಗೆ ಮಲೆನಾಡಿನ ಪರಿಸರ ಸಂಪೂರ್ಣವಾಗಿ ಹದಗೆಟ್ಟಿದೆ. ಕರಾ ವಳಿಯ ಜನ ಈ ಯೋಜನೆಯನ್ನು ವಿರೋಧಿಸಿ ದರೂ ಸಹ ಮಲೆನಾಡಿನ ಜನ ಈ ಯೋಜನೆಯ ವಿರುದ್ಧ ಸಾಂಘಿಕ ಹೋರಾಟ ನಡೆಸದ ಪರಿಣಾಮ ಯೋಜನೆಯನ್ನು ಅನುಷ್ಠಾನ ಮಾಡಲು ಅವಕಾಶ ನೀಡಿದ ಪರಿಣಾಮ ಮಲೆನಾಡಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ನಾಯಿಕೊಡೆಗಳಂತೆ ಹುಟ್ಟುತ್ತಿರುವ ರೆಸಾರ್ಟ್ಗಳು ಹಾಗೂ ಪವರ್ ಪ್ರಾಜೆಕ್ಟ್ಗಳು ಈ ಮಟ್ಟದಲ್ಲಿ ಪರಿಸರ ಹಾನಿ ಮಾಡಿರಲಿಲ್ಲ. ಆದರೆ ಎತ್ತಿನಹೊಳೆ ಯೋಜನೆ ಯಿಂದ ಮಲೆನಾಡು ತನ್ನ ಸಹಜ ವಾತಾವರಣ ವನ್ನು ಕಳೆದುಕೊಂಡಿದೆ. 24 ಟಿಎಂಸಿಯಷ್ಟು ನೀರನ್ನು ಈ ಯೋಜನೆಯಿಂದ ಹರಿಸುತ್ತೇವೆ ಎನ್ನುತ್ತಿರುವ ಈ ಯೋಜನೆಯಲ್ಲಿ 2 ಟಿಎಂಸಿ ಯಷ್ಟು ನೀರನ್ನು ಸಂಗ್ರಹ ಮಾಡಲು ಇನ್ನು ಸಾಧ್ಯವಾಗಿಲ್ಲ.
ಅಭಿವೃದ್ಧಿ ಮರೀಚಿಕೆ: ಎತ್ತಿನಹೊಳೆ ಯೋಜನೆ ಯಿಂದ ತಾಲೂಕಿನ ಹಲವಡೆ ಸಿಮೆಂಟ್ ರಸ್ತೆಗಳು ಆಗಿರುವುದು ಬಿಟ್ಟರೆ ತಾಲೂಕಿನ ಅಭಿ ವೃದ್ಧಿಗೆ ಇನ್ನೇನು ಸಿಕ್ಕಿಲ್ಲ. ಒಂದು ಕಡೆ ಹಾಸನ- ಮಂಗಳೂರು ನಡುವೆ ಚತುಷ್ಟಥ ರಸ್ತೆಗಾಗಿ ಮರ ಗಳನ್ನು ಕಡಿದು ಬೋಳು ಮಾಡಲಾಗಿದ್ದು ಮತ್ತೂಂದು ಕಡೆ ಎತ್ತಿನಹೊಳೆ ಯೋಜನೆಯಿಂದ ಮಲೆನಾಡು ತನ್ನ ಸಹಜತೆಯನ್ನು ಕಳೆದು ಕೊಳ್ಳುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಮಲೆ ನಾಡು ಉತ್ತರ ಕರ್ನಾಟಕದ ಭಾಗಗಳಂತೆ ಆಗು ವುದರಲ್ಲಿ ಯಾವುದೇ ಅನುಮಾನವಿಲ್ಲದಾಗಿದೆ.
ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ಇಲ್ಲಿಗೆ ತರುವುದನ್ನು ನಿಲ್ಲಿಸಿ ಅರಣ್ಯ ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲದಿದ್ದಲ್ಲೆ ನಮ್ಮ ಮುಂದಿನ ಪೀಳಿಗೆಗೆ ಮಲೆನಾಡಿನ ವೈಭವ ಹೀಗಿತ್ತು ಎಂದು ಕಥೆ ಹೇಳಬೇಕಾಗುತ್ತದೆ.
● ಸುಧೀರ್ ಎಸ್.ಎಲ್