ಸರ್ಕಾರ ರೈತರ ಸಂಕಷ್ಟಕೆ ಸ್ಪಂದಿಸುತ್ತಿಲ್ಲ
Team Udayavani, Apr 21, 2020, 3:59 PM IST
ಹಾಸನ: ರೈತರು ಬೆಳೆದ ತರಕಾರಿ ಬೆಳೆಯನ್ನು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಜಾರಿಯಾದ ನಂತರ ಮುಖ್ಯಮಂತ್ರಿಗೆ ನಾನು ಹಲವು ಬಾರಿ ಪತ್ರ ಬರೆದು ಸಲಹೆ ನೀಡಿದ್ದೇನೆ. ಆದರೆ ಅವರು
ಪತ್ರಗಳಿಗೆ ಪ್ರತಿಕ್ರಿಯಿಸಿದ್ದರೂ ಅವರ ಪ್ರತಿಕ್ರಿಯೆ ಗಳು ಅನುಷ್ಠಾನವಾಗುತ್ತಿಲ್ಲ ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದೇ ಮಾದರಿಯ ತರಕಾರಿ, ಹಣ್ಣುಗಳನ್ನು
ಬೆಳೆಯುವುದಿಲ್ಲ. ಯಾವ ಜಿಲ್ಲೆಗಳಲ್ಲಿ ಯಾವ ತರಕಾರಿ, ಹಣ್ಣುಗಳನ್ನು ಬೆಳೆಯ ಲಾಗಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತರಕಾರಿ, ಹಣ್ಣು ಸಾಗಣೆ ಮಾಡಿ ಮಾರಾಟ ಮಾಡಿಸುವುದು ಕಷ್ಟವೇನೂ ಆಗುತ್ತಿರಲಿಲ್ಲ. ಇದಕ್ಕೆ ರಾಜ್ಯ ಮಟ್ಟದಲ್ಲಿಯೇ ಒಬ್ಬ ದಕ್ಷ ಅಧಿಕಾರಿ ನೇಮಿಸಿ ಆಯಾ ಜಿಲ್ಲಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ರೈತರಿಗೆ ನೆರವಾಗ ಬಹುದಿತ್ತು. ಆದರೆ ಆ ಕೆಲಸ ಇದುವರೆಗೂ ಆಗಿಲ್ಲ ಎಂಬುದು ಬೇಸರ ಸಂಗತಿ ಎಂದರು.
ಸರ್ಕಾರ ಜನರ ನೆರವಿಗೆ ಬರಲೇ ಬೇಕು. ಸಂಕಷ್ಟದ ಸಮಯದಲ್ಲಿ ರೈತರು, ಬಡವರ ನೆರವಿಗೆ ಬರುವುದು ಸರ್ಕಾರದ ಜವಾ ಬ್ದಾರಿ. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿ ಎಂದು ನಾನು ಆಶಿಸುವೆ ಎಂದರು. ಪ್ರಧಾನ ಮಂತ್ರಿಗೂ ನಾನು ಪತ್ರ ಬರೆದಿದ್ದೆ. ಅವರು ಆ ಪತ್ರಗಳನ್ನು ಗಮನಿಸಿದ್ದರೆ ಸಾಕು. ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಗೂಡ್ಸ್ ರೈಲು, ಕಾರ್ಗೋ ವಿಮಾನಗಳ ಮೂಲಕ ಸಾಗಿಸುವ ಮೂಲಕ ರೈತರಿಗೆ ನೆರವಾಗ ಬೇಕು ಎಂದರು.