ಹೆದ್ದಾರಿಯಲ್ಲಿ ಮತ್ತೆ ಕಾಡಾನೆ ಪುಂಡಾಟ
Team Udayavani, Mar 21, 2021, 7:12 PM IST
ಸಕಲೇಶಪುರ: ಏಕಾಏಕಿ ಕಾರಿನ ಮೇಲೆ ಒಂಟಿಸಲಗವೊಂದು ದಾಳಿ ನಡೆಸಲು ಮುಂದಾದ ಘಟನೆ ತಾಲೂಕಿನ ಶಿರಾಡಿ ಘಾಟ್ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ನ ಕೆಂಪು ಹಳ್ಳದ ಬಳಿ ಒಂಟಿಸಲಗ ಹೆದ್ದಾರಿಯಲ್ಲಿ ಸಂಚರಿಸು ತ್ತಿದ್ದ ಕಾರಿನ ಮೇಲೆ ದಾಳಿ ನಡೆಸಲು ಮುಂದಾಗಿದೆ. ತಕ್ಷಣ ಚಾಲಕ ಕಾರು ಸೈಡಿಗೆ ತೆಗೆದು ಕೊಂಡಿದ್ದರಿಂದ ಕೂದಲೆಳೆ ಅಂತರದಿಂದ ಪ್ರಾಣಾಪಯದಿಂದ ಪಾರಾಗಿದ್ದಾನೆ.
15 ದಿನಗಳಿಂದ ಹೆದ್ದಾರಿ ಪಕ್ಕದಲ್ಲೇ ಬೀಡುಬಿಟ್ಟರುವ ಒಂಟಿಸಲಗ ವಾಹನ ಸವಾರರು, ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ಕೆಲ ದಿನಗಳ ಹಿಂದಷ್ಟೇ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದ ರಾಜಸ್ಥಾನ್ ಮೂಲದ ಲಾರಿ ಚಾಲಕ ವಕೀಲ್ ಎಂಬಾತನನ್ನು ಇದೇ ಕಾಡಾನೆ ಬಲಿ ತೆಗೆದುಕೊಂಡಿತ್ತು. ಇದಾದ ನಂತರ ಹಲವು ಬಾರಿ ಹೆದ್ದಾರಿಗೆ ಕಾಡಾನೆ ಬರುತ್ತಿದ್ದು, ಕೂಡಲೇ ಆನೆಯನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.